ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮೌಲ್ಯಮಾಪನದಲ್ಲಿ ಅಕ್ರಮ: ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪ

Update: 2020-09-17 17:26 GMT

ಮೈಸೂರು,ಸೆ.17: ಕೆಪಿಎಸ್‌ಸಿಯ ಡಿಜಿಟಲ್ ಮೌಲ್ಯಮಾಪನದಲ್ಲಿ ಅಕ್ರಮವಾಗಿದೆ. 2015 ರಲ್ಲಿ 428 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮೌಲ್ಯಮಾಪನದಲ್ಲಿ ಅಕ್ರಮವಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.

ನಗರದ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಪಿಎಸ್‌ಸಿ ಮೇಲೆ ಗುರುತರ ಆರೋಪ ಮಾಡಿದ್ದಾರೆ. 2015 ರಲ್ಲಿ 428 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮೌಲ್ಯಮಾಪನದಲ್ಲಿ ಅಕ್ರಮವಾಗಿದೆ. ಕೆಲ ವಿದ್ಯಾರ್ಥಿಗಳು ಮೌಲ್ಯಮಾಪನದ ಉತ್ತರ ಪತ್ರಿಕೆಯನ್ನು ಆರ್.ಟಿ.ಐ ಮೂಲಕ ಪಡೆದು ಹೈಕೋರ್ಟ್ ಗೆ ಸಲ್ಲಿಸಿದ್ದಾರೆ. ಕೆಲ ವಿದ್ಯಾರ್ಥಿಗಳು ಡಿಜಿಟಲ್ ಮೌಲ್ಯಮಾಪನದಲ್ಲಿ ಅಂಕಗಳನ್ನು ಬದಲಾವಣೆ ಮಾಡಿದ್ದಾರೆ ಎಂದು ದೂರಿದ್ದಾರೆ. ಇದಕ್ಕೆ ಪೂರಕವೆಂಬಂತೆ ಮಹಾರಾಷ್ಟ್ರ ಮೂಲದ ಇಂಡಿಯನ್ ಸೈಬರ್ ಇನ್ಸ್ಟಿಟ್ಯೂಟ್ ನವರು ಮೌಲ್ಯಮಾಪನದಲ್ಲಿ ಅಕ್ರಮ ನಡೆದಿದೆ ಎಂಬ ವರದಿ ನೀಡಿದ್ದಾರೆ. ಉತ್ತರ ಪತ್ರಿಕೆಯ ಪ್ರತಿಗಳನ್ನು ಅಭ್ಯರ್ಥಿಗಳಿಗೆ ನೀಡಬೇಕೆಂದು ಕೋರ್ಟ್ ಆದೇಶಿಸಿದ್ದರೂ ಕೆಪಿಎಸ್‌ಸಿ ಉತ್ತರ ಪತ್ರಿಕೆ ನೀಡುತ್ತಿಲ್ಲ. ಅಭ್ಯರ್ಥಿಗಳ ಅಂಕಗಳನ್ನು ಟ್ಯಾಂಪರ್ ಮಾಡಿದ್ದಾರೆ ಎಂದು ದೂರಿದರು. 

ಮೌಲ್ಯಮಾಪಕರ ಸಹಿಯನ್ನು ಡಿಜಿಟಲ್ ರೂಪದಲ್ಲಿ ಮಾಡಬೇಕು. ಆದರೆ ಯಾವ ಮೌಲ್ಯಮಾಪಕರ ಸಹಿ ಇಲ್ಲದಿರುವುದು ಆರೋಪಕ್ಕೆ ಪುಷ್ಠಿ ನೀಡುವಂತಿದೆ. ಜೊತೆಗೆ ಅಭ್ಯರ್ಥಿಗಳಿಗೆ ಕಳುಹಿಸಿರುವ ಅಂಕಪಟ್ಟಿಯಲ್ಲಿ ಕೆಪಿಎಸ್‌ಸಿ ಲೋಗೋ ಮತ್ತು ಕಾರ್ಯದರ್ಶಿಯವರ ಸಹಿ ಇಲ್ಲ. ಈ ಲೋಪಗಳಿಗೆ ನಾವು ಕೆಪಿಎಸ್‌ಸಿ ಅಧ್ಯಕ್ಷರನ್ನು ದೂಷಣೆ ಮಾಡುತ್ತಿಲ್ಲ. ಇದರಲ್ಲಿ ಯಾವುದೋ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಎಂ.ಲಕ್ಷ್ಮಣ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಮುಖಂಡರುಗಳಾದ ಮಂಜುಳಾ ಮಾನಸ, ಕೆ.ಎಸ್.ಶಿವರಾಮ್, ಶಿವಣ್ಣ, ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬೆದರಿಸುವ ತಂತ್ರಕ್ಕೆ ನಾವು ಹೆದರುವುದಿಲ್ಲ: ಎಂ.ಲಕ್ಷ್ಮಣ್
ತಮ್ಮ ಮೇಲಿನ ಕೇಸ್ ದಾಖಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಎಂ.ಲಕ್ಷ್ಮಣ್, ನನ್ನ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಎಂ.ಲಕ್ಷ್ಮಣ್, ಹಾಗೂ ಮಂಜುಳಾ ಮಾನಸ ಯಾರು ಎಂದು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಬಿಜೆಪಿಯವರ ಈ ಬೆದರಿಸುವ ತಂತ್ರಕ್ಕೆ ನಾವು ಹೆದರುವುದಿಲ್ಲ ಎಂದು ಹೇಳಿದರು.

ಲಕ್ಷ್ಮಣ್ ಹಾಗೂ ಮಂಜುಳಾ ಮಾನಸ ಯಾರು ಎಂದು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪೊಲೀಸರು ನನ್ನ ಹಾಗೂ ಮಂಜುಳಾ ಮಾನಸ ಯಾರು, ಎಷ್ಟು ವರ್ಷದಿಂದ ಎಲ್ಲಿದ್ದರು ಎಂಬೆಲ್ಲಾ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪೊಲೀಸರ ಕೆಲಸ ಏನು ಎಂದು ನನಗೆ ತಿಳಿಯುತ್ತಿಲ್ಲ. ನಾಳೆ ಅಥವಾ ನಾಳಿದ್ದು ಬೆಂಗಳೂರಿನ ಕಮಿಷನರ್ ಭೇಟಿ ಮಾಡಿ ಏನು ಮಾಹಿತಿ ಬೇಕು ಕೇಳುತ್ತೇನೆ ಎಂದು ತಿಳಿಸಿದರು. 

ಬಿಜೆಪಿಯವರ ಈ ಬೆದರಿಸುವ ತಂತ್ರಕ್ಕೆ ನಾವು ಹೆದರುವುದಿಲ್ಲ. ನಮ್ಮ ಮನೆಯ ಸುತ್ತಮುತ್ತ ಎಲ್ಲರನ್ನೂ ವಿಚಾರಿಸುತ್ತಿದ್ದಾರೆ. ಪಾರ್ಕ್ ನಲ್ಲಿ ವಾಕಿಂಗ್ ಗೆ ಜನರನ್ನು ಬಿಡುತ್ತಿಲ್ಲ. ನಮ್ಮ ಧ್ವನಿಯನ್ನು ಹತ್ತಿಕ್ಕುವ ಕೆಲಸ ಕಳೆದ 6 ವರ್ಷದಿಂದ ನಡೆಯುತ್ತಿದೆ ಎಂದು ಎಂ.ಲಕ್ಷ್ಮಣ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News