ಯಾವುದೇ ಭಾಷೆಯನ್ನು ಹೇರಬಾರದು, ವಿರೋಧಿಸಬಾರದು: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು
ಹೊಸದಿಲ್ಲಿ, ಸೆ.14: ಎಲ್ಲ ಭಾಷೆಗಳಿಗೂ ಸಮಾನ ಗೌರವ ನೀಡಬೇಕು ಮತ್ತು ಯಾವುದೇ ಭಾಷೆಯನ್ನು ಹೇರಬಾರದು ಅಥವಾ ವಿರೋಧಿಸಬಾರದು ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಸೋಮವಾರ ‘ಹಿಂದಿ ದಿವಸ್-2020’ ಅಂಗವಾಗಿ ಮಧುಬನ್ ಎಜುಕೇಷನಲ್ ಬುಕ್ಸ್ ಆಯೋಜಿಸಿದ್ದ ಆನ್ಲೈನ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಉಪ ರಾಷ್ಟ್ರಪತಿ, ನಮ್ಮ ಎಲ್ಲ ಭಾಷೆಗಳಿಗೆ ಶ್ರೀಮಂತ ಇತಿಹಾಸವಿದೆ ಮತ್ತು ನಮ್ಮ ಭಾಷಾ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಪರಂಪರೆಯ ಬಗ್ಗೆ ನಾವು ಹೆಮ್ಮೆ ಪಡಬೇಕು ಎಂದರು.
ಮಹಾತ್ಮ ಗಾಂಧೀಜಿ 1918ರಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾವನ್ನು ಸ್ಥಾಪಿಸಿದ್ದನ್ನು ಪ್ರಸ್ತಾಪಿಸಿದ ಉಪರಾಷ್ಟ್ರಪತಿ, ಹಿಂದಿ ಮತ್ತು ಇತರ ಭಾರತೀಯ ಭಾಷೆಗಳನ್ನು ಪರಸ್ಪರ ಪೂರಕವಾಗಿ ನೋಡಬೇಕು ಎಂದು ಒತ್ತಿ ಹೇಳಿದರು.
ನಾಗರಿಕರಲ್ಲಿ ಪರಸ್ಪರ ಅಭಿಮಾನ, ಪ್ರೀತಿ ಮತ್ತು ವಾತ್ಸಲ್ಯವನ್ನು ಹೆಚ್ಚಿಸಲು, ಹಿಂದಿಯೇತರ ರಾಜ್ಯಗಳ ವಿದ್ಯಾರ್ಥಿಗಳು ಹಿಂದಿ ಕಲಿಯಬೇಕು ಮತ್ತು ಹಿಂದಿ ಮಾತನಾಡುವ ರಾಜ್ಯಗಳ ವಿದ್ಯಾರ್ಥಿಗಳು ತಮಿಳು, ತೆಲುಗು, ಕನ್ನಡ ಮುಂತಾದ ಒಂದು ಭಾರತೀಯ ಭಾಷೆಯನ್ನು ಕಲಿಯಬೇಕು ಎಂದು ಸಲಹೆ ನೀಡಿದರು.
ಹೊಸ ಶಿಕ್ಷಣ ನೀತಿ-2020 ರಲ್ಲಿ ಮಾತೃಭಾಷೆಗೆ ನೀಡಿರುವ ಪ್ರಾಮುಖ್ಯತೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಉಪ ರಾಷ್ಟ್ರಪತಿ, ಅಂತರ್ಗತ ಶಿಕ್ಷಣಕ್ಕಾಗಿ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಒದಗಿಸಬೇಕು. ಇದು ಮಕ್ಕಳಿಗೆ ವಿಷಯವನ್ನು ಉತ್ತಮವಾಗಿ ಕಲಿಯಲು ಮತ್ತು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅವರು ತಮ್ಮನ್ನು ತಾವು ಉತ್ತಮವಾಗಿ ರೂಪಿಸಿಕೊಳ್ಳಲು ನೆರವಾಗುತ್ತದೆ ಎಂದು ಅವರು ಹೇಳಿದರು.
ಮಾತೃಭಾಷೆಯಲ್ಲಿ ಶಿಕ್ಷಣಕ್ಕಾಗಿ ಹಿಂದಿ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಉತ್ತಮ ಪುಸ್ತಕಗಳ ಸುಲಭವಾಗಿ ಲಭ್ಯವಾಗಬೇಕಿದೆ. ಪ್ರಕಾಶನ ಸಂಸ್ಥೆಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲ ಭಾರತೀಯ ಭಾಷೆಗಳು ಒಟ್ಟಾಗಿ ಬೆಳೆಯುವ ಅಗತ್ಯವನ್ನು ವ್ಯಕ್ತಪಡಿಸಿದ ವೆಂಕಯ್ಯ ನಾಯ್ಡು, ನಮ್ಮ ಭಾಷೆಗಳ ನಡುವೆ ಸಂವಾದವನ್ನು ಹೆಚ್ಚಿಸಲು ಕೆಲಸ ಮಾಡುವಂತೆ ಪ್ರಕಾಶಕರು ಮತ್ತು ಶಿಕ್ಷಣ ತಜ್ಞರಿಗೆ ಕರೆ ನೀಡಿದರು.
ಮಧುಬನ್ ಎಜುಕೇಷನಲ್ ಬುಕ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ರಜ್ಲಾನಿ, ಎನ್ಸಿಇಆರ್ಟಿಯ ಪ್ರೊ.ಉಷಾ ಶರ್ಮಾ ಮತ್ತು ಪ್ರೊ.ಪವನ್ ಸುಧೀರ್, ಇಂದ್ರಪ್ರಸ್ಥ ವಿಶ್ವವಿದ್ಯಾಲಯದ ಪ್ರೊ.ಸರೋಜ್ ಶರ್ಮಾ ಉಪಸ್ಥಿತರಿದ್ದರು.