ಮಂಡ್ಯ: ಟಿಪ್ಪರ್ ಹರಿದು ಮಹಿಳೆ ಮೃತ್ಯು
Update: 2020-09-23 17:09 GMT
ಮಂಡ್ಯ, ಸೆ.23: ಜಲ್ಲಿ ಸಾಗಿಸುವ ಟಿಪ್ಪರ್ ಹರಿದು ಮಹಿಳೆಯೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿ, ಆಕೆಯ ಪತಿ ಗಾಯಗೊಂಡಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಬೂಕನಕೆರೆ ಹೋಬಳಿಯ ಚೋಕನಹಳ್ಳಿ ಗ್ರಾಮದ ದಲಿತ ಕಾಲನಿಯ ನಿವಾಸಿ ಬಸವರಾಜು ಅವರ ಪತ್ನಿ ಜ್ಯೋತಿ(30) ಎಂಬಾಕೆಯೇ ಅಪಘಾತದಲ್ಲಿ ಸಾವನ್ನಪ್ಪಿದವರು.
ಬಸವರಾಜು ಪತ್ನಿ ಜ್ಯೋತಿ ಜತೆಯಲ್ಲಿ ಬೈಕ್ನಲ್ಲಿ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದಾಗ ಹೇಮಾವತಿ ನೀರಾವರಿ ಕಚೇರಿ ಬಳಿ ಟಿಪ್ಪರ್ ಢಿಕ್ಕಿ ಹೊಡೆದಿದೆ. ಬೈಕ್ನಿಂದ ಅಯತಪ್ಪಿ ಬಿದ್ದ ಜ್ಯೋತಿ ಮೇಲೆ ಟಿಪ್ಪರ್ ಹರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಣ್ಣಪುಟ್ಟ ಗಾಯಗಳಾಗಿರುವ ಬಸವರಾಜು ಅವರನ್ನು ಸಾರ್ವಜನಿಕರ ಆಸ್ಪತ್ರೆಗೆ ಸೇರಿಸಲಾಗಿದ್ದು, ಈ ಸಂಬಂಧ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.