ಮೈಸೂರು: ನಕಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಕಾರ್ಯಕ್ರಮಕ್ಕೆ ಪೊಲೀಸರ ದಾಳಿ; ಮೂವರು ಆಯೋಜಕರು ವಶಕ್ಕೆ

Update: 2020-09-26 14:56 GMT

ಮೈಸೂರು,ಸೆ.26: ಖಾಸಗಿ ಹೋಟೆಲ್‍ನಲ್ಲಿ ಯುನಿವರ್ಸಿಟಿ ಹೆಸರಲ್ಲಿ ನಕಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಕಾರ್ಯಕ್ರಮ ನಡೆಯುತ್ತಿರುವ ಕುರಿತು ಖಚಿತ ಮಾಹಿತಿಯಾಧರಿಸಿ ದಾಳಿ ನಡೆಸಿದ ಪೊಲೀಸರು, ಮೂವರು ಆಯೋಜಕರನ್ನು ವಶಕ್ಕೆ ಪಡೆದಿದ್ದಾರೆ.

ನಿಖರ ಮಾಹಿತಿ ಮೇರೆಗೆ ಶನಿವಾರ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಳಿ ವೇಳೆ ಆಯೋಜಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಮೂವರು ಆಯೋಜಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಕಲಿ ಗೌರವ ಡಾಕ್ಟರೇಟ್ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಹರಿಹರ ಶಾಸಕ ರಾಮಪ್ಪ ಭಾಗಿಯಾಗಿದ್ದರು ಎನ್ನಲಾಗಿದೆ.

ತಮಿಳುನಾಡು ಮೂಲದ ಅಂತರ್ ರಾಷ್ಟ್ರೀಯ ವಿಶ್ವವಿದ್ಯಾಲಯದ (ಇಂಟನ್ರ್ಯಾಷನಲ್ ಗ್ಲೋಬಲ್ ಪೀಸ್ ಯುನಿವರ್ಸಿಟಿ) ಹೆಸರಲ್ಲಿ ನಕಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಜನರಿಂದ ಹಣ ಪಡೆದು ನಕಲಿ ಗೌರವ ಡಾಕ್ಟರೇಟ್ ಪದವಿ ನೀಡಲು ಮುಂದಾಗಿದ್ದು, ಕರ್ನಾಟಕ ಅಲ್ಲದೆ ದೇಶದ ಇತರ ಭಾಗಗಳಲ್ಲೂ ಗೌರವ ಡಾಕ್ಟರೇಟ್ ಹೆಸರಲ್ಲಿ ಪಂಗನಾಮ ಹಾಕಲು ಮುಂದಾಗಿತ್ತು ಎನ್ನಲಾಗಿದೆ. ಕಾರ್ಯಕ್ರಮದ ಪ್ರಶಸ್ತಿ ಪತ್ರ, ಮೊಮೆಂಟೋಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಮಿಳುನಾಡು ಮೂಲದ ಅಂತರ್ ರಾಷ್ಟ್ರೀಯ ವಿವಿ ಹೆಸರಿನಲ್ಲಿ ಹಣ ಪಡೆದು ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ 150ಕ್ಕೂ ಹೆಚ್ಚು ಮಂದಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗುತ್ತಿದೆ, ರಾಜ್ಯದ ವಿವಿಧ ಭಾಗಗಳ ಜನರು ಪದವಿ ಸ್ವೀಕರಿಸಲಿದ್ದಾರೆಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು.

ಆಂಧ್ರಪ್ರದೇಶ, ತಮಿಳುನಾಡು ಮತ್ತಿತರ ರಾಜ್ಯಗಳಿಂದ ಗೌರವ ಡಾಕ್ಟರೇಟ್ ಪದವಿ ಆಕಾಂಕ್ಷಿಗಳು ಬಂದಿದ್ದು, ಪ್ರತಿಯೊಬ್ಬರಿಂದ 50 ಸಾವಿರದಿಂದ 1 ಲಕ್ಷ ರೂ. ಪಡೆದು ಪದವಿ ನೀಡಲಾಗುತ್ತಿತ್ತು. ಹಣ ಪಡೆದು ಗೌರವ ಡಾಕ್ಟರೇಟ್ ನೀಡುವ ಪದವಿ ಪ್ರಧಾನ ಕಾರ್ಯಕ್ರಮ ರದ್ದಾಗಿದ್ದು, ಹಣ ನೀಡಿ ಪದವಿ ಪಡೆಯಲು ಬಂದಿದ್ದ 200ಕ್ಕೂ ಹೆಚ್ಚು ಮಂದಿಗೆ ನಿರಾಸೆಯಾಗಿದೆ. ಕಾರ್ಯಕ್ರಮ ಆಯೋಜಕರ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News