ಸೆ.19ರಂದು ರಾಜ್ಯಾದ್ಯಂತ ಇ-ಲೋಕ ಅದಾಲತ್: ಸೇವೆ ಬಳಸಿಕೊಳ್ಳಲು ಕೋರಿದ ಕೆಎಸ್‍ಎಲ್‍ಎಸ್‍ಎ

Update: 2020-09-14 16:56 GMT

ಬೆಂಗಳೂರು, ಸೆ.14: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸೆ.19ರಂದು ರಾಜ್ಯಾದ್ಯಂತ ಇ-ಲೋಕ ಅದಾಲತ್ ಹಮ್ಮಿಕೊಂಡಿದ್ದು, ಸೇವೆಯನ್ನು ಬಳಸಿಕೊಳ್ಳಲು ವಕೀಲರು ಹಾಗೂ ಕಕ್ಷೀದಾರರು ಮುಂದಾಗಬೇಕೆಂದು ಕೆಎಸ್‍ಎಲ್‍ಎಸ್‍ಎ ಸದಸ್ಯ ಕಾರ್ಯದರ್ಶಿಯೂ ಆದ ನ್ಯಾ. ಎಚ್. ಶಶಿಧರ ಶೆಟ್ಟಿ ಅವರು ಮನವಿ ಮಾಡಿದ್ದಾರೆ.

ಸೆಪ್ಟೆಂಬರ್ 19ರಂದು ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ಮೆಗಾ ಇ-ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಈ ಜನತಾ ನ್ಯಾಯಾಲಯಗಳಲ್ಲಿ ಸಾರ್ವಜನಿಕರು ನ್ಯಾಯಾಲಯಗಳಲ್ಲಿ ಬಾಕಿ ಇರುವ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಅಥವಾ ತಾಲೂಕು ಕಾನೂನು ಸೇವಾ ಸಮಿತಿಗಳಿಗೆ ನೇರವಾಗಿ ಭೇಟಿ ನೀಡಿ ಪಡೆದುಕೊಳ್ಳಬಹುದು. ಹಾಗೆಯೇ ಪ್ರಾಧಿಕಾರದಿಂದ ಆನ್‍ಲೈನ್ ಮೂಲಕ, ವಿಡಿಯೋ ಕಾನ್ಫರೆನ್ಸ್ ಮೂಲಕ ಅಥವಾ ಇ-ಮೇಲ್, ವಾಟ್ಸಾಪ್ ಮೂಲಕವೂ ಪಡೆದುಕೊಳ್ಳಬಹುದು ಎಂದು ಕೆಎಸ್‍ಎಲ್‍ಎಸ್‍ಎ ತಿಳಿಸಿದೆ.

ಪರಿಷತ್ ಮನವಿ: ಮೆಗಾ ಇ-ಲೋಕ ಅದಾಲತ್ ಯಶಸ್ವಿಗೊಳಿಸಲು ವಕೀಲರು ಮತ್ತು ಕಕ್ಷೀದಾರರು ಕೈಜೋಡಿಸಬೇಕು ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಹಿರಿಯ ಸದಸ್ಯರಾದ ಎಸ್. ಬಸವರಾಜು ಅವರು ಕೋರಿದ್ದಾರೆ. ಸೆ.19ರಂದು ರಾಜ್ಯದ 1072 ಕೋರ್ಟ್ ಗಳಲ್ಲಿ ಇ-ಲೋಕ ಅದಾಲತ್ ನಡೆಯಲಿದೆ. ಮೋಟಾರು ವಾಹನ ಪ್ರಕರಣಗಳು ಸೇರಿದಂತೆ ಸಾವಿರಾರು ಪ್ರಕರಣಗಳು ಇತ್ಯರ್ಥಕ್ಕಾಗಿ ನಿಗದಿಯಾಗಿವೆ.

ಶೀಘ್ರ ನ್ಯಾಯದಾನ ಕಕ್ಷಿದಾರನ ಮೂಲಭೂತ ಹಕ್ಕು ಹಾಗೂ ವಕೀಲರ ಕರ್ತವ್ಯ. ಹಾಗೆಯೇ, ರಾಜ್ಯದ ಸಾಂವಿಧಾನಿಕ ಹೊಣೆಗಾರಿಕೆ ಹೌದು. ಇ-ಲೋಕ ಅದಾಲತ್ ಪ್ರಕರಣಗಳ ಇತ್ಯರ್ಥಕ್ಕೆ ಅವಕಾಶ ಕಲ್ಪಿಸುವುದಷ್ಟೇ ಅಲ್ಲ, ಬಡ ಕಕ್ಷಿದಾರರ ಮನೆ ಬಾಗಿಲಿಗೆ ಖರ್ಚಿಲ್ಲದೇ ಶೀಘ್ರ ನ್ಯಾಯದಾನ ಒದಗಿಸುವಂತಹ ಉದಾತ್ತ ಆಲೋಚನೆ ಹೊಂದಿದೆ. ಇಂತಹ ಸಂಕಲ್ಪಕ್ಕೆ ಎಲ್ಲರೂ ಕೈ ಜೋಡಿಸಬೇಕು ಮತ್ತು ಈ ಪ್ರಯತ್ನಕ್ಕೆ ತುಂಬು ಹೃದಯದ ಸಹಕಾರ ನೀಡಬೇಕು ಎಂದು ಎಸ್.ಬಸವರಾಜು ವಕೀಲರಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News