ಪೊಲೀಸರ ಕೈ ಕಟ್ಟಿ ಹಾಕಲಾಗಿದೆ: ಇಂದ್ರಜಿತ್ ಲಂಕೇಶ್ ಆರೋಪ
ಬೆಂಗಳೂರು, ಸೆ.21: ಡ್ರಗ್ಸ್ ದಂಧೆ ಪ್ರಕರಣದಲ್ಲಿ ಪೊಲೀಸರ ಕೈ ಕಟ್ಟಿ ಹಾಕಲಾಗಿದೆ, ತನಿಖೆ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎಂದು ಚಲನಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದಾರೆ.
ಸೋಮವಾರ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಡ್ರಗ್ಸ್ ಕುರಿತು ಮಾತನಾಡಿದ ಅವರು, ಡ್ರಗ್ಸ್ ದಂಧೆಯಲ್ಲಿ ನಟಿಯರಷ್ಟೇ ಅಲ್ಲ, ನಟರು ಹಾಗೂ ರಾಜಕಾರಣಿಗಳ ಮಕ್ಕಳು ಸಹ ಇದ್ದಾರೆ. ಆದರೆ, ಪ್ರಕರಣದ ತನಿಖೆ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎಂದು ಹೇಳಿದರು.
ಡ್ರಗ್ಸ್ ದಂಧೆ ಕುರಿತು ಸಿಸಿಬಿ ಪೊಲೀಸರಿಗೆ ನಾನು ನೀಡಿರುವ ಪಟ್ಟಿಯಲ್ಲಿರುವವರ ವಿಚಾರಣೆ ನಡೆಯುತ್ತಿದೆ. ಒಂದೊಳ್ಳೇ ಸಂದೇಶ ಹೋಗಿದೆ. ಆದರೆ, ಇಷ್ಟು ದಿನ ಆಗಿರುವ ಬೆಳವಣಿಗೆ ನನಗೆ ಖುಷಿ ತಂದು ಕೊಟ್ಟಿಲ್ಲ ಎಂದು ತಿಳಿಸಿದರು.
ನಟಿ ಸಂಜನಾ ಮಾತಾಂತರಗೊಂಡಿದ್ದಾರೆನ್ನಲಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಲವ್ ಜಿಹಾದ್ ಅಲ್ಲ, ವಿಷಯವನ್ನು ಮರೆಮಾಚಬೇಡಿ. ಅದಕ್ಕೆ ಕೋಮು ಬಣ್ಣ ನೀಡಬೇಡಿ. ಸರ್ಕಸ್ ಥರ ಮಾಡಬೇಡಿ ಎಂದು ಹೇಳಿದರು.
ಡ್ರಗ್ಸ್ ದಂಧೆಯಲ್ಲಿ ಆಡಳಿತ ಪಕ್ಷ ಹಾಗೂ ವಿಪಕ್ಷ ನಾಯಕರ ಕೈವಾಡವಿದೆ. ಡ್ರಗ್ಸ್ ಪ್ರಕರಣ ಸಂಬಂಧ ಆದಿತ್ಯ ಆಳ್ವಾನನ್ನು ಇನ್ನು ಬಂಧಿಸಿಲ್ಲ. ಆತ ರಾಜಕಾರಣಿಯ ಪುತ್ರ ಎಂಬ ಕಾರಣಕ್ಕೆ ಬಂಧಿಸಿಲ್ಲ. ಜೊತೆಗೆ, ಸರಕಾರದಲ್ಲಿ ಕೆಲಸ ಮಾಡುತ್ತಿರುವ ನಿರ್ದೇಶಕನ ಪುತ್ರನೊಬ್ಬ ಸಹ ಡ್ರಗ್ಸ್ ಪೆಡ್ಲರ್ ಆಗಿದ್ದಾನೆ. ಆತನನ್ನು ಕರೆತಂದು ವಿಚಾರಿಸಿ ಎಂದು ಹೇಳಿದ್ದಾರೆ.