ಕೊರೋನ ಸಾವಿನ ಬಗ್ಗೆ ಸಿದ್ದರಾಮಯ್ಯ ಆರೋಪಕ್ಕೆ ಡಾ.ಕೆ.ಸುಧಾಕರ್ ಸ್ಪಷ್ಟನೆ

Update: 2020-09-30 16:37 GMT

ಬೆಂಗಳೂರು, ಸೆ.30: ಕೊರೋನ ಸಂಬಂಧಿತ ಎಲ್ಲ ಅಂಕಿ-ಅಂಶಗಳನ್ನು ಪಾರದರ್ಶಕವಾಗಿ ಪ್ರಕಟಿಸುವಲ್ಲಿ ನಮ್ಮ ಸರಕಾರ ಇಡೀ ದೇಶದಲ್ಲೇ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಕೋಲಾರದಲ್ಲಿ ಕೊರೋನದಿಂದ ಸಾವಿನಪ್ಪಿದವರ ಬಗ್ಗೆ ನಿಖರ ಅಂಕಿ-ಅಂಶ ನೀಡಿಲ್ಲವೆಂದು ಸಿದ್ದರಾಮಯ್ಯ ಅವರ ಆರೋಪದ ಟ್ವೀಟ್‍ಗೆ, ಟ್ವೀಟ್ ಮೂಲಕವೇ ಸಚಿವರು ಉತ್ತರ ನೀಡಿದ್ದಾರೆ.

ಸೆಪ್ಟೆಂಬರ್ 19 ರಂದು ಕೋಲಾರದ ಆರ್.ಎಲ್.ಜೆ ಆಸ್ಪತ್ರೆಯಲ್ಲಿ 3 ಸಾವು ಸಂಭವಿಸಿತ್ತು. ಆಸ್ಪತ್ರೆಯು ಮರಣದ ಕಾರಣದ ಬಗ್ಗೆ ನಿಗದಿತ ನಮೂನೆಗಳಲ್ಲಿ ಮಾಹಿತಿ ನೀಡಲು ವಿಳಂಬವಾದ ಕಾರಣ ಅದನ್ನು ಸೆ. 24 ರಂದು ವರದಿ ಮಾಡಲಾಗಿತ್ತು. ಸೆ.20ರಂದು ಸಂಭವಿಸಿದ 1 ಸಾವನ್ನು ಇದೇ ಕಾರಣಕ್ಕಾಗಿ ಸೆ. 25ರಂದು ವರದಿ ಮಾಡಲಾಗಿದೆ.

ಕೊರೋನ ಸಂಬಂಧ ನಿಖರ ಮಾಹಿತಿ ನೀಡುವಲ್ಲಿ ಹಾಗೂ ನಿರ್ವಹಣೆಯಲ್ಲಿ ಇಡೀ ದೇಶದಲ್ಲೇ ನಮ್ಮ ಸರಕಾರ ಅತ್ಯಂತ ದಕ್ಷತೆ, ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾಧ್ಯಮ ವರದಿಯಿಂದ ಬಹಿರಂಗವಾಗಿದೆ. ಅಷ್ಟಕ್ಕೂ ಕೊರೋನ ಸಂಬಂಧ ಯಾವುದೇ ವಿಷಯವನ್ನೂ ಮರೆಮಾಚುವ ಉದ್ದೇಶವೂ ಇಲ್ಲ ಮತ್ತು ಅದರ ಅವಶ್ಯಕತೆಯೂ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News