ವೃದ್ಧೆಯನ್ನು ಕೊಲೆಗೈದು ಚಿನ್ನದ ಸರದೊಂದಿಗೆ ಪರಾರಿಯಾದ ದುಷ್ಕರ್ಮಿಗಳು

Update: 2020-09-24 16:58 GMT

ಚಿಕ್ಕಮಗಳೂರು, ಸೆ.23: ಚಿನ್ನದ ಸರ ದೋಚುವ ಭರದಲ್ಲಿ ದುಷ್ಕರ್ಮಿಗಳು ವೃದ್ಧೆಯೊಬ್ಬರ ತಲೆಗೆ ಮರದ ತುಂಡಿನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಅಜ್ಜಂಪುರ ಪಟ್ಟಣದ ಶಿವಾನಂದಾಶ್ರಮದಲ್ಲಿ ಗುರುವಾರ ಬೆಳಗ್ಗೆ ವರದಿಯಾಗಿದೆ.

ಪಟ್ಟಣದ ನಿವಾಸಿ ರೈಲ್ವೇ ಸ್ಟೇಷನ್ ಸಮೀಪದ ನಿವಾಸಿಯಾಗಿರುವ ಸುಮಾರು 70 ವರ್ಷದ ವೃದ್ಧೆ ನಾಗರತ್ನಾ ಎಂಬವರೇ ದುಷ್ಕರ್ಮಿಗಳಿಂದ ಹತ್ಯೆಗೀಡಾದವರು. ಗುರುವಾರ ಬೆಳಗ್ಗೆ ಮನೆ ಸಮೀಪದಲ್ಲೇ ಇರುವ ಶಿವಾನಂದಾಶ್ರಮ ಎಂಬ ಮಠದ ಆವರಣದಲ್ಲಿದ್ದ ದೇವಾಲಯಕ್ಕೆ ವಾಯುವಿಹಾರಕ್ಕೆ ಆಗಮಿಸಿದ್ದ ವೇಳೆ ವೃದ್ಧೆ ನಾಗರತ್ನಾ ದೇವರ ದರ್ಶನಕ್ಕೆಂದು ಹೋಗಿದ್ದರು. ಈ ವೇಳೆ ವೃದ್ಧೆಯ ಮೇಲೆ ಮರದ ತುಂಡಿನಿಂದ ಹಲ್ಲೆ ಮಾಡಿರುವ ದುಷ್ಕರ್ಮಿಗಳು ವೃದ್ಧೆಯ ತಲೆಗೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ.

ವೃದ್ಧೆಯ ತಲೆಗೆ ಭಾರೀ ಪೆಟ್ಟು ಬಿದ್ದ ಪರಿಣಾಮ ದೇವಾಲಯದ ಆವರಣದಲ್ಲೇ ಕುಸಿದ ಬಿದ್ದ ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿರುವ ದುಷ್ಕರ್ಮಿಗಳು ನಂತರ ಪರಾರಿಯಾಗಿದ್ದಾರೆ. ದಾರಿಹೋಕರು ವೃದ್ಧೆಯನ್ನು ಗಮನಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಬಳಿಕ ವೃದ್ಧೆಯನ್ನು ಅಜ್ಜಂಪುರ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯುವ ದಾರಿ ಮಧ್ಯೆ ವೃದ್ಧೆ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಘಟನೆ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಳಗ್ಗೆ ಎಎಸ್ಪಿ ಶೃತಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಸಂಜೆ ವೇಳೆ ಎಸ್ಪಿ ಅಕ್ಷಯ್ ಮಚ್ಚೀಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News