ಬಾಬರಿ ಮಸೀದಿ ತೀರ್ಪಿನ ಬಗ್ಗೆ ರಾಜ್ಯ ರಾಜಕೀಯ ನಾಯಕರು, ಗಣ್ಯರ ಪ್ರತಿಕ್ರಿಯೆ

Update: 2020-09-30 14:00 GMT

ಬೆಂಗಳೂರು, ಸೆ.30: ಬಾಬರಿ ಮಸೀದಿ ದ್ವಂಸ ಪ್ರಕರಣದಲ್ಲಿ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ, ವಿಧಾನಸಭಾ ಸ್ಪೀಕರ್ ಸೇರಿ ರಾಜ್ಯ ರಾಜಕೀಯ ನಾಯಕರು, ಗಣ್ಯರು ಪ್ರತಿಕ್ರಿಯೆ ನೀಡಿದ್ದಾರೆ.

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್ಲ ಆರೋಪಿಗಳಿಗೂ ಆರೋಪ ಮುಕ್ತ ಎಂದು ತೀರ್ಪು ನೀಡಿದ ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯದ ಕ್ರಮ ಸ್ವಾಗತಾರ್ಹ. ಈ ತೀರ್ಪು ನ್ಯಾಯಕ್ಕೆ ಸಂದ ಜಯ. ವಿವಾದಿತ ಕಟ್ಟಡ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಮುಖಂಡರು ಮತ್ತು ಸಂತರ ಪಾತ್ರವೇನೂ ಇರಲಿಲ್ಲ ಎಂಬ ನ್ಯಾಯಯುತ ಹೇಳಿಕೆಯನ್ನು ಕೋರ್ಟ್ ಪುರಸ್ಕರಿಸಿದೆ. ಧ್ವಂಸವು ಪೂರ್ವ ನಿಯೋಜಿತ ಕೃತ್ಯವಲ್ಲ ಎಂಬ ಅಂಶವನ್ನು ಕೋರ್ಟ್ ಪರಿಗಣಿಸಿದೆ'

-ನಳೀನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ

ಬಾಬರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ವಿಶೇಷ ನ್ಯಾಯಾಲಯ ನೀಡಿದ ತೀರ್ಪು ಐತಿಹಾಸಿಕವಾಗಿದ್ದು, `ಸತ್ಯಕ್ಕೆ ಜಯ' ಎಂಬ ಶ್ರೀರಾಮನ ಧ್ಯೇಯವಾಕ್ಯಕ್ಕೆ ಪೂರಕವಾಗಿದೆ. ಸತ್ಯ ಎಂದಿಗೂ ಸತ್ಯವೇ, ಬಿಜೆಪಿಯು ಇದನ್ನೇ ಮೊದಲಿನಿಂದಲೂ ಪ್ರತಿಪಾದಿಸುತ್ತಿತ್ತು. ಈಗ ನ್ಯಾಯದೇವತೆಯೂ ನಮ್ಮ ನಂಬಿಕೆಯನ್ನು ಸಾಕ್ಷಾತ್ಕರಿಸಿದಂತಾಗಿದೆ. ಈ ನ್ಯಾಯನಿರ್ಣಯದಿಂದಾಗಿ ಪಟ್ಟಭದ್ರರಿಗೆ ಮುಖಭಂಗವಾಗಿದೆ. ಕೆಲ ರಾಜಕೀಯ ಶಕ್ತಿಗಳಿಗೆ ನ್ಯಾಯಾಂಗ ವ್ಯವಸ್ಥೆಯು ತಕ್ಕಶಾಸ್ತಿ ಮಾಡಿದೆ. ಈ ತೀರ್ಪಿನಿಂದ ಮತ್ತೊಮ್ಮೆ ಮೌಲ್ಯ ಹೆಚ್ಚಿದಂತಾಗಿದೆ'

-ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ

ಕೊನೆಗೂ ನ್ಯಾಯ ಗೆದ್ದಿದೆ. 28 ವರ್ಷಗಳ ಸುದೀರ್ಘ ಕಾನೂನು ಹೋರಾಟ ಅಂತ್ಯಗೊಂಡಿದೆ. ಬಾಬರಿ ಮಸೀದಿ ಎಂಬ ಕಟ್ಟಡದ ಪ್ರಕರಣದಲ್ಲಿ ಅನಗತ್ಯವಾಗಿ ಸಿಕ್ಕಿಸಲ್ಪಟ್ಟಿದ್ದ ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ, ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್, ಸಾಕ್ಷಿ ಮಹಾರಾಜ್ ಸೇರಿ 32 ಮಂದಿಯನ್ನು ಘನವೇತ್ತ ನ್ಯಾಯಾಲಯ ನಿರ್ದೋಷಿಗಳೆಂದು ಸಾರಿ ಅವರ ವಿರುದ್ಧ ಹೊರಿಸಲಾಗಿದ್ದ ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿದೆ. ನಿಜಕ್ಕೂ ಈ ದಿನವನ್ನು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾಗಿದೆ. ನಾನು ಈ ತೀರ್ಪನ್ನು ತುಂಬು ಹೃದಯದಿಂದ ಸ್ವಾಗತ ಮಾಡುತ್ತೇನೆ

-ಡಾ.ಸಿ.ಎನ್.ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ

ದೇಶದ ಉಚ್ಚ ನ್ಯಾಯಾಲಯವು ಇಂದು ಅಯೋಧ್ಯೆ ಬಾಬರಿ ಮಸೀದಿ ಧ್ವಂಸದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಯುತವಾದ ತೀರ್ಪು ನೀಡಿರುತ್ತದೆ. ಸುಮಾರು ಇಪ್ಪತ್ತೆಂಟು ವರ್ಷದ ನಂತರದ ಈ ತೀರ್ಪು ಬಂದಿದ್ದು, ಲಕ್ನೋ ವಿಶೇಷ ಸಿಬಿಐ ಕೋರ್ಟಿನ ನ್ಯಾಯಾಧೀಶ ಎಸ್.ಕೆ.ಯಾದವ್‍ರವರು ಪರಿಪೂರ್ಣವಾಗಿ ಎಲ್ಲ ಅಂಶಗಳನ್ನು ಸುಧೀರ್ಘವಾಗಿ ಅವಲೋಕನ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಯಾವುದೇ ಸಾಕ್ಷಿಗಳು ಲಭ್ಯವಿಲ್ಲವೆಂದು ಹಾಗೂ ಅಂದು ನಡೆದಿರುವ ಘಟನೆಗಳು ಪೂರ್ವ ಯೋಜಿತವಲ್ಲವೆಂದು ತಿಳಿಸಿದ್ದು, ಎಲ್ಲರನ್ನೂ ನ್ಯಾಯಾಲಯವೇ ಆರೋಪದಿಂದ ಮುಕ್ತಗೊಳಿಸಿದ ಈ ತೀರ್ಪನ್ನು ನಾನು ಮನಃಪೂರ್ವಕವಾಗಿ ಸ್ವಾಗತಿಸುತ್ತೇನೆ

-ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭಾ ಸ್ಪೀಕರ್

'ಭರತ ಭೂಮಿ ಪುಣ್ಯ ಭೂಮಿ ರಾಮ ನ್ಯಾಯ ಈ ನೆಲದ ಧ್ಯೇಯ' ಬಾಬರಿ ಮಸೀದಿ ಧ್ವಂಸದಲ್ಲಿ ಎಲ್.ಕೆ. ಅಡ್ವಾಣಿಯವರ ಪಾತ್ರವಿಲ್ಲ ರಾಮ ರಥವ ನಡೆಸಿದವರ ಧರ್ಮವಿಂದು ರಕ್ಷಿಸಿದೆ. ಸತ್ಯಕ್ಕೆಂದೂ ಜಯವಿರುವುದನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಧರ್ಮೋ ರಕ್ಷತಿ ರಕ್ಷಿತ'

-ವಿಜಯೇಂದ್ರ ಯಡಿಯೂರಪ್ಪ, ಬಿಜೆಪಿ ರಾಜ್ಯ ಉಪಾಧ್ಯಕ್ಷ

`ಸುಪ್ರೀಂ ಕೋರ್ಟ್ ಅಯೋಧ್ಯೆ ವ್ಯಾಜ್ಯಕ್ಕೆ ಸಂಬಂಧಿಸಿದ ತೀರ್ಪಿಗೆ ಅನುಗುಣವಾಗಿ ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ಇಂದು ಬಂದಿದೆ. ಬಾಬರಿ ಮಸೀದಿ ಧ್ವಂಸಕ್ಕೆ ಕಾರಣಕರ್ತರಾದ ಎಲ್.ಕೆ.ಅಡ್ವಾಣಿ ಸೇರಿದಂತೆ ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸುವ ಮೂಲಕ ಅವರ ಪ್ರತಿಮೆಗಳನ್ನು ಮಂದಿರದಲ್ಲಿ ಪ್ರತಿಷ್ಠಾಪಿಸಲು ಸಹಕರಿಸಿದೆ. ವಿಪರ್ಯಾಸವೆಂದರೆ ಈ ಆರೋಪಿಗಳೆಲ್ಲರನ್ನೂ ಸಹ ಇತಿಹಾಸ ಕಾಲಚಕ್ರದ ಕಸದ ಬುಟ್ಟಿಗೆ ಹಾಕಿರುವುದು ನಿಜವಾದ ಜನರ ತೀರ್ಪು ಆಗಿದೆ

-ಪ್ರೊ.ರವಿವರ್ಮಕುಮಾರ್, ಸಂವಿಧಾನ ತಜ್ಞ ಹಾಗೂ ಮಾಜಿ ಅಡ್ವಕೇಟ್ ಜನರಲ್

ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ್ದು ಯಾರು ಎಂದು ಇಡೀ ಪ್ರಪಂಚಕ್ಕೆ ಗೊತ್ತು. ಆದರೆ, ಸಿಬಿಐ ವಿಶೇಷ ನ್ಯಾಯಾಲಯ ಇಂದು ಸಾಕ್ಷ್ಯಾಧಾರಗಳಿಲ್ಲ ಎಂದು ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸಿ ನೀಡಿರುವ ತೀರ್ಪಿನ ಬಗ್ಗೆ ಎಲ್ಲರೂ ಗಂಭೀರವಾಗಿ ಆಲೋಚಿಸಬೇಕಿದೆ. ಏನೇ ಇದ್ದರೂ ನ್ಯಾಯಾಲಯದ ತೀರ್ಪನ್ನು ಎಲ್ಲರೂ ಗೌರವಿಸಬೇಕಿದೆ

-ಲಕ್ಷ್ಮೀ ನಾರಾಯಣ ನಾಗವಾರ, ದಸಂಸ ರಾಜ್ಯ ಸಂಚಾಲಕ

ರಾಮಜನ್ಮಭೂಮಿ ವಿವಾದ ಇತ್ಯರ್ಥಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ತೀರ್ಪು ಹೊರಬಂದಾಗಲೇ ಈ ಬಗ್ಗೆ ಸೂಚನೆ ಸಿಕ್ಕಿತ್ತು. ಜನ ಸಾಮಾನ್ಯರಿಗೆ ನ್ಯಾಯಾಂಗ ವ್ಯವಸ್ಥೆಯ ಮೇಲಿದ್ದ ವಿಶ್ವಾಸ ಹುಸಿಯಾಗಿದೆ. ದಲಿತರ ಮೇಲಿನ ದೌರ್ಜನ್ಯ, ಹತ್ಯಾಕಾಂಡ ಪ್ರಕರಣಗಳಲ್ಲಿ ಒಬ್ಬ ಆರೋಪಿಗೂ ಶಿಕ್ಷೆ ಆಗಿಲ್ಲ. ಇದೀಗಲೂ ಅದೇ ಬಾಬರಿ ಮಸೀದಿ ಧ್ವಂಸ ಮಾಡಿದರೂ ಆರೋಪಿಗಳೆಲ್ಲ ದೋಷಮುಕ್ತರಾಗಿದ್ದಾರೆ. ಯಾರು ಯಾರ ಋಣವನ್ನು ತೀರಿಸಿದ್ದಾರೆಂಬುದು ಸ್ಪಷ್ಟ

-ಮಾವಳ್ಳಿ ಶಂಕರ್, ದಸಂಸ ಪ್ರಧಾನ ಸಂಚಾಲಕ

ಸಿಬಿಐ ವಿಶೇಷ ಕೋರ್ಟ್ ತೀರ್ಪಿನಿಂದ ಪಾರಾಗಿದ್ದಾರೆ ನಿಜ. ಆದರೆ, ನಿಸರ್ಗ ಈಗಾಗಲೇ ತೀರ್ಪು ನೀಡಿದೆ..!? ಈ ತೀರ್ಪಿನನ್ವಯ ಇವರ ಪಕ್ಷ ಅಧಿಕಾರದಲ್ಲಿ ಇದ್ದರೂ ಇವರಿಗೆ ಪವರ್ ಇಲ್ಲ! ಇದರ ಅರ್ಥ `ನ್ಯಾಚುರಲ್ ಜಸ್ಟಿಸ್ ಈಗಾಗಲೇ ಅರ್ಧ ಜಾರಿಯಾಗಿದೆ'. ಮಿಕ್ಕದ್ದು ಆಗಬೇಕಷ್ಟೆ.'

-ಡಾ.ಸಿ.ಎಸ್.ದ್ವಾರಕಾನಾಥ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ

ಅನಿರೀಕ್ಷಿತ ತೀರ್ಪು: ನಸೀರ್ ಅಹ್ಮದ್

ಬಾಬರಿ ಮಸೀದಿ ಧ್ವಂಸಗೊಳಿಸಿದ್ದನ್ನು 2019ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ಕ್ರಿಮಿನಲ್ ಆ್ಯಕ್ಟ್ ಎಂದು ತಿಳಿಸಿದೆ. ಆದರೆ, ಸಿಬಿಐ ವಿಶೇಷ ನ್ಯಾಯಾಲಯ ಇದೊಂದು ಆಕಸ್ಮಿಕ ಘಟನೆ ಎಂದಿದೆ. ಸರಿ ಸುಮಾರು 28 ವರ್ಷಗಳ ಕಾಲ ವಿಚಾರಣೆ ನಡೆಸಿ, ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ನೀಡಿರುವ ತೀರ್ಪು ಅನಿರೀಕ್ಷಿತವಾದದ್ದು ಎಂದು ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News