ಕುಡಿದು ಬಂದು ಮಗಳಿಗೆ ಹಿಂಸಿಸುತ್ತಿದ್ದ ಆರೋಪ: ತಂದೆಯ ವಿರುದ್ಧ ದೂರು, ಬಾಲಕಿಯ ರಕ್ಷಣೆ

Update: 2020-09-23 12:14 GMT

ಮಡಿಕೇರಿ, ಸೆ.23: ಕುಡಿದು ಬರುತ್ತಿದ್ದರೆನ್ನಲಾದ ತಂದೆಯಿಂದ ಹಿಂಸೆ ಅನುಭವಿಸುತ್ತಿದ್ದ ಬಾಲಕಿಯೊಬ್ಬಳನ್ನು ಜಿಲ್ಲಾ ಮಕ್ಕಳ ಸಹಾಯವಾಣಿ ಕೇಂದ್ರ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ರಕ್ಷಿಸಿದ್ದು, ತಂದೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶನಿವಾರಸಂತೆ ಸಮೀಪದ ದುಂಡಳ್ಳಿ ಗ್ರಾ.ಪಂ.ವ್ಯಾಪ್ತಿಯ ಸುಳುಗಳಲೆ ಕಾಲನಿ ನಿವಾಸಿ ಚಂದ್ರಶೇಖರ್ ಎಂಬಾತನೇ ತನ್ನ ಪತ್ನಿ ಹಾಗೂ ಇಬ್ಬರು ಪುತ್ರಿಯರಿಗೆ ಹಿಂಸೆ ನೀಡುತ್ತಿದ್ದವನಾಗಿದ್ದಾನೆ.

ಸುಳುಗಳಲೆ ಕಾಲೋನಿಯಲ್ಲಿ ವಾಸ ಮಾಡುತ್ತಿರುವ ಚಂದ್ರಶೇಖರ್ ಕಳೆದ ಒಂಬತ್ತೂವರೆ ವರ್ಷಗಳ ಹಿಂದೆ ವಿವಾಹವಾಗಿದ್ದು, ಈತನಿಗೆ 8 ವರ್ಷ ಮತ್ತು 6 ವರ್ಷದ ಪುತ್ರಿಯರಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿರುವ ಚಂದ್ರಶೇಖರ್ ಮದ್ಯ ವ್ಯಸನಿಯಾಗಿದ್ದು, ಪ್ರತಿದಿನ ಕುಡಿದು ಬಂದು ಪತ್ನಿ ಮತ್ತು ಇಬ್ಬರು ಪುತ್ರಿಯರಿಗೆ ಹೊಡೆದು ಬಡಿದು ಹಿಂಸೆ ಮಾಡುತ್ತಿದ್ದನೆನ್ನಲಾಗಿದೆ. ಇದರಿಂದ ಪ್ರತಿದಿನ ಪತಿ-ಪತ್ನಿ ನಡುವೆ ಜಗಳವೂ ಆಗುತ್ತಿತ್ತು ಎನ್ನಲಾಗಿದೆ.  

ಚಂದ್ರಶೇಖರ್ ಪತ್ನಿ ಮತ್ತು ಇಬ್ಬರು ಪುತ್ರಿಯರಿಗೆ ಹೊಡೆದು ಹಿಂಸೆ ಮಾಡುತ್ತಿದ್ದರಿಂದ ರೋಸಿ ಹೋದ ಪತ್ನಿ ತನ್ನ ಇಬ್ಬರು ಪುತ್ರಿಯರನ್ನು ಕರೆದುಕೊಂಡು ಎರಡು ವರ್ಷಗಳ ಹಿಂದೆ ತನ್ನ ತವರು ಮನೆ ನಾಪೋಕುವ್ಲಿಗೆ ತೆರಳಿದ್ದರು. ಆದರೆ ಪತ್ನಿಯ ಮನೆಗೆ ತೆರಳಿದ ಚಂದ್ರಶೇಖರ್, ತನ್ನ ಹಿರಿಯ ಪುತ್ರಿಯನ್ನು ವಾಪಾಸು ಮನೆಗೆ ಕರೆತಂದು ಪಕ್ಕದ ಸರಕಾರಿ ಶಾಲೆಗೆ ಸೇರಿಸಿದ್ದ. ಆದರೆ ಕುಡಿತದ ಚಟ ಬಿಡದ ಚಂದ್ರಶೇಖರ್ ಮಾಮೂಲಿನಂತೆ ಕುಡಿದು ಬಂದು ಮಗುವಿಗೆ ಹೊಡೆದು ಹಿಂಸೆ ನೀಡುವುದರೊಂದಿಗೆ ಶಾಲೆಗೆ ಹೋಗಬೇಡ, ಮನೆ ಕೆಲಸ ಮಾಡಿಕೊಂಡಿರು ಎಂದು ಬೆದರಿಕೆ ಹಾಕುತ್ತಿದ್ದ. ತಾನು ದುಡಿದ ಹಣವನ್ನು ಕುಡಿತಕ್ಕೆ ವಿನಿಯೋಗಿಸುತ್ತಿದ್ದ ಚಂದ್ರಶೇಖರ್, ತನ್ನ ಪುತ್ರಿಗೆ ಮತ್ತು ವಯಸ್ಸಾದ ತಾಯಿಗೆ ಊಟ ಹಾಕುತ್ತಿರಲಿಲ್ಲ ಎಂದು ಹೇಳಲಾಗಿದೆ.

ಪ್ರತಿದಿನ ಕುಡಿದು ಬಂದು ಹೊಡೆಯುತ್ತಿದ್ದ ತಂದೆಯ ವರ್ತನೆಗೆ ಭಯಗೊಂಡು ಪುತ್ರಿ ಅಕ್ಕಪಕ್ಕದ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದಳು. ಪ್ರತಿದಿನ ತಂದೆಯ ವರ್ತನೆಯಿಂದ ನೊಂದ ಮಗು ಮಂಗಳವಾರ ರಾತ್ರಿ ಪಕ್ಕದ ಮನೆಗೆ ತೆರಳಿ ನನ್ನ ತಂದೆ ದಿನ ಕುಡಿದು ಬಂದು ನನಗೆ ಹಿಂಸೆ ನೀಡುತ್ತಿದ್ದಾರೆ. ನನ್ನನ್ನು ತಂದೆಯಿಂದ ರಕ್ಷಿಸಿ ಯಾವುದಾದರೂ ಅನಾಥ ಶ್ರಮಕ್ಕೆ ಸೇರಿಸಿ ಎಂದು ವಿನಂತಿಸಿಕೊಂಡಿದ್ದಾಳೆ ಎನ್ನಲಾಗಿದ್ದು, ಮಗುವಿನ ಸ್ಥಿತಿಗೆ ಮರುಗಿದ ಸಾರ್ವಜನಿಕರು ಜಿಲ್ಲಾ ಮಕ್ಕಳ ಸಹಾಯವಾಣಿ ಕೇಂದ್ರ, ಮಕ್ಕಳ ರಕ್ಷಣೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಅದರಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮತ್ತು ಮಕ್ಕಳ ಸಹಾಯವಾಣಿ ಕೇಂದ್ರದ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ನೊಂದ ಮಗುವಿನ ಹೇಳಿಕೆಯನ್ನು ದಾಖಲಿಸಿದ್ದಾರೆ. ನಂತರ ಅಧಿಕಾರಿಗಳು ಶನಿವಾರಸಂತೆ ಪೊಲೀಸ್ ಠಾಣೆಗೆ ಆಕೆಯನ್ನು ಕರೆದೊಯ್ದು ಮಗುವಿಗೆ ಹಿಂಸೆ ನೀಡುತ್ತಿದ್ದ ತಂದೆ ಚಂದ್ರಶೇಖರ್ ವಿರುದ್ಧ ಬಾಲ ನ್ಯಾಯ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ. ಪೊಲೀಸರು ತಂದೆ ಚಂದ್ರಶೇಖರ್ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದು, ಅಧಿಕಾರಿಗಳು ನಿರಾಶ್ರಿತ ಮಗುವನ್ನು ಮಡಿಕೇರಿ ಬಾಲಕಿಯರ ಬಾಲಮಂದಿರಕ್ಕೆ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News