ಮಗನನ್ನೇ ಕೊಲ್ಲಲು ಸುಪಾರಿ ಕೊಟ್ಟಿದ್ದ ತಂದೆ: ಹತ್ಯೆ ಪ್ರಕರಣ ಭೇದಿಸಿದ ಚನ್ನರಾಯಪಟ್ಟಣ ಪೊಲೀಸರು

Update: 2020-09-16 17:20 GMT

ಹಾಸನ. ಸೆ.16: ಹಳೆಯ ದ್ವೇಷದ ಹಿನ್ನಲೆಯಲ್ಲಿ ತಂದೆಯೇ ಸುಪಾರಿ ಕೊಟ್ಟು ತನ್ನ ಸ್ವಂತ ಮಗನನ್ನೆ ಕೊಲೆ ಮಾಡಿಸಿದ ಪ್ರಕರಣವನ್ನು ಭೇದಿಸಿ 6 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಚನ್ನರಾಯಪಟ್ಟಣ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ 1 ಲಕ್ಷದ 88 ಸಾವಿರ ರೂ., 5 ಬಂದೂಕು, ಒಂದು ಮಾರುತಿ ಓಮ್ನಿ, ಮೂರು ಬೈಕ್, ಐದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಕಳೆದ ತಿಂಗಳು 27ರಂದು ತಂದೆಯೇ ಸುಪಾರಿ ನೀಡಿ ಮಗನನ್ನು ಕೊಲೆ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಓರ್ವ ಆರೋಪಿ ನಾಗರಾಜ್ ಬಂದೂಕು ರಿಪೇರಿ ಮಾಡುವ ಲೈಸೆನ್ಸ್ ಹೊಂದಿದ್ದ. ಆರೋಪಿಗಳಾದ ತಂದೆ ಹೇಮಂತ್ (48) ಕಾಂತರಾಜು (52) ಸುನಿಲ್( 27) ಪ್ರಶಾಂತ್ (23 )ನಂದೀಶ್(28) ನಾಗರಾಜು( 65) ಎಂಬುವವರನ್ನು ಬಂಧಿಸಲಾಗಿದೆ ಎಂದರು.

ಇವರಿಂದ 1.88 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮಲೆನಾಡು ಭಾಗದ ಕಾಫಿ ತೋಟದ ಮಾಲಕರು ಹಾಗೂ ಶಿಕಾರಿ ಮಾಡಲು ಬಳಸುವ ಆರು ಬಂದೂಕುಗಳನ್ನು ಆರೋಪಿಗಳು ಬಳಸಿದ್ದು, ಇದನ್ನು ಬಂದೂಕು ರಿಪೇರಿ ಮಾಡುವ ಆರೋಪಿ ನಾಗರಾಜ್ ರಿಂದ ವಶಪಡಿಸಿಕೊಳ್ಳಲಾಗಿದೆ. ತಂದೆ ನೀಡಿದ ಸುಪಾರಿಗೆ ಪುನೀತ್ ನನ್ನು ಕೊಲೆ ಮಾಡಲು ಆರೋಪಿಗಳು ಕಳೆದ ಐದು ತಿಂಗಳುಗಳಿಂದಲೂ ಪುನೀತನ ಚಲನವಲನ ಹಾಗೂ ಇತರ ಮಾಹಿತಿಗಳನ್ನು ಕಲೆ ಹಾಕಿದ್ದರು. ಆರೋಪಿಗಳಿಗೆ ತಂದೆ ಹೇಮಂತ್ ಸುಪಾರಿ ಆಗಿ 2 ಲಕ್ಷ ರೂ. ನೀಡಲು ಒಪ್ಪಿದ್ದರು. ಮುಂಗಡವಾಗಿ ಸ್ವಲ್ಪ ಹಣ ನೀಡಲಾಗಿತ್ತು ಎಂದು ತಿಳಿಸಿದರು.

ತಂದೆ ಹೇಮಂತ್ ಮತ್ತು ಪುನೀತ್ ನಡುವೆ ಕೆಲ ವರ್ಷಗಳಿಂದ ವೈಷಮ್ಯ ಇತ್ತು. ಮೂರು ವರ್ಷಗಳಿಂದ ತಂದೆ ಮತ್ತು ಪುನೀತ್ ಬೇರೆಯಾಗಿದ್ದರು. ಪುನೀತ್ ನೊಂದಿಗೆ ತಾಯಿ ಯಶೋದಮ್ಮ ವಾಸವಾಗಿದ್ದರು. ಹೇಮಂತ್ ಯಶೋದಮ್ಮ ಅವರಿಗೆ ಯಾವುದೇ ಜೀವನಾಂಶವನ್ನು ನೀಡಿರಲಿಲ್ಲ. ಈ ಸಂಬಂಧ ಗ್ರಾಮದಲ್ಲಿ ಎರಡು-ಮೂರು ಬಾರಿ ರಾಜಿ ಪಂಚಾಯತಿಯು ನಡೆದಿತ್ತು. ಆದರೆ ಯಾವುದೇ ಜೀವನಾಂಶ ನೀಡುವುದಿಲ್ಲ ಎಂದು ಹೇಮಂತ್ ಸ್ಪಷ್ಟಪಡಿಸಿದ್ದರು. ಪುನೀತ್ ಬೆಂಗಳೂರಿನಲ್ಲಿ ಕೂಲಿ ಮಾಡಿಕೊಂಡು ವಾಸವಾಗಿದ್ದರು ಎಂದು ಹೇಳಲಾಗಿದೆ. ಕೆಲ ದಿನಗಳ ಹಿಂದೆ ಹೇಮಂತ್ ರವರ ತೋಟದಲ್ಲಿ ಪುನೀತ್ ತೆಂಗಿನಕಾಯಿ ತೆಗೆದಿದ್ದರಿಂದ ತಂದೆ ಹೇಮಂತ್ ಮಗ ಪುನೀತ್ ಗೆ ಎಚ್ಚರಿಕೆ ನೀಡಿದ್ದರು. ಬಳಿಕ ಈ ಕಾರಣದಿಂದಲೇ ಆತ ಬೈಕಿನಲ್ಲಿ ತೆರಳುವಾಗ ಗುಂಡಿಕ್ಕಿ ಕೊಲೆ ಮಾಡಲಾಗಿದೆ ಎಂದು ಯಶೋದಮ್ಮರವರು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಕೊಲೆ ಪ್ರಕರಣದ ಬಗ್ಗೆ ಎಸ್ಪಿ ಮಾಹಿತಿ ನೀಡಿದರು.

ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಡಿವೈಎಸ್ಪಿ ಬಿ.ಬಿ ಲಕ್ಷ್ಮೇಗೌಡ, ಸಿಪಿಐ ಬಿ.ಜಿ.ಕುಮಾರ್, ಪೊಲೀಸ್ ಇನ್ಸ್ ಪೆಕ್ಟರ್ ವಿನಯ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಿನೋದ ರಾಜ್, ಪಿಎಸ್‍ಐ ಶ್ರೀನಿವಾಸ್ ಸೇರಿದಂತೆ ಪ್ರಕರಣ ಭೇದಿಸಿದ ಎರಡು ತಂಡಗಳನ್ನು ಶ್ರೀನಿವಾಸ್ ಅವರು ಅಭಿನಂದಿಸಿ ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News