ಬೇಡಿಕೆ ಈಡೇರದಿದ್ದರೆ ಬೆಂಗಳೂರು ಚಲೋ: ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ ಅತಿಥಿ ಉಪನ್ಯಾಸಕರು

Update: 2020-09-08 17:00 GMT

ಶಿವಮೊಗ್ಗ, ಸೆ.08: ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಹೋರಾಟ 9ನೇ ವಾರಕ್ಕೆ ಮುಂದುವರಿದಿದೆ. ನಮ್ಮ ನ್ಯಾಯಯುತ ಬೇಡಿಕೆ ಈಡೇರದಿದ್ದರೆ ಬೆಂಗಳೂರು ಚಲೋ ಮಾಡಲಾಗುವುದು ಎಂದು ಅತಿಥಿ ಉಪನ್ಯಾಸಕರು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಅತಿಥಿ ಉಪನ್ಯಾಸಕರು ಉದ್ಯೋಗ ಭದ್ರತೆಗಾಗಿ ಆಗ್ರಹಿಸಿ ಪ್ರತಿ ಮಂಗಳವಾರ ಪ್ರತಿಭಟನೆ ಮಾಡುತ್ತಾ ಬಂದಿದ್ದಾರೆ. ಆದರೆ ಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಾರಿಯ ಶಿಕ್ಷಕ ದಿನಾಚರಣೆಯಂತೂ ನಮ್ಮ ಪಾಲಿಗೆ ಕರಾಳ ದಿನವಾಗಿತ್ತು. ಸರ್ಕಾರ ಕನಿಷ್ಠ ಪಕ್ಷ ನಮ್ಮ ಮಾನವೀಯ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಪ್ರತಿಭಟಕಾರರು ತಮ್ಮ ಅಳಲನ್ನು ತೋಡಿಕೊಂಡರು.

ಎಷ್ಟು ವರ್ಷಗಳ ಕಾಲ ನಾವು ಹೋರಾಟ ಮಾಡಬೇಕು. ನಮಗೆ ಬರಬೇಕಾಗಿರುವ ಬಾಕಿ ವೇತನ, ಲಾಕ್‌ಡೌನ್ ಅವಧಿಯ ವೇತನ, ಉದ್ಯೋಗ ಭದ್ರತೆ ಇವೆಲ್ಲವೂ ಸಿಗುವುದು ಯಾವಾಗ. ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕರ ಗತಿ ಏನು ಎಂದು ಪ್ರತಿಭಟನಾ ನಿರತ ಉಪನ್ಯಾಸಕರು ಪ್ರಶ್ನೆ ಮಾಡಿದರು.

ಸರ್ಕಾರ ನಮಗೆ ನೀಡಬೇಕಾಗಿರುವುದು ಭಿಕ್ಷೆಯಲ್ಲ. ದಶಕಗಳಿಂದ ಕನಿಷ್ಠ ವೇತನಕ್ಕೆ ದುಡಿದು ಸಾವಿರಾರು ಕೋಟಿ ರೂ. ಸರ್ಕಾರದ ಬೊಕ್ಕಸಕ್ಕೆ ಉಳಿತಾಯ ಮಾಡಿಕೊಟ್ಟಿದ್ದೇವೆ. ನಮ್ಮೆಲ್ಲ ನೋವನ್ನು ನುಂಗಿ ಇದುವರೆಗೂ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸಲು ಶ್ರಮಿಸುತ್ತಿದ್ದೇವೆ. ಈ ಎಲ್ಲ ಸತ್ಯ ಗೊತ್ತಿರುವ ಸರ್ಕಾರ ಮತ್ತು ಇಲಾಖೆ ನಮ್ಮತ್ತ ಗಮನ ನೀಡುತ್ತಿಲ್ಲ ಎಂದು ದೂರಿದರು.

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆ ರದ್ದು ಪಡಿಸಿ ಈಗಾಗಲೇ ಸೇವೆಯಲ್ಲಿರುವ ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭದ್ರತೆ ನೀಡಬೇಕು. ಆತ್ಮಹತ್ಯೆ ಮಾಡಿಕೊಂಡ ಅತಿಥಿ ಉಪನ್ಯಾಸಕರಿಗೆ 10 ಲಕ್ಷ ರೂ. ಪರಿಹಾರಧನ ನೀಡಬೇಕು ಎಂದು ಆಗ್ರಹಿಸಿದರು.

ಸರ್ಕಾರ ಇನ್ನಾದರೂ ಕೂಡಲೇ ಅತಿಥಿ ಉಪನ್ಯಾಸಕರ ಸಂಕಷ್ಟಕ್ಕೆ ಧಾವಿಸಿ ಉಪನ್ಯಾಸಕರ ಮಾನವೀಯ ಬೇಡಿಕೆಗಳನ್ನು ಬಗೆಹರಿಸಲು ಮುಂದಾಗದಿದ್ದರೆ ವಿನೂತನ ಮಾದರಿಯ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಸಿದ್ಧವಾಗಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ಡಾ.ಎಸ್.ಸೋಮಶೇಖರ, ಪ್ರಮುಖರಾದ ಸತೀಶ್, ಧನಂಜಯ, ರೂಪ, ಗಣಪತಿ, ಶಿವಪ್ರಸಾದ್, ವಿವಿಧ ಸಂಘಟನೆಗಳ ಮುಖಂಡರಾದ ಹಾಲೇಶಪ್ಪ, ನಾಗರಾಜ್ ಕಾಗಿನೆಲ್ಲಿ, ಮಂಜುನಾಥ್, ಹಾಲೇಶ್ ತಮ್ಮಡಿಹಳ್ಳಿ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News