ರಾಜ್ಯದೆಲ್ಲೆಡೆ ಹೆದ್ದಾರಿ ತಡೆ, ಜೈಲ್ ಭರೋ ಚಳುವಳಿ: ರೈತರು, ಹೋರಾಟಗಾರರ ಬಂಧನ

Update: 2020-09-25 13:24 GMT

ಬೆಂಗಳೂರು, ಸೆ.25: ಕೇಂದ್ರದ ಮೋದಿ ಸರಕಾರ ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ಹೊರಟಿರುವ ಭೂಸುಧಾರಣೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ಇನ್ನಿತರೆ ಕಾಯ್ದೆಗಳನ್ನು ವಿರೋಧಿಸಿ ರಾಜ್ಯದೆಲ್ಲೆಡೆ ಹೆದ್ದಾರಿಗಳನ್ನು ಕೆಲ ಕಾಲ ತಡೆಯುವ ಮೂಲಕ ರೈತ, ದಲಿತ, ಕಾರ್ಮಿಕ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಜೈಲ್ ಭರೋ ಚಳವಳಿ ನಡೆಸಲಾಯಿತು. ಈ ವೇಳೆ, ಸಾವಿರಕ್ಕೂ ಅಧಿಕ ರೈತರು, ಹೋರಾಟಗಾರರನ್ನು ಪೊಲೀಸರು ಬಂಧಿಸಿದರು.

ಶುಕ್ರವಾರ ರಾಜಧಾನಿ ಬೆಂಗಳೂರಿನ ನೆಲಮಂಗಲ ರಸ್ತೆ, ತುಮಕೂರು, ಬಳ್ಳಾರಿ ರಸ್ತೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿನ ಹೆದ್ದಾರಿ ರಸ್ತೆಗಳನ್ನು ತಡೆದ ಪ್ರತಿಭಟನಾಕಾರರು, ಭೂಸುಧಾರಣೆ ಕಾಯ್ದೆ ತಿದ್ದುಪಡಿಗೆ ಧಿಕ್ಕಾರ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಬೇಡವೇ ಬೇಡ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ಒಪ್ಪುವುದಿಲ್ಲ, ಕಾರ್ಪೋರೇಟ್ ಕಂಪೆನಿಗಳ ಪರ ನಿಂತಿರುವ ಕೇಂದ್ರ, ರಾಜ್ಯ ಸರಕಾರ ಎಂದು ಘೋಷಣೆ ಕೂಗಿ ರಣಕಹಳೆ ಮೊಳಗಿಸಿದರು.

ಪ್ರಮುಖವಾಗಿ ಬೆಂಗಳೂರಿನ ಮೌರ್ಯ ಸರ್ಕಲ್, ಮೈಸೂರು ಬ್ಯಾಂಕಿನ ವೃತ್ತದ ಬಳಿ ಜಮಾಯಿಸಿದ್ದ ರೈತರು, ಕೈಯಲ್ಲಿ ಚಾವಟಿ ಕೋಲುಗಳನ್ನು ಹಿಡಿದು ರಸ್ತೆಯಲ್ಲಿಯೇ ಉರುಳುಸೇವೆ ಮಾಡುವ ಮೂಲಕ ಕೇಂದ್ರ, ರಾಜ್ಯ ಸರಕಾರಗಳ ನೀತಿಗಳನ್ನು ಖಂಡಿಸಿದರು.

ಸರಕಾರ ಈ ನಿರ್ಧಾರಗಳಿಂದ ಹಿಂದೆ ಸರಿಯದಿದ್ದಲ್ಲಿ ಸೆಪ್ಟಂಬರ್ 28ಕ್ಕೆ ಬಂದ್ ನಡೆಸುತ್ತೇವೆ. ನಮ್ಮ ಮನೆಯಲ್ಲಿರುವ ದನಕರು, ಕೋಳಿಗಳನ್ನು ಬೆಂಗಳೂರಿಗೆ ತಂದು ಪ್ರತಿಭಟನೆ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಇನ್ನು, ಪ್ರತಿಭಟನೆ ನಿರತ ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಕರುಬೂರು ಶಾಂತಕುಮಾರ್, ಮಾರುತಿ ಮಾನ್ಪಡೆ, ಗುರುಪ್ರಸಾದ್, ಸಿನೆಮಾ ನಟ, ಚಿಂತಕ ಚೇತನ್, ಹೋರಾಟಗಾರ್ತಿ ವರಲಕ್ಷ್ಮೀ ಸೇರಿದಂತೆ ರೈತ ಮುಖಂಡರು, ಚಿಂತಕರು, ಹೋರಾಟಗಾರರು ಹಾಗೂ ವಿವಿಧ ಪಕ್ಷಗಳ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು, ವಾಹನದಲ್ಲಿ ಕರೆದೊಯ್ದರು.

ಇಲ್ಲಿನ ಅತ್ತಿಬೆಲೆ ಹೆದ್ದಾರಿ ತಡೆಗೆ ಮುಂದಾಗಿದ್ದ ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್, ಸಾರಾ ಗೋವಿಂದು ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ಅತ್ತಿಬೆಲೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಮತ್ತೊಂದೆಡೆ ಕೃಷಿ ನೀತಿ ವಿರೋಧಿಸಿ ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪದ ನೈಸ್ ರಸ್ತೆ ಟೋಲ್ ಬಳಿ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಹೆಚ್ಚಿನ ಸಂಖ್ಯೆ ಜಮಾವಣೆಗೊಂಡಿದ್ದ ನಗರದ ಗೊರಗುಂಟೆ ಪಾಳ್ಯದ ಬಳಿ ಪ್ರತಿಭಟನಾ ನಿರತ ರೈತರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ ರೈತರು, ತುಮಕೂರು ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಹೆದ್ದಾರಿ ತಡೆಯಲು ಮುಂದಾದರು.

ವಾಹನ ದಟ್ಟಣೆ: ಹೆದ್ದಾರಿ ರಸ್ತೆಗಳು ಹಾಗೂ ನಗರದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆ ಇಲ್ಲಿನ ಕೆಜಿ ರಸ್ತೆ, ನೃಪತುಂಗ ರಸ್ತೆ, ಕಾರ್ಪೋರೇಷನ್ ರಸ್ತೆ, ಬಳ್ಳಾರಿ ಮಾರ್ಗ, ಟಿನ್ ಫ್ಯಾಕ್ಟರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಸಾಲು ಸಾಲಾಗಿ ವಾಹನಗಳು ನಿಂತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

ಪೊಲೀಸ್ ಭದ್ರತೆ: ಪ್ರತಿಭಟನೆ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ನಗರದ ವಿಧಾನಸೌಧ ವ್ಯಾಪ್ತಿ, ಸರಕಾರಿ ಕಚೇರಿಗಳು ಹಾಗೂ ಹೆದ್ದಾರಿ ಟೋಲ್‍ಗಳ ಬಳಿ ಪೊಲೀಸರು ಭದ್ರತೆ ಹೆಚ್ಚಿನ ನಿಗಾವಹಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಗಾಜು ಒಡೆದು ಆಕ್ರೋಶ

ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ರೈತ ಮುಖಂಡರೋರ್ವನನ್ನು ಪೊಲೀಸರು ವಶಕ್ಕೆ ಪಡೆದು ಬಸ್‍ನಲ್ಲಿ ಕೂರಿಸಿದಕ್ಕೆ ಆತ ಆಕ್ರೋಶಗೊಂಡು ಬಸ್ಸಿನ ಗಾಜು ಒಡೆದು ಆಕ್ರೋಶ ವ್ಯಕ್ತಪಡಿಸಿದ ವಿಡಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News