ಬಾಬರಿ ಮಸೀದಿ ತೀರ್ಪು ಮಥುರೆಯಲ್ಲಿ ಶ್ರೀ ಕೃಷ್ಣ ಮಂದಿರ ನಿರ್ಮಾಣಕ್ಕೆ ಸ್ಫೂರ್ತಿ: ಸಚಿವ ಈಶ್ವರಪ್ಪ

Update: 2020-09-30 12:52 GMT

ಶಿವಮೊಗ್ಗ, ಸೆ.30: ಆರ್.ಆರ್ ನಗರ ಹಾಗೂ ಶಿರಾ ಉಪ ಚುನಾವಣೆಯಲ್ಲಿ ನಮ್ಮನ್ನು ಬಿಟ್ಟು ಗೆಲ್ಲುವವರು ಯಾರಿದ್ದಾರೆ. ಬಿಜೆಪಿ ಗೆದ್ದೇ ಗೆಲ್ಲುತ್ತದೆ, ಇದನ್ನು ಬರೆದಿಟ್ಟುಕೊಳ್ಳಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ನಮ್ಮನ್ನು ಬಿಟ್ಟು ಗೆಲ್ಲುವವರು ಯಾರಿದ್ದಾರೆ. ದೇಶದ ಹಾಗೂ ರಾಜ್ಯದ ಜನತೆಗೆ ಚುನಾವಣೆ ಅಂದರೆ ಮೋದಿ, ಯಡಿಯೂರಪ್ಪ ಅಂತ ಗೊತ್ತಾಗಿದೆ. ಇದರಿಂದ ಎರಡು ಉಪಚುನಾವಣೆಯಲ್ಲೂ ಸಹ ಬಿಜೆಪಿ ಗೆಲ್ಲುತ್ತದೆ. ಬಿಜೆಪಿಯಲ್ಲೂ ಸಹ ಸಾಕಷ್ಟು ಆಕಾಂಕ್ಷಿಗಳಿದ್ದಾರೆ ಎಂದರು.

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬಡಿದಾಡುತ್ತಿದ್ದಾರೆ. ಜೆಡಿಎಸ್‌ನ ಕುಮಾರಸ್ವಾಮಿ ನಮ್ಮದು ಒಂದು ಪಕ್ಷ ಇದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಸಿಎಂ ಸ್ಥಾನ ಹಾಗೂ ಸರ್ಕಾರವನ್ನು ಕಳೆದುಕೊಂಡರು. ಹಾಗಾಗಿ ನಾವೇ ಉಪಚುನಾವಣೆಯನ್ನು ಗೆಲ್ಲುತ್ತೇವೆ ಎಂದು ಅವರು ಹೇಳಿದರು.

ಲೋಕಸಭೆ ಚುನಾವಣೆಯಲ್ಲೂ ಸಹ ಬಿಜೆಪಿ ಅಧಿಕಾರ ಪಡೆಯಲ್ಲ ಎಂದರು. ಸ್ಯಾಂಪಲ್‌ಗೆ ಇರಲಿ ಅಂತ ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ಒಂದೊಂದು ಸ್ಥಾನ ಪಡೆದುಕೊಂಡರು. ವಿಧಾನಸಭೆ ಚುನಾವಣೆಯಲ್ಲಿ ಸಹ ಬಿಜೆಪಿ ಗೆಲುವು ಸಾಧಿಸಿತು. ಗೆಲುವು ಅಂದರೆ ಭಾರತೀಯ ಜನತಾ ಪಾರ್ಟಿಯದ್ದು ಎಂದು ಈಶ್ವರಪ್ಪ ಹೇಳಿದರು.

ಶ್ರೀಕೃಷ್ಣನ ದೇವಾಲಯ ನಿರ್ಮಾಣಕ್ಕೆ ಈ ತೀರ್ಪು ಪ್ರೇರಣೆ
ಬಾಬರಿ ಮಸೀದಿ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ 32 ಜನರನ್ನು ಖುಲಾಸೆಗೊಳಿಸಿ ತೀರ್ಪು ನೀಡಿರುವುದು ಮಥುರೆಯಲ್ಲಿ ಶ್ರೀಕೃಷ್ಣ ಮಂದಿರ ನಿರ್ಮಾಣಕ್ಕೆ ಸ್ಫೂರ್ತಿಯಾಗಲಿದೆ. ಈ ತೀರ್ಪು ರಾಷ್ಟ್ರೀಯವಾದಿಗಳಿಗೆ ಸಂತಸದ ದಿನವಾಗಿದೆ. ಈ ತೀರ್ಪು ಕೇವಲ ಅಯೋಧ್ಯೆಗೆ ಮಾತ್ರ ಸೀಮಿತವಾಗಿಲ್ಲ. ಮಥುರಾದಲ್ಲಿಯೂ ಶ್ರೀಕೃಷ್ಣನ ದೇವಾಲಯ ಕೆಡವಿ ಮಸೀದಿ ನಿರ್ಮಿಸಲಾಗಿದೆ. ಇಲ್ಲಿಯೂ ಶ್ರೀಕೃಷ್ಣನ ದೇವಾಲಯ ನಿರ್ಮಾಣಕ್ಕೆ ಈ ತೀರ್ಪು ಪ್ರೇರಣೆಯಾಗಿದೆ.
-ಕೆ.ಎಸ್.ಈಶ್ವರಪ್ಪ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News