ಡ್ರಗ್ಸ್ ದಂಧೆ ಎಲ್ಲ ಕ್ಷೇತ್ರಗಳನ್ನೂ ಆವರಿಸಿದೆ: ಸಚಿವ ಬಿ.ಸಿ.ಪಾಟೀಲ್
ಬೆಳಗಾವಿ, ಸೆ.14: ಡ್ರಗ್ಸ್ ದಂಧೆ ದೇಶದ ಸಿನಿಮಾ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತಗಳನ್ನೂ ಆವರಿಸಿಕೊಂಡಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಸೋಮವಾರ ಬೆಳಗಾವಿ ನಗರದ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ದಂಧೆಯಲ್ಲಿ ಯಾರ್ಯಾರು ಪಾಲ್ಗೊಂಡಿದ್ದಾರೆ ಎಂಬುದರ ಬಗ್ಗೆ ತನಿಖೆಯಿಂದ ಗೋತ್ತಾಗಲಿದೆ. ಸಿಸಿಬಿ ಪೊಲೀಸರು ಸದ್ಯ ಕೆಲ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ, ಉಳಿದ ಆರೋಪಿಗಳನ್ನೂ ಬಂಧಿಸುವ ಮೂಲಕ ನಶೆ ದಂಧೆಗೆ ಕಡಿವಾಣ ಹಾಕಲಿದ್ದಾರೆ ಎಂದು ಹೇಳಿದರು.
ಮಾದಕ ವಸ್ತುಗಳನ್ನು ಸೇವನೆ ಮಾಡಿದರೆ, ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮ ಬೀರಲಿದೆ. ಇದರಿಂದ, ದೂರವಿದ್ದು, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಬಿ.ಕೆ.ಹರಿಪ್ರಸಾದ್ ಹೇಳಿಕೆ ಸತ್ಯಕ್ಕೆ ದೂರವಾದ ಮಾತಾಗಿದೆ. ಬಿಜೆಪಿ ಪಕ್ಷದ ಮುಖಂಡರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎನ್ನುವುದಕ್ಕೆ ಅವರಲ್ಲಿ ಏನಾದರೂ ಪುರಾವೆ ಇದೆಯೆ ಎಂದು ಪ್ರಶ್ನಿಸಿದ ಅವರು, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಗೆ ಕಾಂಗ್ರೆಸ್ ಪಕ್ಷವೇ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣವಾಗಿದೆ ಎಂದು ಆರೋಪಿಸಿದರು.
ನನ್ನ ಸರಕಾರ ಬೀಳಲು ಡ್ರಗ್ಸ್ ಮಾಫಿಯೂ ಕಾರಣ ಎಂದು ಹೇಳುವ ಎಚ್.ಡಿ.ಕುಮಾರಸ್ವಾಮಿ ಅವರೊಬ್ಬ ಸೀಸನಲ್ ರಾಜಕಾರಣಿಯಾಗಿದ್ದಾರೆ. ಸೀಸನ್ಗೆ ಅನುಸಾರವಾಗಿ ಹೇಳಿಕೆ ನೀಡುತ್ತಾರೆ. ಅವರ ಬಳಿ ಯಾವುದಾದರೂ ದಾಖಲೆ ಇದ್ದರೆ ಕೊಡಲಿ. ವರ್ಷವಾದ ಮೇಲೆ ಹೇಳುತ್ತಿದ್ದಾರೆ ಎಂದು ಟೀಕಿಸಿದರು.