ಉತ್ತರ ಪ್ರದೇಶದಲ್ಲಿ ಅತ್ಯಾಚಾರಿಗಳಿಗೆ ಸಹಕಾರ ನೀಡುವ ರೇಪಿಸ್ಟ್ ಸರಕಾರವಿದೆ: ಮಾಜಿ ಡಿಸಿಎಂ ಪರಮೇಶ್ವರ್

Update: 2020-10-02 13:17 GMT

ತುಮಕೂರು, ಅ.2: ಉತ್ತರ ಪ್ರದೇಶದಲ್ಲಿ ಅತ್ಯಾಚಾರಿಗಳಿಗೆ ಸಹಕಾರ ನೀಡುವ ರೇಪಿಸ್ಟ್ ಸರಕಾರವಿದೆ ಎಂದು ಮಾಜಿ ಡಿಸಿಎಂ ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದಾರೆ

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಅತ್ಯಾಚಾರ, ಕೊಲೆಗಳು ನಡೆಯುತ್ತಿದ್ದರೂ ಯೋಗಿಯವರು ನೋಡುತ್ತಾ ಕುಳಿತಿದ್ದಾರೆ. ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿರುವ ದಲಿತ ಬಾಲಕಿಯ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲು ಹೋಗಿದ್ದ ಕಾಂಗ್ರೆಸ್‌ನ ವರಿಷ್ಠರಾದ ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿಯವರನ್ನು ಪೊಲೀಸರು ಬಂಧಿಸಿ, ಅವರೊಂದಿಗೆ ಅನುಚಿತವಾಗಿ ವರ್ತನೆ ಮಾಡಿರುವುದು ಖಂಡನೀಯ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಹೇಳಿದರು.

ಶಿರಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಖಂಡಿತಾ ಜಯ ಸಾಧಿಸಲಿದೆ. ಜಿಲ್ಲಾ ಮುಖಂಡರೆಲ್ಲಾ ಒಗ್ಗಟ್ಟಾಗಿ ಚುನಾವಣೆಯಲ್ಲಿ ಕಾರ್ಯನಿರ್ವಹಿಸಲಿದ್ದೇವೆ ಎಂದರು.

ಮಾಜಿ ಶಾಸಕ ರಾಜಣ್ಣ ಮಾತನಾಡಿ, ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ ಅವರೊಂದಿಗೆ ಪೊಲೀಸರು ವರ್ತಿಸಿರುವ ಕ್ರಮ ಸರಿಯಿಲ್ಲ, ಇದನ್ನು ಕಾಂಗ್ರೆಸ್ ಖಂಡಿಸುತ್ತದೆ. ಜಿಲ್ಲಾ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತವಿಲ್ಲ, ಶಿರಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ. ಚುನಾವಣೆ ದೃಷ್ಟಿಯಲ್ಲಿ ಕಾಡುಗೊಲ್ಲರ ಅಭಿವೃದ್ದಿ ನಿಗಮ ಮಾಡಿರುವುದರಿಂದ ಗೊಲ್ಲ ಸಮುದಾಯದಲ್ಲಿ ಬಿರುಕು ಉಂಟಾಗಿದೆ. ಆದ್ದರಿಂದ ಯಾದವರ ಅಭಿವೃದ್ದಿ ನಿಗಮ ಮಾಡಿ ಊರುಗೊಲ್ಲ ಮತ್ತು ಕಾಡುಗೊಲ್ಲರ ನಡುವೆ ಸಹಮತ ಸಾಧಿಸಿ ಜನಾಂಗದ ಅಭಿವೃದ್ದಿಗೆ ಸರಕಾರ ಸಹಕರಿಸಬೇಕು ಎಂದರು.

ಶಿರಾ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಮಾತನಾಡಿ, ಕಳೆದ ಅವಧಿಯಲ್ಲಿ 2 ಸಾವಿರ ಕೋಟಿಗೂ ಅಧಿಕ ಅನುದಾನವನ್ನು ಶಿರಾ ಕ್ಷೇತ್ರಕ್ಕೆ ತಂದು ಅಭಿವೃದ್ದಿಪಡಿಸಲಾಗಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಮದಲೂರು ಕೆರೆಗೆ ಹೇಮಾವತಿ ನೀರನ್ನು ಬಿಡುವ ಬಗ್ಗೆ ಆರಂಭ ಮಾಡಿದ್ದೇ ನಾನು. ಆದರೆ ಬಿಜೆಪಿ ರಾಜಕೀಯಕ್ಕಾಗಿ ಮದಲೂರು ಕೆರೆಯನ್ನು ಬಳಸಿಕೊಳ್ಳುತ್ತಿದೆ ಎಂದು ದೂರಿದರು.

ವೃದ್ದಾಪ್ಯ, ವಿಧವಾ ವೇತನ ಸೇರಿದಂತೆ ಇನ್ನಿತರ ಮಾಸಿಕ 600 ರೂ. ಭತ್ಯೆ ನೀಡಲು ಸರಕಾರದ ಬಳಿ ಹಣವಿಲ್ಲ. ರಾಜಕೀಯಕ್ಕಾಗಿ ತರಾತುರಿಯಲ್ಲಿ ಆರಂಭಿಸಿರುವ ಕಾಡುಗೊಲ್ಲರ ಅಭಿವೃದ್ದಿ ನಿಗಮಕ್ಕೆ ಅನುದಾನ ನೀಡಲು ಹಣವಿದೆಯೇ ಎಂದು ಪ್ರಶ್ನಿಸಿದ ಅವರು, ಇದೊಂದು ರಾಜಕೀಯ ಡ್ರಾಮ ಎಂದು ದೂರಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡ, ಶಾಸಕ ವೆಂಕಟರಮಣಪ್ಪ, ಮಾಜಿ ಶಾಸಕರಾದ ರಫೀಕ್ ಅಹಮದ್, ಷಡಕ್ಷರಿ, ಷಪಿ ಅಹಮದ್, ಮುಖಂಡರಾದ ಮುರುಳೀಧರ ಹಾಲಪ್ಪ, ಹೊನ್ನಗಿರಿಗೌಡ, ವೆಂಕಟೇಶ್, ಸಾಸಲು ಸತೀಶ್ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News