ಉದ್ಯೋಗ ಮಾರುಕಟ್ಟೆಗೆ ತಕ್ಕಂತೆ ಕೌಶಲ್ಯಾಭಿವೃದ್ಧಿ: ದಾಂಡೇಲಿಯ ಜಿಟಿಟಿಸಿ ಕೇಂದ್ರಕ್ಕೆ ಚಾಲನೆ ನೀಡಿದ ಡಿಸಿಎಂ

Update: 2020-09-15 12:20 GMT

ಬೆಂಗಳೂರು, ಸೆ.15: ಹೊಸ ಹೊಸ ರೀತಿಯಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡಲು ಸರಕಾರ ಹತ್ತು ಹಲವು ಕ್ರಮಗಳನ್ನು ಕೈಗೊಂಡಿದ್ದು, ಉದ್ಯೋಗ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಸ್ಥಾಪಿಸಲಾಗಿರುವ ಜಿಟಿಟಿಸಿ ಕೇಂದ್ರವನ್ನು ಮಂಗಳವಾರ ಆನ್ ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಈ ಕೇಂದ್ರದ ಮೂಲಕ ರಾಜ್ಯದ ವಾಯುವ್ಯ ಭಾಗದ ಯುವಜನರಿಗೆ ಉತ್ತಮ ಗುಣಮಟ್ಟದ ತರಬೇತಿ ಸಿಗುವುದರ ಜತೆಗೆ, ಉತ್ತಮ ರೀತಿಯಲ್ಲಿ ಉದ್ಯೋಗಾವಕಾಶಗಳೂ ಸಿಗಲಿವೆ ಎಂದರು.

ಕೌಶಲ್ಯಾಭಿವೃದ್ಧಿ ಎಂದರೆ ಉತ್ತಮ ಗುಣಮಟ್ಟದ ತರಬೇತಿ ಸಿಗಬೇಕಾಗುತ್ತದೆ. ಅದರಲ್ಲೂ ಯುವಜನರಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡುವುದರ ಜತೆಗೆ, ಅದಕ್ಕೆ ಸರಿಹೊಂದುವ ಮಾರ್ಗದರ್ಶನವನ್ನೂ ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಒಳ್ಳೆಯ ದಿನ ಒಳ್ಳೆಯ ಕೆಲಸ: ಜಗತ್ತು ಕಂಡ ಸರ್ವಶ್ರೇಷ್ಠ ಇಂಜಿನಿಯರ್ ಗಳಲ್ಲಿ ಒಬ್ಬರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಅವರ ಹುಟ್ಟಿದ ದಿನವಾದ ಇಂದು ನಾವು ಎಂಜಿನಿಯರುಗಳ ದಿನವೆಂದು ಆಚರಿಸುತ್ತೇವೆ. ಇಂಥ ಒಳ್ಳೆಯ ದಿನದಂದು ಜಿಟಿಟಿಸಿ ಕೇಂದ್ರವನ್ನು ಆರಂಭ ಮಾಡಿದ್ದು ಅತ್ಯಂತ ಅರ್ಥಪೂರ್ಣವಾಗಿದೆ. ಬೆಳಗಾವಿ, ಉತ್ತರ ಕನ್ನಡ ಮುಂತಾದ ಪ್ರದೇಶಗಳಿಗೆ ಈ ಕೇಂದ್ರದಿಂದ ಹೆಚ್ಚಿನ ಪ್ರಯೋಜನ ಆಗಲಿ ಎಂದು ಅವರು ಹಾರೈಸಿದರು.

ಈ ವರ್ಚುವಲ್ ಕಾರ್ಯಕ್ರಮದಲ್ಲಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಶಿವರಾಮ್ ಹೆಬ್ಬಾರ್, ಮಾಜಿ ಸಚಿವ ಹಾಗೂ ಹಳಿಯಾಳದ ಶಾಸಕ ಆರ್.ವಿ. ದೇಶಪಾಂಡೆ, ಲೋಕಸಭೆ ಸದಸ್ಯ ಅನಂತಕುಮಾರ ಹೆಗಡೆ, ಅರವಿಂದ ಮೆಳ್ಳಗೇರಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಕರಿಸಿದ್ದಪ್ಪ ಮುಂತಾದವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News