ಕಾಂಗ್ರೆಸ್ ನಾಯಕರು ಮುಗ್ಧ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ: ಈರಣ್ಣ ಕಡಾಡಿ

Update: 2020-09-27 17:10 GMT

ಬೆಳಗಾವಿ, ಸೆ.27: ರೈತ ಸಮೂಹದ ಅಭಿವೃದ್ಧಿಗೆ ಪೂರಕವಾಗಲೆಂದೇ ಕೇಂದ್ರ ಹಾಗೂ ರಾಜ್ಯ ಸರಕಾರ ಮಸೂದೆ ತಿದ್ದುಪಡಿ ಮಾಡಿವೆ. ಆದರೆ ಕಾಂಗ್ರೆಸ್ ನಾಯಕರು ಮುಗ್ಧ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಪ್ರತಿಪಕ್ಷ ಸ್ಥಾನದಲ್ಲಿ ಮಾಡಬೇಕಾದ ಕೆಲಸ ಮಾಡುತ್ತಿಲ್ಲ. ರೈತರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಕೈ ನಾಯಕರು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.

ಕೊರೋನ ಪರಿಣಾಮ ವಿದ್ಯಾವಂತ ಯುವಕರು ಕೃಷಿಗೆ ಮುಂದಾಗಿದ್ದಾರೆ. ಹೀಗಾಗಿ ಕೃಷಿ ಕ್ಷೇತ್ರ ವಿಸ್ತರಣೆ ಆಗಲಿ ಎನ್ನುವ ಕಾರಣಕ್ಕೆ ಮಸೂದೆ ತಿದ್ದುಪಡಿ ಮಾಡಲಾಗಿದೆ. ಆದರೆ ರೈತರಿಗೆ ಕಾಂಗ್ರೆಸ್ ನಾಯಕರು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಮಾತಿಗೆ ಮರುಳಾಗದೇ ಪ್ರತಿಭಟನೆ ಹಿಂಪಡೆಯಬೇಕು ಎಂದು ರೈತ ಸಂಘಟನೆ ಮುಖಂಡರಲ್ಲಿ ಮನವಿ ಮಾಡಲಾಗಿದೆ ಎಂದರು.

ರೈತರಿಗೆ ಮಸೂದೆ ಬಗ್ಗೆ ತಿಳುವಳಿಕೆ, ಜಾಗೃತಿ ಮೂಡಿಸುವ ಕೆಲಸ ಕೃಷಿ ಮೋರ್ಚಾ ಮಾಡುತ್ತಿದೆ. ರೈತರಿಗೆ ಹೆಚ್ಚಿನ ಲಾಭ ಸಿಗಲಿ ಎಂಬ ಕಾರಣಕ್ಕೆ ಭೂ ಸುಧಾರಣೆ ತಿದ್ದುಪಡಿ ಹಾಗೂ ಎಪಿಎಂಸಿ ಖಾಸಗೀಕರಣ ನೀತಿಗಳನ್ನು ತಿದ್ದುಪಡಿ ಮಾಡಲಾಗಿದೆ. ತಿದ್ದುಪಡಿ ಮಸೂದೆಗಳು ರೈತರಿಗೆ ವರದಾನ ಆಗಲಿವೆ. ಹೀಗಾಗಿ ರೈತ ಸಂಘಟನೆ ಮುಖಂಡರು ನಡೆಸಲು ಉದ್ದೇಶಿಸಿದ್ದ ಕರ್ನಾಟಕ ಬಂದ್ ಹಿಂಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News