ಬೈಕ್- ಕಾರುಗಳ ನಡುವೆ ಸರಣಿ ಅಪಘಾತ: ದಂಪತಿ ಮೃತ್ಯು, ಹತ್ತು ಮಂದಿಗೆ ಗಾಯ

Update: 2020-09-13 17:02 GMT

ಮಂಡ್ಯ, ಸೆ.13: ಎರಡು ಕಾರು ಮತ್ತು ಒಂದು ಬೈಕ್‌ಗಳ ನಡುವೆ ನಡೆದ ಸರಣಿ ಅಪಘಾತದಲ್ಲಿ ರಾಮನಗರ ಜಿಲ್ಲೆ ಚನ್ನಪಟ್ಟಣದ ಕನ್ನಡ ಪ್ರಾಧ್ಯಾಪಕ ಮಧುಸೂಧನ್ ಜೋಷಿ ಮತ್ತು ಅವರ ಪತ್ನಿ ಗಂಗಾ ಜೋಷಿ ಸಾವನ್ನಪ್ಪಿದ ಘಟನೆ ಮಳವಳ್ಳಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 209ರ ದಾಸನದೊಡ್ಡಿ ಗ್ರಾಮದ ರವಿವಾರ ನಡೆದಿದೆ.

ಚನ್ನಪಟ್ಟಣದಿಂದ ಕಾರಿನಲ್ಲಿ ಗಂಗಾ ಜೋಷಿ, ಮಧುಸೂದನ್ ಜೋಷಿ ಮತ್ತು ಅವರ ಮಗಳು ಅನುಷಾ ಮಳವಳ್ಳಿ ತಾಲೂಕಿನ ಶಿವನಸಮುದ್ರದ ಗಗನಚುಕ್ಕಿ ಜಲಪಾತ ವೀಕ್ಷಣೆಗೆ ಹೋಗುತ್ತಿದ್ದ ವೇಳೆ ಸರಣಿ ಅಪಘಾತವಾಗಿದೆ. ಘಟನೆಯಲ್ಲಿ ಎರಡು ಕಾರುಗಳು ನುಜ್ಜುಗುಜ್ಜಾಗಿದ್ದು, ಬೈಕ್ ಮತ್ತು ಕಾರಿನಲ್ಲಿದ್ದ ಹತ್ತು ಜನರಿಗೆ ಗಾಯವಾಗಿದೆ. ಗಂಗಾ ಜೋಷಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಧುಸೂದನ್ ಜೋಷಿ ಅವರ ಸ್ಥಿತಿ ಗಂಭೀರವಾಗಿದ್ದು, ಕೆ.ಎಂ.ದೊಡ್ಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಜೋಷಿ ಪುತ್ರಿ ಅನುಷಾ ಸಣ್ಣಪುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಳವಳ್ಳಿ ಗ್ರಾಮಾಂತರ ಮತ್ತು ಬೆಳಕವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಧುಸೂಧನ ಜೋಷಿ ಮತ್ತು ಗಂಗಾ ಜೋಷಿ ಅವರ ಅಂತ್ಯಕ್ರಿಯೆ ಸೋಮವಾರ ಚನ್ನಪಟ್ಟಣದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News