ಕೊರೋನ ಸಂದರ್ಭ ಬಳಸಿಕೊಂಡು ವೈದ್ಯರು ಮುಷ್ಕರ ಹೂಡುವುದು ಮಾನವೀಯತೆಯಲ್ಲ: ಸಚಿವ ಕೆ.ಸುಧಾಕರ್

Update: 2020-09-18 11:34 GMT

ಬೆಂಗಳೂರು, ಸೆ. 18: ಕೊರೋನ ಸೋಂಕಿನಂತಹ ಸಂಕಷ್ಟದ ಸಂದರ್ಭವನ್ನು ಬಳಸಿಕೊಂಡು ವೈದ್ಯರು ಮುಷ್ಕರ ಹೂಡುವುದು ಮಾನವೀಯತೆಯಲ್ಲ. ಅವರು ಮುಷ್ಕರ ಹಿಂಪಡೆಯುವ ವಿಶ್ವಾಸವಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಇಲ್ಲಿನ ಕಾಡುಗೊಂಡನಹಳ್ಳಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್-19 ಪರೀಕ್ಷಾ ಪ್ರಯೋಗಾಲಯ ಹಾಗೂ ಕೌಶಲ್ಯ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವೇತನ ಪರಿಷ್ಕರಣೆ ವೈದ್ಯರ ಪ್ರಮುಖ ಬೇಡಿಕೆ. ಈ ಸಂಬಂಧ ಈಗಾಗಲೇ ನಾಲ್ಕೈದು ಬಾರಿ ಅವರೊಂದಿಗೆ ಸಭೆ ನಡೆಸಿದ್ದೇವೆ. ಸಭೆಯ ನಿರ್ಣಯಕ್ಕೆ ಬಹುಪಾಲು ವೈದ್ಯರು ಒಪ್ಪಿದ್ದಾರೆ. ಆದರೂ, ಮುಷ್ಕರ ನಡೆಸುತ್ತೇವೆ ಎನ್ನುವ ಹಠವಾದಿ ಧೋರಣೆ ಸರಿಯಲ್ಲ. ಕೊರೋನ ಸಂದರ್ಭದಲ್ಲಿ ವೈದ್ಯರ ಪಾತ್ರ ಮಹತ್ಚದ್ದು, ಇದನ್ನೇ ಬಂಡವಾಳ ಮಾಡಿಕೊಂಡು ಬೇಡಿಕೆ ಮುಂದಿಟ್ಟು ಮುಷ್ಕರ ಹೂಡುವುದು ಮಾನವೀಯತೆ ಅಲ್ಲ. ಇದು ಅವರ ವೃತ್ತಿಗೆ ಗೌರವ ತರುವುದಿಲ್ಲ. ವೈದ್ಯರ ಸಂಘದ ಪದಾಧಿಕಾರಿಗಳು ಪ್ರಜ್ಞಾವಂತರು. ಅವರು ಮುಷ್ಕರ ಕೈ ಬಿಡುವ ವಿಶ್ವಾಸವಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ನಿಯಂತ್ರಣದಲ್ಲಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕೊರೋನ ಪರೀಕ್ಷಾ ಪ್ರಮಾಣ ದಿನಕ್ಕೆ 75 ಸಾವಿರ ಇದೆ. ಇದರಿಂದ ಸೋಂಕು ಪ್ರಕರಣಗಳು ಹೆಚ್ಚು ಎನಿಸುತ್ತದೆ. ಇಷ್ಟು ದಿನ ಕೇರಳ ರಾಜ್ಯದಲ್ಲಿ ಪರೀಕ್ಷೆ ಪ್ರಮಾಣ ಕಡಿಮೆ ಇದುದರಿಂದ ಅಲ್ಲಿ ಸೋಂಕಿನ ಪ್ರಮಾಣವೂ ಕಡಿಮೆ ಇತ್ತು, ಈಗ ಟೆಸ್ಟ್ ಪ್ರಮಾಣ ಹೆಚ್ಚಿಸಿದ್ದರಿಂದ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ, ರಾಜ್ಯದಲ್ಲಿ ತಮಿಳುನಾಡು, ಆಂಧ್ರಕ್ಕೆ ಹೋಲಿಸಿದರೆ ಕೊರೋನ ನಿಯಂತ್ರಣದಲ್ಲಿದೆ ಎಂದು ತಿಳಿಸಿದರು.

ಐಸಿಯು ಬೆಡ್‍ಗಳ ಹೆಚ್ಚಳಕ್ಕೆ ಕ್ರಮ: ರಾಜ್ಯದಲ್ಲಿ ಸಾಮಾನ್ಯ ಬೆಡ್‍ಗಳು ಹೆಚ್ಚಿವೆ. ಆದರೆ, ಅಗತ್ಯವಿರುವುದು ವೆಂಟಿಲೇಟರ್ ಹಾಗೂ ಐಸಿಯೂ ಬೆಡ್‍ಗಳು. ಕೋವಿಡ್-19 ಪ್ರಕರಣದ ತೀವ್ರತೆ ನೋಡಿಕೊಂಡು ಅವುಗಳ ಹೆಚ್ಚಳ ಮಾಡಲಿದ್ದೇವೆ ಎಂದ ಅವರು, ತುಮಕೂರು ರಸ್ತೆಯಲ್ಲಿನ ಬಿಐಇಸಿ ಬಳಿಯ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಮುಚ್ಚಿದ್ದರಿಂದ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ರೋಗ ಲಕ್ಷಣವಿಲ್ಲದೇ ಇರುವವರನ್ನು ಮನೆಯಲ್ಲಿಯೇ ಐಸೋಲೇಷನ್ ಮಾಡಿಸಲಾಗುತ್ತಿದೆ. ಅವಶ್ಯಕತೆ ಬಿದ್ದರೆ ಕೋವಿಡ್ ಕೇರ್ ಸೆಂಟರ್ ಅನ್ನು ಪುನಾರಾಂಭಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News