ಡ್ರಗ್ಸ್ ದಂಧೆ ವಿಚಾರದಲ್ಲಿ ಪೊಲೀಸ್ ಗುಪ್ತಚರ ಇಲಾಖೆ ವಿಫಲವಾಗಿಲ್ಲ: ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್

Update: 2020-10-03 15:54 GMT

ಮಡಿಕೇರಿ, ಅ.3: ರಾಜ್ಯದಲ್ಲಿ ಮಾದಕ ಡ್ರಗ್ಸ್ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಚುರುಕಿನಿಂದ ಸಾಗಿದ್ದು ಚಿತ್ರಕಲಾವಿದರೂ ಸೇರಿದಂತೆ ಡ್ರಗ್ ಜಾಲದಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ. 

ಪೊಲೀಸ್ ಮಹಾ ನಿರ್ದೇಶಕ ಸ್ಥಾನ ಅಲಂಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಗೆ ಆಗಮಿಸಿದ ಪ್ರವೀಣ್ ಸೂದ್, ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಕೊಡಗು ಪೊಲೀಸ್ ಇಲಾಖೆ ಕೊರೋನ ಸಂದರ್ಭ ಕೈಗೊಂಡ ಕಾರ್ಯಗಳು, ಪ್ರಾಕೃತಿಕ ವಿಕೋಪ ಎದುರಾದಾಗ ನಡೆಸಿದ ರಕ್ಷಣಾ ಕಾರ್ಯಾಚರಣೆ ಮತ್ತು ಕಾನೂನು ಸುವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಜಿಲ್ಲೆಯಲ್ಲಿ ಮಾದಕ ವಸ್ತುಗಳ ಕಾರ್ಯಾಚರಣೆ ಮತ್ತು ಹತ್ತಿಕ್ಕುವ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರಲ್ಲದೇ, ಜಿಲ್ಲಾ ಪೊಲೀಸ್ ಇಲಾಖೆ ಮೂಲಭೂತವಾಗಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೂದ್, ರಾಜ್ಯದಲ್ಲಿ ಡ್ರಗ್ಸ್ ದಂಧೆಯನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಕಳೆದ 10 ವರ್ಷಗಳ ಮಾದಕ ವಸ್ತು ಪತ್ತೆ ಪ್ರಕರಣಗಳನ್ನು ಪಟ್ಟಿ ಮಾಡಿದರೆ, ಬೆಂಗಳೂರು ಹೊರತುಪಡಿಸಿದಂತೆ ಕೋಲಾರ, ಗುಲ್ಬರ್ಗ, ಮೈಸೂರು, ರಾಯಚೂರುಗಳಲ್ಲಿಯೂ ಹೆಚ್ಚಿನ ಪ್ರಕರಣಗಳು ಕಂಡು ಬಂದಿದೆ. ಡ್ರಗ್ಸ್ ದಂಧೆ ವಿಚಾರದಲ್ಲಿ ಪೊಲೀಸ್ ಗುಪ್ತಚರ ಇಲಾಖೆ ವಿಫಲವಾಗಿಲ್ಲ ಎಂದು ಸಮರ್ಥಿಸಿಕೊಂಡ ಪ್ರವೀಣ್ ಸೂದ್, ಕ್ರಿಮಿನಲ್‍ಗಳನ್ನು ಹತ್ತಿಕ್ಕುವುದು ಮತ್ತು ಅನ್ಯಾಯದ ವಿರುದ್ಧ ಪೊಲೀಸ್ ಕಾರ್ಯಾಚರಣೆ ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ಒಂದೇ ದಿನದಲ್ಲಿ ಇದು ಕೊನೆಯಾಗುವುದಿಲ್ಲ. ತಪ್ಪು ಮಾಡಿದ ಪೊಲೀಸರ ವಿರುದ್ಧವೂ ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. 

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಹಕ್ಕಿದೆ, ಹೀಗಾಗಿ ಕೆಲವರು ಡ್ರಗ್ಸ್ ವಿಚಾರದಲ್ಲಿ ಪೊಲೀಸ್ ಇಲಾಖೆ ವಿರುದ್ದ ಆರೋಪ ಮಾಡಿರಬಹುದು ಎಂದು ಹೇಳಿದ ಪ್ರವೀಣ್ ಸೂದ್, ಯಾವ ಇಲಾಖೆ ಬಗ್ಗೆ ಆರೋಪ ಮಾಡಲಾಗಿತ್ತೋ ಇಂದು ಅದೇ ಇಲಾಖೆ ಡ್ರಗ್ ದಂಧೆಯನ್ನು ಮಟ್ಟ ಹಾಕುತ್ತಿದೆ ಎಂದು ಸಮರ್ಥಿಸಿಕೊಂಡರು. ಚಲನಚಿತ್ರ ನಟ ನಟಿಯರನ್ನು ಮಾತ್ರವೇ ಡ್ರಗ್ ದಂಧೆಯಲ್ಲಿ ಗುರಿ ಮಾಡಲಾಗುತ್ತಿಲ್ಲ. ಎಲ್ಲಾ ಡ್ರಗ್ ಪೂರೈಕೆದಾರರು, ಬಳಕೆದಾರರು ಸೇರಿದಂತೆ ಒಂದು ಅಕ್ರಮ ವ್ಯವಸ್ಥೆಯ ವಿರುದ್ದವೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಕೊಡಗು ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಪ್ರಮಾಣ ಇತರ ಜಿಲ್ಲೆಗಳಿಗೆ ಹೋಲಿಸಿದರೆ ತೀರಾ ಕಡಿಮೆ ಇದ್ದು, ಜಿಲ್ಲೆಯ ಬಗ್ಗೆ ಹೆಚ್ಚಿನ ಚಿಂತೆ ತಮಗಿಲ್ಲ. ಆದರೆ ಹೋಂಸ್ಟೇ, ರೆಸಾರ್ಟ್ ಗಳಲ್ಲಿ ಮಾದಕ ದ್ರವ್ಯ ಬಳಸಲಾದ ಪಾರ್ಟಿಗಳು ನಡೆದಿದೆಯೇ ಎಂಬ ಬಗ್ಗೆಯೂ ಚರ್ಚೆ ನಡೆಸಿದ್ದೇನೆ. ಪ್ರವಾಸಿ ತಾಣವಾಗಿರುವ ಜಿಲ್ಲೆಯಲ್ಲಿ ಡ್ರಗ್ ಪ್ರಕರಣಗಳ ಬಗ್ಗೆ ಪರಿಶೀಲನೆ ಮತ್ತು ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಪ್ರವೀಣ್ ಸೂದ್ ಹೇಳಿದರು. 

1500 ಪೊಲೀಸರಿಗೆ ಕೋವಿಡ್
ಕೊರೋನ ಸಂದರ್ಭ ಪೊಲೀಸ್ ಇಲಾಖೆ ಫ್ರಂಟ್ ಲೈನ್ ವಾರಿಯರ್ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಹೀಗಾಗಿ 8 ಸಾವಿರ ಮಂದಿ ಪೊಲೀಸರು ಕೋವಿಡ್‍ಗೆ ತುತ್ತಾಗಿದ್ದು, ಇಂದು 1500 ಪೊಲೀಸರು ಕೊರೋನ ಸೋಂಕಿತರಾಗಿದ್ದಾರೆ. ಒಟ್ಟು 73 ಪೊಲೀಸ್ ಸಿಬ್ಬಂದಿಗಳು ಕೊರೋನದಿಂದ ಜೀವ ಕಳೆದುಕೊಂಡಿದ್ದಾರೆ ಎಂದು ಪ್ರವೀಣ್ ಸೂದ್ ಮಾಹಿತಿ ನೀಡಿದರು. ಕೊರೋನ ಸೋಂಕಿತ ಪೊಲೀಸರಿಗೆ ಮಾನಸಿಕ ಸ್ಥೈರ್ಯ ತುಂಬಲು ತಾವು ರಾಜ್ಯವ್ಯಾಪಿಯ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದೂ ಹೇಳಿದರು. 

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಪ್ರಮಾಣ ಕಡಿಮೆ ಇದೆ. ಜಿಲ್ಲಾಡಳಿತ ಮತ್ತು ಇಲ್ಲಿನ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುವುದಾಗಿ ಪ್ರವೀಣ್ ಸೂದ್ ಹೇಳಿದರು. ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ಪೊಲೀಸರು ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ ಉತ್ತಮ ರೀತಿಯಲ್ಲಿ ರಕ್ಷಣಾ ಕಾರ್ಯ ನಿರ್ವಹಿಸಿದ್ದಾರೆ. ಕಳೆದ 2 ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಜಿಲ್ಲೆಯಲ್ಲಿ ವಿಕೋಪ ಘಟಿಸಿದ್ದರೂ ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ಪ್ರವೀಣ್ ಸೂದ್ ಹೇಳಿದರು. 

ಕೊಡಗಿನ ಪೊಲೀಸರ ವಸತಿ ಗೃಹಗಳು ಮಳೆಗೆ ಸೋರುತ್ತಿರುವ ಬಗ್ಗೆ ಹಾಗೂ ವಾಹನಗಳ ದುರಸ್ತಿ ಕುರಿತು ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಪರಿಹರಿಸಲಾಗುತ್ತದೆ ಎಂದು ಭರವಸೆ ನೀಡಿದರು. 

ಸುದ್ದಿಗೋಷ್ಟಿಯಲ್ಲಿ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ವಿಪುಲ್ ಕುಮಾರ್ ಹಾಗೂ ಕೊಡಗು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕ್ಷಮಾಮಿಶ್ರ ಉಪಸ್ಥಿತರಿದ್ದರು.

ಕಾವೇರಿ ಪಡೆ
ಬಳಿಕ ಕಾವೇರಿ ಪಡೆ, ತುರ್ತು ಸ್ಪಂದನಾ ತಂಡ, ಶ್ವಾನ ದಳ, ಕೊಡಗು ಕಮಾಂಡೋ ಸಿಬ್ಬಂದಿಗಳ ಜೊತೆ ಸಮಾಲೋಚನೆ ನಡೆಸಿದ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಕಾನೂನು ಸುವ್ಯವಸ್ಥೆ, ಡ್ರಗ್ಸ್ ದಂಧೆ, ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚಿನ ನಿಘಾ ವಹಿಸುವಂತೆ ಸಿಬ್ಬಂದಿಗಳಿಗೆ ಸಲಹೆ ನೀಡಿದರು.

ಮುಂದಿನ 3 ತಿಂಗಳ ಬಳಿಕ ರಾಷ್ಟ್ರೀಯ ತುರ್ತು ಸೇವೆಯ 112 ಸಂಖ್ಯೆ ಯೋಜನೆ ರಾಜ್ಯದಲ್ಲಿ ಜಾರಿಗೆ ಬರಲಿದೆ. ಕೊಡಗು ಜಿಲ್ಲೆಗೂ ಕೂಡ 112 ಸಂಖ್ಯೆಯ ಸೇವೆ ಲಭ್ಯವಾಗಲಿದ್ದು, ದಸರಾ ಕಳೆದ ಬಳಿಕ ಈ ಯೋಜನೆ ಅಧಿಕೃತವಾಗಿ ಅಸ್ತಿತ್ವಕ್ಕೆ ಬರಲಿದೆ. ಈ ಬಗ್ಗೆಯೂ ಸೂಕ್ತ ತಯಾರಿ ಮಾಡಿಕೊಳ್ಳುವಂತೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಎಲ್ಲಾ ವರ್ಗದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 112 ಸಂಖ್ಯೆಗೆ ಡಯಲ್ ಮಾಡಿದರೆ ಎಲ್ಲಾ ತುರ್ತು ಸೇವೆಗಳು ಸಾರ್ವಜನಿಕರಿಗೆ ಸಿಗಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News