ಸಂಸತ್ತು ಅಧಿವೇಶನದಲ್ಲಿ ಒಂದು ಗಂಟೆ ಪ್ರಶ್ನೋತ್ತರ ಅವಧಿ ನಿಗದಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2020-09-06 13:21 GMT

ಹುಬ್ಬಳ್ಳಿ, ಸೆ. 6: ಲೋಕಸಭೆ ಅಧಿವೇಶನವನ್ನು ಸೆ.14 ರಿಂದ ಅ.1ರವರೆಗೆ ನಡೆಸಲು ತೀರ್ಮಾನ ಮಾಡಲಾಗಿದ್ದು, ಪ್ರಶ್ನೋತ್ತರ ವೇಳೆಯನ್ನು ಒಂದು ಗಂಟೆಗೆ ನಿಗದಿ ಮಾಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನ ಹರಡಿರುವ ಈ ಸಂದರ್ಭದಲ್ಲಿ ವಿಶಿಷ್ಠ ಅಧಿವೇಶನ ನಡೆಸಲು ತೀರ್ಮಾನಿಸಿದ್ದೇವೆ. ರಾಜ್ಯಸಭೆ, ಲೋಕಸಭೆ ಎರಡೂ ಕಡೆಗೂ ಅಧಿವೇಶನ ನಡೆಸುತ್ತೇವೆ. ಅಧಿವೇಶನಕ್ಕೆ ತೃಣಮೂಲ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಆದರೆ, ಪಶ್ಚಿಮ ಬಂಗಾಳ, ರಾಜಸ್ಥಾನದಲ್ಲಿ ಒಂದೇ ಒಂದು ಅಧಿವೇಶನ ನಡೆಸಿ ಎಲ್ಲ ಬಿಲ್ ಪಾಸ್ ಮಾಡಲಾಗಿದೆ ಎಂದು ಆರೋಪಿಸಿದರು.

ಚೆನ್ನಮ್ಮ ವೃತ್ತಕ್ಕೆ ಮೇಲುಸೇತುವೆ: ನಗರದ ಚೆನ್ನಮ್ಮ ವೃತ್ತದಲ್ಲಿ ಫ್ಲೈಒವರ್ ನಿರ್ಮಾಣಕ್ಕೆ ಈಗಾಗಲೇ ಕೇಂದ್ರ ಸರಕಾರ ಆದೇಶ ಮಾಡಿದೆ. ಮೊದಲ ಹಂತದಲ್ಲಿ 300 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ನಿರ್ಧರಿಸಿದ್ದೇವೆ. ಇದು ಭಾರತ ಸರಕಾರಕ್ಕೆ ಸೇರಿದ ರಸ್ತೆ ಅಲ್ಲದಿದ್ರೂ ವಿಶೇಷ ಕಾಳಜಿ ಮೂಲಕ ಯೋಜನೆಗೆ ಆದೇಶಿಸಲಾಗಿದೆ. ಟ್ರಾಫಿಕ್ ಫ್ರೀ ಹುಬ್ಬಳ್ಳಿ-ಧಾರವಾಡ ನಗರವನ್ನಾಗಿ ಮಾಡುತ್ತಿದ್ದೇವೆ. ಇದಕ್ಕಾಗಿ ಒಟ್ಟು 600 ಕೋಟಿಯ ಯೋಜನೆ ರೂಪುಗೊಳುತ್ತಿದೆ ಎಂದು ಮಾಹಿತಿ ನೀಡಿದರು.

'ಡ್ರಗ್ಸ್ ಪ್ರಕರಣ ಬೇಸರ ತಂದಿದೆ': ರಾಜ್ಯದ ಚಿತ್ರನಗರಿಯಲ್ಲಿ ಡ್ರಗ್ಸ್ ಪ್ರಕರಣ ಅತ್ಯಂತ ನೋವಿನ ಸಂಗತಿಯಾಗಿದ್ದು, ಇದರಲ್ಲಿ ಕೆಲವು ಪ್ರಭಾವಿಗಳು ಇದ್ದಾರೆ ಎಂಬ ವದಂತಿ ಇದೆ. ಯಾರೇ ಇರಲಿ ಕಠಿಣ ಕ್ರಮಕೈಗೊಳ್ಳಲು ಒತ್ತಾಯಿಸುತ್ತೇನೆ. ಗೃಹ ಸಚಿವರಿಗೂ ಈ ಬಗ್ಗೆ ಮಾತನಾಡಿದ್ದೇನೆ. ಅಲ್ಲದೇ ಅವಳಿ ನಗರದ ಪೊಲೀಸ್ ಆಯುಕ್ತರಿಗೂ ಗಾಂಜಾ ಹಾಗೂ ಕ್ರೈಂ ಕಂಟ್ರೋಲ್ ಮಾಡಲು ಹೇಳಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News