ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ಗೆಲುವು: ಕುಮಾರಸ್ವಾಮಿ

Update: 2020-09-30 11:27 GMT

ಬೆಂಗಳೂರು, ಸೆ. 30: ರಾಜರಾಜೇಶ್ವರಿ ನಗರ ಮತ್ತು ಶಿರಾ ಸೇರಿ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಜಾತ್ಯತೀತ ಜನತಾ ದಳ(ಜೆಡಿಎಸ್) ಗೆಲುವು ಸಾಧಿಸುವ ಅಚಲ ವಿಶ್ವಾಸವಿದೆ. ಶೀಘ್ರದಲ್ಲೇ ಎರಡೂ ಕ್ಷೇತ್ರಗಳಿಗೂ ಪಕ್ಷ ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಪ್ರಕಟಿಸಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ಶಿರಾ ಮತ್ತು ರಾಜರಾಜೇಶ್ವರಿನಗರ ಎರಡೂ ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರಗಳು. ಸದ್ಯದಲ್ಲೇ ಸೂಕ್ತ ಹಾಗೂ ನ್ಯಾಯಸಮ್ಮತ ಅಭ್ಯರ್ಥಿಗಳನ್ನು ಘೋಷಿಸಿ ಎರಡೂ ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲುವು ಸಾಧಿಸಲಿದೆ. ಶಿರಾ ನಾವು ಗೆದ್ದಿದ್ದ ಕ್ಷೇತ್ರ. ಆಪರೇಷನ್ ಕಮಲ ಮೆಟ್ಟಿ ಉಳಿಸಿಕೊಂಡ ಕ್ಷೇತ್ರವೂ ಹೌದು. ಶಾಸಕ ಬಿ.ಸತ್ಯನಾರಾಯಣ ಅವರು ಶಿರಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು ಎಂದು ತಿಳಿಸಿದರು.

ಸತ್ಯಣ್ಣ ಇದ್ದಿದ್ದರೆ ಶಿರಾ ನಮ್ಮಲ್ಲೆ ಇರುತ್ತಿತ್ತು. ನ್ಯಾಯ ಬದ್ಧವಾಗಿ ಶಿರಾ ನಾವು ಗೆಲ್ಲಬೇಕಾದ ಕ್ಷೇತ್ರ. ಶಿರಾ ಕ್ಷೇತ್ರದಲ್ಲಿ ನಾವು ಸೂತಕದ ಮನೆಯಲ್ಲಿದ್ದೇವೆ. ಹೀಗಿದ್ದೂ ಉಪಚುನಾವಣೆ ಎದುರಿಸಬೇಕಾಗಿರುವುದು ದುರ್ವಿಧಿ. ಅನಿವಾರ್ಯವಾಗಿ ಎದುರಿಸಬೇಕಾದ ನೋವಿನ ಚುನಾವಣೆ. ನಮ್ಮ ನೋವಿಗೆ ಗೆಲುವಿನ ಮೂಲಕ ಪರಿಹಾರ ಹುಡುಕಬಯಸುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News