ಕೃಷಿ ವಿರೋಧಿ ಮಸೂದೆಗಳನ್ನು ವಿರೋಧಿಸಿ ಐಕ್ಯ ಹೋರಾಟ ಸಮಿತಿ ವತಿಯಿಂದ ಉಪವಾಸ ಸತ್ಯಾಗ್ರಹ

Update: 2020-10-02 18:51 GMT

ಮೈಸೂರು,ಅ.2: ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೃಷಿ ವಿರೋಧಿ ಮಸೂದೆಗಳನ್ನು ವಿರೋಧಿಸಿ ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ ಸಮಿತಿ ವತಿಯಿಂದ ಉಪವಾಸ ಸತ್ಯಾಗ್ರಹ ನಡೆಸಲಾಯಿತು.

ನಗರದ ಗಾಂಧಿವೃತ್ತದಲ್ಲಿ ಶುಕ್ರವಾರ ಜಮಾವಣೆಗೊಂಡ ಪ್ರತಿಭಟನಕಾರರು ಮೊದಲಿಗೆ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಸರಕಾರದ ವಿರುದ್ಧ ಕೃಷಿ ವಿರೋಧಿ ಮಸೂದೆಗಳ ಜಾರಿ ಖಂಡಿಸಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಮಾತನಾಡಿ, ಕೇಂದ್ರ ಮತ್ತ ರಾಜ್ಯ ಬಿಜೆಪಿ ಸರ್ಕಾರಗಳು ರೈತ, ಕಾರ್ಮಿಕ, ಜನವಿರೋಧಿ ಮಸೂದೆಗಳನ್ನು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ತಂದು ಜನರ ಬದುಕನ್ನು ಕಿತ್ತುಕೊಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಗಳು ಕಾರ್ಪೋರೇಟರ್ ಕಂಪನಿಗಳ ಪರವಾದ ನೀತಿಗಳನ್ನು ರೂಪಿಸುತ್ತಿವೆ. ಈ ಮಸೂದೆಗಳ ವಿರುದ್ಧ ದೇಶಾದ್ಯಂತ ರೈತರು, ದಲಿತರು, ಕಾರ್ಮಿಕರು, ಜನಸಮೂಹ ಬೀದಿಗೆ ಇಳಿದಿದ್ದು, ಮುಂದುವರಿದ ಭಾಗವಾಗಿ ಗಾಂಧೀಜಿಯವರ ಜನ್ಮದಿನದಂದು ರಾಷ್ಟ್ರವ್ಯಾಪಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಹೇಳಿದರು.

ಸತ್ಯಾಗ್ರಹದಲ್ಲಿ ಹಿರಿಯ ಸಮಾಜವಾದಿ ಪ.ಮಲ್ಲೇಶ್, ಸಾಹಿತಿ ಪ್ರೊ.ಶಬ್ಬೀರ್ ಮುಸ್ತಫ, ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ದಸಂಸದ ದೊಡ್ಡಣ್ಣ, ಆಲಗೂಡು ಶಿವಕುಮಾರ್, ಮಲ್ಲಹಳ್ಳಿ ನಾರಾಯಣ್, ಕಲ್ಲಹಳ್ಳಿ ಕುಮಾರ್, ಸ್ವರಾಜ್ ಇಂಡಿಯಾದ ಪುನೀನ್ ಎನ್., ಮಂಜು, ಚಂದ್ರೇಗೌಡ, ಚಂದ್ರಶೇಖರ್ ಮೇಟಿ, ಜಗದೀಶ್ ಸೂರ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News