ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ: ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಜೊತೆ ಡಿಸಿಎಂ ಕಾರಜೋಳ ಸಮಾಲೋಚನೆ

Update: 2020-09-14 17:49 GMT

ಬೆಂಗಳೂರು. ಸೆ.14:  ಸಮಾಜ ಕಲ್ಯಾಣ ಇಲಾಖೆಯ ಕ್ರೈಸ್ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಪೂರ್ವಸಿದ್ಧತೆ ಕೈಗೊಳ್ಳುವ ಬಗ್ಗೆ ಶಿಕ್ಷಣ ತಜ್ಞ ಹಾಗೂ ಕ್ರೈಸ್ ಸಲಹೆಗಾರ ಡಾ.ಗುರುರಾಜ ಕರಜಗಿ ಅವರೊಂದಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸುಧೀರ್ಘವಾಗಿ ಚರ್ಚಿಸಿದರು.

ಸೋಮವಾರ ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯು ಯುವ ಪೀಳಿಗೆಗೆ ಅನುಗುಣವಾಗಿದ್ದು, ಇದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು. ಇದಕ್ಕೆ ಪೂರಕವಾಗಿ ಸಿದ್ಧತೆ ಮಾಡಿಕೊಂಡು ವಿದ್ಯಾರ್ಥಿಗಳು ಶೇ.100ರಷ್ಟು ಅತ್ಯುತ್ತಮ ಫಲಿತಾಂಶ ಪಡೆಯವಂತೆ ಕ್ರಮಜರುಗಿಸಬೇಕು. ಅಗತ್ಯ ಇರುವ ಶಿಕ್ಷಕರು, ಪ್ರಾಂಶುಪಾಲರು, ಶುಶ್ರೂಷಕರಿಗೆ ತರಬೇತಿ ನೀಡಬೇಕು ಎಂದರು.

ಕ್ರೈಸ್‍ನಲ್ಲಿ ಶೈಕ್ಷಣಿಕ ಘಟಕವನ್ನು ಪ್ರಾರಂಭಿಸಲು ಕ್ರಮಕೈಗೊಳ್ಳಲಾಗಿದೆ. ಈ ಘಟಕದ ಅಡಿಯಲ್ಲಿ ಲನಿರ್ಂಗ್ ಪ್ಯಾಕ್‍ಗಳನ್ನು ಸಿದ್ಧಪಡಿಸಲಾಗುವುದು. ಈ ಘಟಕಕ್ಕೆ ಬೇಕಾಗಿರುವ ಅಧಿಕಾರಿಗಳನ್ನು ನಿಯೋಜಿಸಿಕೊಂಡು ಕಾರ್ಯೋನ್ಮುಖವಾಗಬೇಕು. ಆನ್ ಲೈನ್ ಮೂಲಕ ವಿವಿಧ ತರಗತಿಗಳ ನಿರ್ವಹಣೆ ಮಾಡಲಾಗುವುದು. ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಶಿಕ್ಷಕರ ಪ್ರಗತಿಯನ್ನು ಟ್ರ್ಯಾಕ್ ಮಾಡುವ ಸಲುವಾಗಿ ಸೂಕ್ತತಂತ್ರಜ್ಞಾನದ ಬಳಕೆ ಮಾಡಲಾಗುವುದು ಎಂದು ಅವರು ಹೇಳಿದರು.

ಶಿಕ್ಷಕರ ಸಾಮರ್ಥ್ಯವನ್ನು ಹೆಚ್ಚಿಸುವ ದೆಸೆಯಲ್ಲಿ ವಿವಿಧ ತರಗತಿಗಳನ್ನು ಪ್ರಾರಂಭಿಸಲಾಗುವುದು. ಮಕ್ಕಳ ಕಲಿಕೆಯನ್ನು ಸಂಪನ್ನ ಗೊಳಿಸಲು ಪ್ರತಿ ವಿದ್ಯಾರ್ಥಿಯ ಕಲಿಕೆಯ ಗತಿಯನ್ನು ಅರಿತು ನಿರ್ದಿಷ್ಟ ಶೈಕ್ಷಣಿಕ ಒತ್ತಾಸೆ ನೀಡಲು ಅಗತ್ಯ ಕ್ರಮ, ಮೇಲ್ವಿಚಾರಣೆ ತಂತ್ರಾಂಶವನ್ನು ಪರಿಶೀಲಿಸಿ ಉನ್ನತೀಕರಣ, ಶಿಕ್ಷಕರ ಕಾರ್ಯ ಕ್ಷಮತೆ ಗುರುತಿಸಿ ಪ್ರೋತ್ಸಾಹಿಸುವಿಕೆ ಮತ್ತಿತರ ವಿಷಯಗಳ ಕುರಿತು ಯೋಜಿಸಿ ಕ್ರಮಜರುಗಿಸಬೇಕು ಎಂದು ಕ್ರೈಸ್ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಉಪ ಮುಖ್ಯಮಂತ್ರಿ ಸೂಚಿಸಿದರು.

ಡಾ. ಗುರುರಾಜ ಕರಜಗಿ ಮಾತನಾಡಿ, ವಸತಿ ಶಾಲೆಗಳ ಪ್ರಾಂಶುಪಾಲರೊಂದಿಗೆ ಇಂದು ಸಭೆ ನಡೆಸಿ, ಅವರ ಅಭಿಪ್ರಾಯ ಸಂಗ್ರಹಿಸಿ, ಸೂಕ್ತ  ಸಲಹೆ ಸೂಚನೆ ನೀಡಲಾಗಿದೆ. ವಸತಿ ಶಾಲೆಗಳ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಕ್ರೈಸ್ ಕಾರ್ಯನಿರ್ವಾಹಕ ನಿರ್ದೇಶಕ ರಾಘವೇಂದ್ರ, ಡಿಸಿಎಂ ಅವರ ಆಪ್ತಕಾರ್ಯದರ್ಶಿ ವಿ.ಶ್ರೀನಿವಾಸ್, ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News