ಕೊರೋನ ಸೋಂಕು: ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ನಿಧನ

Update: 2020-09-17 18:10 GMT

ಬೆಂಗಳೂರು, ಸೆ.17: ಕೆಲ ತಿಂಗಳ ಹಿಂದಷ್ಟೇ ರಾಜ್ಯಸಭಾ ಸದಸ್ಯರಾಗಿ ನೇಮಕಗೊಂಡಿದ್ದ ಅಶೋಕ್ ಗಸ್ತಿ(55) ಅವರು ಕೋವಿಡ್-19 ಸೋಂಕಿನಿಂದ ಚಿಕಿತ್ಸೆ ಫಲಿಸದೆ ಇಂದು ರಾತ್ರಿ 10:30ರ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ದೃಢಪಡಿಸಿವೆ.

ಕಳೆದ ಕೆಲ ದಿನಗಳಿಂದ ಕೊರೋನ ವೈರಸ್ ಸೋಂಕಿನಿಂದ ಬಳಲುತ್ತಿದ್ದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇಂದು ಸಂಜೆ ವೇಳೆಗೆ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆಂದು ಸುದ್ದಿ ಹಬ್ಬಿತ್ತು. ಆದರೆ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಕುಟುಂಬಸ್ಥರು,  ಆಸ್ಪತ್ರೆಯ ಮೂಲಗಳು ಮತ್ತು ರಾಜ್ಯ ಬಿಜೆಪಿ ಘಟಕ, ''ಅಶೋಕ್ ಗಸ್ತಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ'' ಎಂದು ತಿಳಿಸಿತ್ತು.

ಆದರೆ ರಾತ್ರಿ 10:30ರ ಸುಮಾರಿಗೆ ಅಶೋಕ್ ಗಸ್ತಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂರು ಮೂಲದ ಅಶೋಕ್ ಗಸ್ತಿ, ಅತ್ಯಂತ ಹಿಂದುಳಿದ ಸವಿತಾ ಸಮಾಜಕ್ಕೆ ಸೇರಿದವರು, ಆರೆಸೆಸ್ಸ್ ಮತ್ತು ಬಿಜೆಪಿಯ ಕಾರ್ಯಕರ್ತರಾಗಿದ್ದರು. ಅಶೋಕ್ ಗಸ್ತಿ ಅವರಿಗೆ ಸೆ.2ರಂದು ಕೋವಿಡ್-19 ಸೋಂಕು ದೃಢಪಟ್ಟಿತ್ತು. ಆದರೆ, ಅವರಿಗೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲದಿದ್ದರೂ ಅವರು ನಗರ ಮಣಿಪಾಲ್ ಆಸ್ಪತ್ರೆ ದಾಖಲಾಗಿದ್ದರು. ಹತ್ತು ದಿನಗಳ ಬಳಿಕ ಸೆ.12ರ ಹೊತ್ತಿಗೆ ಅವರ ಪರಿಸ್ಥಿತಿ ಗಂಭೀರವಾಗಿತ್ತು. ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಗುರುವಾರ ರಾತ್ರಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News