ರಾಜ್ಯದಲ್ಲಿ ಪ್ರವಾಹ: ಕೋಟ್ಯಂತರ ರೂ. ಮೌಲ್ಯದ ಆಸ್ತಿಗಳು ನಾಶ

Update: 2020-09-07 15:48 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.7: ರಾಜ್ಯದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಕಳೆದ ಬಾರಿಯ ಅತಿವೃಷ್ಟಿಯಿಂದ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ನೆರೆಗೆ ಸಾಕ್ಷಿಯಾಗಿದೆ. ಮಳೆಯ ಆರ್ಭಟದಿಂದ ಉಂಟಾದ ಪ್ರವಾಹಕ್ಕೆ ಹಲವೆಡೆ ಕೋಟ್ಯಂತರ ಮೌಲ್ಯದ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ.

ರಾಜ್ಯದೆಲ್ಲೆಡೆ ಈ ಬಾರಿಯೂ ವರುಣ ಅಬ್ಬರಿಸಿದ್ದಾನೆ. ಪ್ರವಾಹ, ಭೀಕರ ಮಳೆಯಿಂದಾಗಿ ಲೋಕೋಪಯೋಗಿ ಇಲಾಖೆ ರಸ್ತೆ, ಸೇತುವೆಗಳು, ಕಟ್ಟಡಗಳು ಕೊಚ್ಚಿ ಹೋಗಿವೆ. ಪಿಡಬ್ಲ್ಯೂಡಿ ವ್ಯಾಪ್ತಿಯ 2,036 ಕೋಟಿ ಮೊತ್ತದ ರಸ್ತೆ, ಸೇತುವೆ ಹಾಗೂ ಕಟ್ಟಡಗಳು ಹಾನಿಗೊಳಗಾಗಿವೆ. ತುರ್ತಾಗಿ ದುರಸ್ತಿ ಕಾಮಗಾರಿಗೆ ಸುಮಾರು 481 ಕೋಟಿ ರೂ. ಅನುದಾನ ಅಗತ್ಯವಿದೆ.

ಜಿಲ್ಲಾವಾರು ಹಾನಿಯ ಮಾಹಿತಿ: ಲೋಕೋಪಯೋಗಿ ಇಲಾಖೆಯ ಅಂಕಿ-ಅಂಶದ ಪ್ರಕಾರ ಉತ್ತರ 1,437 ಕೋಟಿ, ಕೇಂದ್ರ 315 ಕೋಟಿ, ದಕ್ಷಿಣ 181 ಕೋಟಿ, ಈಶಾನ್ಯ ವಲಯದಲ್ಲಿ 71 ಕೋಟಿ ರೂಪಾಯಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ 34.97 ಕೋಟಿ ರೂಪಾಯಿ ವೆಚ್ಚದ ರಸ್ತೆ, ಸೇತುವೆ ಹಾಗೂ ಕಟ್ಟಡಗಳು ಮಣ್ಣುಪಾಲಾಗಿವೆ. ಒಟ್ಟು 22.38 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಹಾನಿಗೀಡಾಗಿದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News