ರಾಷ್ಟ್ರೀಯ ಪೋಷಣ್ ಮಾಸಾಚರಣೆ: ಪೋಷಣ್ ರಥಯಾತ್ರೆಗೆ ಚಾಲನೆ

Update: 2020-09-23 12:33 GMT

ಗದಗ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗದಗ ಹಾಗೂ ಶಿಶು ಅಭಿವೃದ್ಧಿ ಇಲಾಖೆ (ಸಿಡಿಪಿಒ) ರೋಣ ಇವುಗಳ ಸಹಯೋಗದಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಮಾಸಾಚರಣೆ ಅಂಗವಾಗಿ ಪೋಷಣ್ ರಥಯಾತ್ರೆಗೆ ಹಿರಿಯ ದಿವಾಣಿ ನ್ಯಾಯಾಧೀಶರ ಆವರಣದಲ್ಲಿ ತಾಲೂಕು ಹಿರಿಯ ದಿವಾಣಿ ನ್ಯಾಯಾಧೀಶೆ ನಾಗಮಣಿ ವಿ. ಬುಧವಾರ ಚಾಲನೆ ನೀಡಿದರು.

ಪೋಷಣ್ ರಥವು ರೋಣದ ಹಿರಿಯ ದಿವಾಣಿ ನ್ಯಾಯಾಲಯದ ಆವರಣದಿಂದ ಚಾಲನೆಗೊಂಡು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ನೀಡಲಾ ಯಿತು. ಜಾಥಾದಲ್ಲಿ ಪೌಷ್ಠಿಕ ಆಹಾರ ಶಿಬಿರ, ಮಾತೃ ವಂದನಾ ಯೋಜನೆ, ಭೇಟಿ ಪಡಾವೊ, ಬಾಲ್ಯ ವಿವಾಹ ವಿರುದ್ಧ ಜಾಗೃತಿ, ಭ್ರೂಣ ಹತ್ಯೆ ನಿಷೇಧ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.

ಒಂದು ತಿಂಗಳು ಕಾಲ ಪಟ್ಟಣ ಸೇರಿದಂತೆ ಹಳ್ಳಿ-ಹಳ್ಳಿಗಳಲ್ಲಿ ಪೋಷಣ್ ರಥ ತೆರಳಿ ಜನ ಜಾಗೃತಿ ಮೂಡಿಸಲಿದೆ. ಗರ್ಭಿಣಿ ಮತ್ತು ಬಾಣಂತಿ ಸೇರಿದಂತೆ ಮಗುವಿನ ಉತ್ತಮ ಬೆಳವಣಿಗೆಗೆ ಹಸಿರು ತರಕಾರಿ ಮತ್ತು ಪೌಷ್ಟಿಕಾಂಶವುಳ್ಳ ನುಗ್ಗೆ, ಕರಿಬೇವು ಹಾಗೂ ಹಣ್ಣಿನ ಮರಗಳನ್ನು ತಮ್ಮ ಮನೆಯ ಆವರಣದಲ್ಲಿ ಬೆಳೆಸುವುದು. ಇದರಿಂದ ನಿತ್ಯ ತಾಜಾ ಸೊಪ್ಪು ಮತ್ತು ತರಕಾರಿ ಸಿಗಲಿದೆ. ತಾಜಾ ಹಣ್ಣು, ತರಕಾರಿ ಮತ್ತು ಸೊಪ್ಪು ಸೇವನೆಯಿಂದ ಹೆಚ್ಚು ವಿಟಮಿನ್ ಅಂಶ ದೊರೆಯಲಿದೆ. ಇದರಿಂದ ಅಪೌಷ್ಟಿಕತೆ ಹೋಗಲಾಡಿಸಲು ಸಹಕಾರಿಯಾಗಲಿದೆ ಎನ್ನುವುದನ್ನು ಸಾರ್ವಜನಿಕರಿಗೆ ತಿಳಿಸುವುದು ಈ ಪೋಷಣ್ ರಥದ ಉದ್ದೇಶವಾಗಿದೆ.

ಕಾರ್ಯಕ್ರಮದಲ್ಲಿ ಪ್ರಧಾನ ದಿವಾಣಿ ನ್ಯಾಯಾಧೀಶ ಮುಹಮ್ಮದ್ ಯೂನುಸ್ ಅಥಣಿ, ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಸಚಿನ್ ಎಚ್.ಆರ್., ಸಿಡಿಪಿಒ ಅಧಿಕಾರಿ ಬಿ.ಎಂ. ಮಾಳೆಕೊಪ್ಪ, ಇಲಾಖೆಯ ಮೇಲ್ವಿಚಾರಕಿಯರು, ಪೋಷಣ್ ಅಭಿಯಾನದ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಇಲಾಖೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಮಾವಿನ ತೋರಣ, ಬಾಳೆ ಗಿಡ, ಬಲೂನಿನಿಂದ ಅಲಂಕೃತಗೊಂಡಿದ್ದ ಪೋಷಣ್ ರಥ ವಾಹನವು ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ತಲೆಮೇಲೆ ಕಳಶ ಹೊತ್ತ ಮಹಿಳೆಯರು ಪೋಷಣ್ ರಥದ ಮೆರವಣಿಗೆಗೆ ಮೆರುಗು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News