ಹಾವೇರಿ ಜಿಲ್ಲೆಗೆ 178.88 ಕೋಟಿ ರೂ. ಬೆಳೆ ವಿಮೆ ಮಂಜೂರು: ಬಸವರಾಜ ಬೊಮ್ಮಾಯಿ

Update: 2020-09-29 17:41 GMT

ಹಾವೇರಿ, ಸೆ.29: ಹಾವೇರಿ ಜಿಲ್ಲೆಯ 175 ಗ್ರಾಮ ಪಂಚಾಯತ್ ಗಳ 75,704 ರೈತರಿಗೆ 178.88 ಕೋಟಿ ರೂ.ಬೆಳೆ ವಿಮೆ ಮಂಜೂರಾಗಿದೆ. ಇದು ರಾಜ್ಯದಲ್ಲಿ ಅತೀ ಹೆಚ್ಚು ಬೆಳೆ ವಿಮೆ ಮೊತ್ತ ಜಿಲ್ಲೆಗೆ ಬಿಡುಗಡೆಯಾಗಿರುವುದು. ಪ್ರವಾಹದಿಂದ ಬೆಳೆ ನಷ್ಟ ಸಂಕಷ್ಟದಲ್ಲಿರುವ ರೈತರಿಗೆ ಸಮಯೋಚಿತ ಸಹಾಯ ಸಿಕ್ಕಂತಾಗಿದೆ ಎಂದು ಗೃಹ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಜಿಲ್ಲೆಯ ಬ್ಯಾಡಗಿ, ಹಾನಗಲ್, ಹಾವೇರಿ, ಹಿರೇಕೆರೂರು, ರಾಣೇಬೆನ್ನೂರು ಮತ್ತು ಶಿಗ್ಗಾಂವ ತಾಲೂಕುಗಳಲ್ಲಿ ಪ್ರಮುಖವಾಗಿ ಭತ್ತ, ಮೆಕ್ಕೆಜೋಳ, ಹತ್ತಿ ಮತ್ತು ಶೇಂಗಾ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಜಿಲ್ಲೆಯ 223 ಗ್ರಾಮ ಪಂಚಾಯತ್ ಗಳಲ್ಲಿ ಬೆಳೆ ವಿಮೆಗೆ 1,13,857 ರೈತರು ನೊಂದಾಯಿಸಿದ್ದು, ಈ ಪೈಕಿ 48 ಗ್ರಾಮ ಪಂಚಾಯತ್ ಗಳನ್ನು ಹೊರತುಪಡಿಸಿ 175 ಗ್ರಾಮ ಪಂಚಾಯತ್ ಗಳ 75,704 ರೈತರಿಗೆ 178.88 ಕೋಟಿ ರೂ.ಬೆಳೆ ವಿಮೆ ಮಂಜೂರಾಗಿದೆ ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಮಧ್ಯಂತರ ಬೆಳೆವಿಮೆ ಪರಿಹಾರವಾಗಿ 48.74 ಕೋಟಿ ರೂ.ನೀಡಲಾಗಿದೆ. ಉಳಿದ 130.14 ಕೋಟಿ ರೂ.ಶೀಘ್ರದಲ್ಲೇ ಬಿಡುಗಡೆ ಮಾಡಲು ಕೃಷಿ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಾಕಿ ಇರುವ 45 ಗ್ರಾಮ ಪಂಚಾಯತ್ ಗಳ 38,153 ರೈತರಿಗೆ ವಿಮೆ ಬಿಡುಗಡೆ ರೈತರಿಂದ ಒತ್ತಡವಿದ್ದು, ಈ ಹಿಂದೆ ಮಾಡಿರುವ ಬೆಳೆ ಕಟಾವು ಪ್ರಯೋಗಗಳ ಫಲಿತಾಂಶದ ಬಗ್ಗೆ ತೀವ್ರ ಅಸಮಾಧಾನ ಇರುವ ಹಿನ್ನೆಲೆಯಲ್ಲಿ ಸದರಿ ಗ್ರಾಮ ಪಂಚಾಯತ್ ಗಳ ಬೆಳೆಗಳ ಇಳುವರಿಯನ್ನು ಮತ್ತೊಮ್ಮೆ ಪರಿಶೀಲಿಸಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರವಾಹದಿಂದ ಬೆಳೆ ನಷ್ಟ ಆಗಿರುವ ಬಗ್ಗೆ ಸಂಪೂರ್ಣವಾಗಿ ಸರ್ವೇಮಾಡಿ ವಿವಿಧ ಬೆಳೆಗಳ ನಷ್ಟದ ವಿವರಗಳನ್ನು ರಾಜ್ಯ ಸರ್ಕಾರಕ್ಕೆ ಕೂಡಲೇ ಕಳುಹಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News