ಓ ಮೆಣಸೇ...

Update: 2020-09-28 05:36 GMT

ಕರ್ನಾಟಕವನ್ನು ಸುಗ್ರೀವಾಜ್ಞೆ ರಾಜ್ಯವನ್ನಾಗಿ ಪರಿವರ್ತಿಸಲಾಗುತ್ತಿದೆ- ಎಚ್.ಎಸ್. ದೊರೆಸ್ವಾಮಿ, ಸ್ವಾತಂತ್ರ ಹೋರಾಟಗಾರ
ವಾಲಿ, ಸುಗ್ರೀವರೆಲ್ಲ ಸೇರಿ ರಾಜ್ಯವನ್ನು ಕಿಷ್ಕಿಂದೆ ಮಾಡಲು ಹೊರಟಂತಿದೆ.


ರೈತರನ್ನು ದಲ್ಲಾಳಿಗಳ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಲು ವಿಧೇಯಕಗಳು ಅನಿವಾರ್ಯವಾಗಿದ್ದವು- ನರೇಂದ್ರ ಮೋದಿ, ಪ್ರಧಾನಿ
ದಲ್ಲಾಳಿಗಳ ಕಪಿಮುಷ್ಟಿಯಿಂದ ಬಿಡಿಸಿ ಅಂಬಾನಿ, ಅದಾನಿ ಕಪಿಮುಷ್ಟಿಗೆ ಒಪ್ಪಿಸುವುದು ಅನಿವಾರ್ಯವಾಗಿರಬೇಕು.


ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಗೆ ದೇಶದ ಪ್ರಧಾನಿಯಾಗುವ ಆಸೆ ಇತ್ತು ಅದು ಈಡೇರದಿರುವುದಕ್ಕೆ ನೋವೂ ಇತ್ತು- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಆ ನೋವಿನಿಂದಲೇ ಅವರು ಆರೆಸ್ಸೆಸ್ ಸಭೆಯಲ್ಲಿ ಭಾಗವಹಿಸಿರಬೇಕು.


ನಮ್ಮಲ್ಲಿ ವಲಸಿಗರು-ಮೂಲ ನಿವಾಸಿಗಳು ಎಂಬ ಗೊಂದಲವಿಲ್ಲ - ನಾರಾಯಣಗೌಡ, ಸಚಿವ
ಗೊಂದಲವಿಲ್ಲ, ಅಸಮಾಧಾನವಷ್ಟೇ ಇದೆ.


ಕೃಷಿ ವಿಧೇಯಕವನ್ನು ವಿರೋಧಿಸುತ್ತಿರುವವರು ಪಟ್ಟಭದ್ರ ಹಿತಾಸಕ್ತಿಗಳೇ ವಿನಾ ರೈತರಲ್ಲ - ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಮಾಜಿ ಸಿಎಂ
ಬೆಂಬಲಿಸುತ್ತಿರುವ ಅದಾನಿ, ಅಂಬಾನಿಗಳೆಲ್ಲ ಇವರ ಪಾಲಿಗೆ ನಿಜವಾದ ರೈತರಿರಬೇಕು.


ವಿರೋಧ ಪಕ್ಷಗಳ ಸದ್ಯದ ಪರಿಸ್ಥಿತಿ ತೀರಾ ಶೋಚನೀಯವಾಗಿದೆ -ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ
ದೇಶದ ಸ್ಥಿತಿಯ ಬಗ್ಗೆಯೂ ಒಂದಿಷ್ಟು ಹೇಳಿ.


ಅಧಿಕಾರವೆಂಬ ನಶೆಯಲ್ಲಿ ತೇಲುತ್ತಿದ್ದುದರಿಂದಲೇ ಎಚ್.ಡಿ. ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡರು- ಎಚ್.ವಿಶ್ವನಾಥ್, ಸಚಿವ
ಅಧಿಕಾರವನ್ನು ಅನುಭವಿಸುತ್ತಿರುವವರ ಮೇಲೆ ಮಾದಕ ದ್ರವ್ಯ ಸೇವನೆಯ ಪ್ರಕರಣ ದಾಖಲಿಸಿದರೆ ಹೇಗೆ?


ಸಾವು ಬರಲಿ ಆದರೆ, ಕೊರೋನದಿಂದ ಮಾತ್ರ ಯಾರೂ ಸಾಯಬಾರದು - ಅರಗ ಜ್ಞಾನೇಂದ್ರ, ಶಾಸಕ
ವಲಸೆ ಕಾರ್ಮಿಕರ ಸಾವಿಗೆ ಸಮರ್ಥನೆಯೇ?


ಸ್ವಾರ್ಥ ಹಾಗೂ ಅವಕಾಶವಾದಿ ರಾಜಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರತಲ್ಲ - ಬಸವರಾಜ ಹೊರಟ್ಟಿ, ಮಾಜಿ ಸಚಿವ
 ಸದ್ಯಕ್ಕೆ ಹಾಲಿ ಮುಖ್ಯಮಂತ್ರಿಯ ಕತೆಯೇನು ಹೇಳಿ?


ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ- ರೇಣುಕಾಚಾರ್ಯ, ಸಿಎಂ ಕಾರ್ಯದರ್ಶಿ
ಮಾರ್ಜಾಲ ಸನ್ಯಾಸಿಗಳ ಸಂಖ್ಯೆ ಹೆಚ್ಚಾಗುತ್ತಿದೆ.


ಕಾಂಗ್ರೆಸ್ ಬಿಟ್ಟು ಹೋಗಿರುವ 60 ಹಿರಿಯ ನಾಯಕರು ಮರಳಿ ಪಕ್ಷಕ್ಕೆ ಬರಲು ಅರ್ಜಿ ಹಾಕಿಕೊಂಡಿದ್ದಾರೆ - ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ವಾಪಸ್ ಬರುವುದಕ್ಕೆ ಅವರಿಗೆ ಎಷ್ಟು ಕೊಡಬೇಕಂತೆ?


ನನ್ನ ಗೆಳೆಯ ಉಮೇಶ್ ಕತ್ತಿ ಸಚಿವರಾದರೆ ನಾನು ತುಂಬಾ ಖುಷಿ ಪಡುತ್ತೇನೆ - ರಮೇಶ್ ಜಾರಕಿಹೊಳಿ, ಸಚಿವ
ಜೊತೆ ಸೇರಿ ಸರಕಾರಕ್ಕೆ ಕತ್ತಿ ಇಡುವ ಉದ್ದೇಶವಿದೆಯೇ?


ಪ್ರಧಾನಿ ಮೋದಿ ವ್ಯಕ್ತಿಯಲ್ಲ ದೇವಮಾನವ, ರಾಜರ್ಷಿ -ಯಡಿಯೂರಪ್ಪ, ಮುಖ್ಯಮಂತ್ರಿ
ಪ್ರಧಾನಿಯಾಗಲು ಇರುವ ಮೊದಲ ಅರ್ಹತೆಯೇ ಮನುಷ್ಯರಾಗಿರುವುದು.


ಒಂದು ನಿರ್ದಿಷ್ಟವಾದ ವಯಸ್ಸನ್ನು ದಾಟಿದ ನಂತರ ಅಹಂಕಾರವನ್ನು ಕೈ ಬಿಡಬೇಕು - ರವಿಶಂಕರ್ ಗುರೂಜಿ, ಆರ್ಟ್ಸ್ ಆಫ್ ಲಿವಿಂಗ್ ಸಂಸ್ಥಾಪಕ
 ಆ ವಯಸ್ಸು ನಿಮಗೆ ಇನ್ನೂ ಬಂದಿಲ್ಲವೇ?


ಪಡಿತರ ಚೀಟಿದಾರರ ಆಹಾರಧಾನ್ಯ ಉಗ್ರಾಣದಿಂದ ನೇರವಾಗಿ ಎಲ್ಲೆಲ್ಲಿಗೋ ಹೋಗುವ ಕಾಲ ಇದಲ್ಲ - ಸಿ.ಟಿ.ರವಿ, ಸಚಿವ
ನೇರವಾಗಿ ಸ್ಯಾನಿಟೈಸರ್ ತಯಾರಿಕೆಗೆ ಹೋಗಿದೆಯಂತೆ.


ನಾನು ಇಂದು ಮುಖ್ಯಮಂತ್ರಿಯಾಗಿದ್ದರೆ ಅದಕ್ಕೆ ಕೇಂದ್ರದ ಮಾಜಿ ಸಚಿವ ಅನಂತಕುಮಾರ ಕೊಡುಗೆ ಅಪಾರ - ಯಡಿಯೂರಪ್ಪ, ಮುಖ್ಯಮಂತ್ರಿ
ಅವರಿದ್ದಿದ್ದರೆ ಅಡ್ಡಿ ಪಡಿಸುತ್ತಿದ್ದರು ಎಂಬ ಅರ್ಥದಲ್ಲಿ ಹೇಳಿರಬೇಕು.


ಹೆಣದ ಮೇಲಿನ ರಾಜಕಾರಣ ನಮ್ಮ ಸಂಸ್ಕೃತಿಯಲ್ಲ - ಯು.ಟಿ.ಖಾದರ್, ಮಾಜಿ ಸಚಿವ
ನಿಮ್ಮದೇನಿದ್ದರೂ ಹಣದ ಮೇಲಿನ ರಾಜಕಾರಣ.


ಮಧ್ಯಮ, ಕೆಳ ಮಧ್ಯಮ ಕುಟುಂಬಗಳಲ್ಲಿ ಸರಕಾರಿ ಶಾಲೆಗಳ ಬಗ್ಗೆ ವಿಶ್ವಾಸ ಮರುಕಳಿಸುತ್ತಿದೆ - ಸುರೇಶ್‌ಕುಮಾರ್, ಸಚಿವ
ಅದಕ್ಕೆ ಈ ಪರಿಯ ಆತಂಕವೇ?


ಒಂದು ವೇಳೆ ಚೀನಾ ನಮ್ಮ ಜೊತೆ ಯುದ್ಧ ಮಾಡಿದರೆ ನಾವು ಯುದ್ಧವನ್ನು ಮುಗಿಸುತ್ತೇವೆ - ರಾಜನಾಥ್ ಸಿಂಗ್, ಕೇಂದ್ರ ಸಚಿವ
ಜೊತೆಗೆ ದೇಶವನ್ನು ಕೂಡ.


ರಾಜಕಾರಣಿಗಳದ್ದು ಹಂಗಿನ ಬದುಕು - ರಮೇಶ್‌ಕುಮಾರ್ , ಮಾಜಿ ಸ್ಪೀಕರ್
ಇನ್ನೂ ಬಿಜೆಪಿಯ ಹಂಗಿನಲ್ಲಿದ್ದೀರಾ?


ಭ್ರಷ್ಟಾಚಾರಿಗಳನ್ನು ಕಾಂಗ್ರೆಸ್, ಬಿಜೆಪಿ ಎಂದು ವಿಂಗಡಿಸಬಾರದು - ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ನಾಯಕ
ರಾಜಕಾರಣಿಗಳು ಎಂದರೆ ಸಾಕಲ್ಲವೇ?


ಭಾರತ - ಚೀನಾ ಗಡಿ ವಿವಾದದಲ್ಲಿ ಸಹಾಯ ಮಾಡಲು ನಾವು ಸಿದ್ಧ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಶಸ್ತ್ರಾಸ್ತ್ರಗಳನ್ನು ಉಭಯ ದೇಶಗಳಿಗೆ ಮಾರಾಟ ಮಾಡುವ ಮೂಲಕ ಇರಬೇಕು.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...