ಕೆರೆ ಸಂಜೀವಿ ಯೋಜನೆಯಡಿ ರಾಜ್ಯಾದ್ಯಂತ ಕೆರೆಗಳ ಪುನಃಶ್ಚೇತನಕ್ಕೆ ಕ್ರಮ: ಸಚಿವ ಸಿ.ಟಿ.ರವಿ

Update: 2020-09-06 12:40 GMT

ಚಿಕ್ಕಮಗಳೂರು, ಸೆ.6: ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಗ್ರಾಮೀಣ ಜನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಸಮಾಜ ಮುಖಿಯಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ಇದು ಸಂಘವು ಸಮಾಜಕ್ಕೆ ನೀಡುತ್ತಿರುವ ಬಹುದೊಡ್ಡ ಕೊಡುಗೆಯಾಗಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.  

ತಾಲೂಕಿನ ಕರ್ತಿಕೆರೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ದೊಡ್ಡಕೆರೆ ಬಳಕೆದರರ ಸಂಘದ ಸಹಭಾಗಿತ್ವದಲ್ಲಿ ಕರ್ನಾಟಕ ಕೆರೆ ಸಂಜೀವಿನಿ ಕಾರ್ಯಕ್ರಮದಡಿಯಲ್ಲಿ ಕೆರೆಯನ್ನು ಅಭಿವೃದ್ಧಿ ಪಡಿಸಲು ದೊಡ್ಡಕೆರೆಯನ್ನು ಹಸ್ತಾಂತರಿಸಿ ಮಾತನಾಡಿದ ಅವರು, ಕೆರೆಗಳು ಹಳ್ಳಿಗಳ ಜೀವನಾಡಿಯಾಗಿವೆ. ಕೆರೆ ತುಂಬಿದಲ್ಲಿ ಇಡಿ ಊರೇ ಸಂಪತ್ಭರಿತವಾಗಲಿದೆ ಎಂಬ ಮಾತಿದೆ. ಅದರಂತೆ ಗ್ರಾಮೀಣ ಭಾಗದ ಕೆರೆಗಳು ಜನರ ಬದುಕಿನಲ್ಲಿ ಹೆಚ್ಚು ಮಹತ್ವ ಪಡೆದಿದ್ದು, ರಾಜ್ಯದಲ್ಲಿ ಬರಡು ಪ್ರದೇಶಗಳಲ್ಲಿರುವ ಕೆರೆಗಳನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. 

ಕೆರೆಗಳ ಸಮರ್ಪಕ ನಿರ್ವಹಣೆಗಾಗಿ ನೂತನವಾಗಿ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ನೂತನ ಪ್ರಾಧಿಕಾರವನ್ನು ರಚಿಸಲಾಗಿದೆ. ಇದರ ಮೂಲಕ ಕೆರೆಗಳನ್ನು ಅಭಿವೃದ್ಧಿ ಪಡಿಸುವ ಸಂಜೀವಿನಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದ ಅವರು, ರಾಜ್ಯಾದ್ಯಂತ ಸುಮಾರು 146 ಕೆರೆಗಳಲ್ಲಿ ಕೆರೆ ಬಳಕೆದಾರರ ಸಂಘವನ್ನು ರಚಿಸಿ ಕೆರೆಗಳ ಹೂಳೆತ್ತಿ ಪುನಃಶ್ಚೇತನಗೊಳಿಸಲಾಗುತ್ತಿದ್ದು, ಅದರಂತೆ ತಾಲೂಕಿನ ಕರ್ತಿಕೆರೆ ಗ್ರಾಮದಲ್ಲಿರುವ ದೊಡ್ಡಕೆರೆಯ ನಿರ್ವಹಣೆಯನ್ನು ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಗೆ ಹಸ್ತಾಂತರಿಸಲಾಗಿದೆ ಎಂದರು. 

ರಾಜ್ಯದಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಸಾಲ ಯೋಜನೆ, ಶುದ್ಧ ಗಂಗಾ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಮಹಿಳಾ ಸ್ವ-ಉದ್ಯೋಗ, ಕೃಷಿ, ಗುಡಿ ಕೈಗಾರಿಗೆಗಳಿಗೆ ಪ್ರೋತ್ಸಾಹ ಸೇರಿದಂತೆ ಹತ್ತಾರು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಗ್ರಾಮೀಣ ಜನತೆಯು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡುತ್ತಿದೆ ಎಂದರು.

ಕೆರೆ ಸಂರಕ್ಷಣಾ ಯೋಜನೆಯಡಿ ಪುರಾತನ ದೇವಾಲಯಗಳ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಧರ್ಮೋತ್ಥಾನ ಟ್ರಸ್ಟ್‍ಗೆ 10 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಈ ಮೂಲಕ ಪುರಾತತ್ವ ಇಲಾಖೆಗೆ ಸೇರಿದ ಹಳೆ ದೇವಾಲಯಗಳು, ಕಲ್ಯಾಣಿಗಳು, ಗೋಪುರಗಳನ್ನು ಸಂರಕ್ಷಿಸಲು ಯೋಜನೆ ರೂಪಿಸಲಾಗಿದೆ ಎಂದ ಅವರು, ಜಿಲ್ಲೆಯಲ್ಲಿ ಕಳಸಾಪುರ ಗ್ರಾಮದ ಕಳಸೇಶ್ವರ, ಮುತ್ತಿನಪುರದ ವಿರೂಪಾಕ್ಷೇಶ್ವರ, ಚೆನ್ನಕೇಶ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳ ಜೀರ್ಣೋದ್ಧಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು. 

ಈ ಸಂದರ್ಭದಲ್ಲಿ ವಿಧಾನಸಭಾ ಶಾಸಕ ಎಸ್.ಎಲ್.ಭೋಜೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ತಾಪಂ ಅಧ್ಯಕ್ಷೆ ಶುಭಾ ಸತ್ಯಮೂರ್ತಿ, ಜಿಪಂ ಉಪಾಧ್ಯಕ್ಷ ಬಿ.ಜಿ.ಸೋಮಶೇಖರಪ್ಪ, ಜಿ.ಪಂ.ಸದಸ್ಯರಾದ ಜಸಿಂತಾ ಅನಿಲ್ ಕುಮಾರ್, ಕವಿತಾ ಲಿಂಗರಾಜ್, ತಾಪಂ ಉಪಾಧ್ಯಕ್ಷೆ ಶಾರದ ಶಶಿಧರ್, ತಾ.ಪಂ ಸದಸ್ಯ ಜಯಣ್ಣ,  ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಶ್ರೀಹರಿ, ದೊಡ್ಡಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಆನಂದ್ ರಾಜ್ ಅರಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News