ಸೇವಾ ಸಿಂಧು ಪೋರ್ಟಲ್ ಸ್ಥಗಿತ; ಸಾರ್ವಜನಿಕರ ಪರದಾಟ

Update: 2020-10-04 16:43 GMT

ಬೆಂಗಳೂರು, ಅ. 4: ಒಂದು ತಿಂಗಳಿಂದ ಸಿಎಸ್‍ಸಿ ಸೇವಾ ಕೇಂದ್ರಗಳಲ್ಲಿ ಇರುವ ಸೇವಾ ಸಿಂಧು ಪೋರ್ಟಲ್ ಸ್ಥಗಿತಗೊಂಡಿದ್ದು ರಾಜ್ಯದಾದ್ಯಂತ ಸಾರ್ವಜನಿಕರು ಸರಕಾರದ ವಿವಿಧ ಇಲಾಖೆಗಳ ಸೇವೆ ಪಡೆಯಲು ಪರದಾಡುತ್ತಿದ್ದಾರೆ. 

ಒಂದೇ ಸೂರಿನಡಿ ಸರಕಾರಿ ಸೇವೆ ಒದಗಿಸುವ ಉದ್ದೇಶದಿಂದ 69 ಇಲಾಖೆಗಳ 629 ನಾಗರಿಕ ಸೇವೆಗಳನ್ನು ಸೇವಾಸಿಂಧು ಪೋರ್ಟಲ್‍ನೊಂದಿಗೆ ಸಂಯೋಜಿಸಲಾಗಿದೆ.

ಇ-ಆಡಳಿತ ಇಲಾಖೆಯ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ (ಇಡಿಸಿಎಸ್), ಸೇವಾಸಿಂಧು ಅನುಷ್ಠಾನ ಜವಾಬ್ದಾರಿ ಹೊತ್ತಿದೆ. ಜನರು ಸರಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸರಕಾರ ರಾಜ್ಯದಾದ್ಯಂತ 15 ಸಾವಿರಕ್ಕೂ ಹೆಚ್ಚು ಸಿಎಸ್‍ಸಿಗಳಿಗೆ ಅನುಮತಿ ನೀಡಿದೆ. ಆದರೆ, ಸಿಎಸ್‍ಸಿಗಳಲ್ಲಿ ಏಕಾಏಕಿ ಸೇವಾಸಿಂಧು ಪೋರ್ಟಲ್ ಸ್ಥಗಿತಗೊಂಡಿದ್ದು ಜನರು ವಿವಿಧ ದಾಖಲಾತಿ ಪಡೆಯಲು ಮತ್ತೆ ಸರ್ಕಾರಿ ಕಚೇರಿಗಳಿಗೆ ಎಡತಾಕುವಂತಾಗಿದೆ. ಜನರಿಗೆ ಅತ್ಯವಶ್ಯಕವಾದ ಆರೋಗ್ಯ, ಶಿಕ್ಷಣ, ಕಂದಾಯ, ಸಾರಿಗೆ ಸೌಲಭ್ಯಗಳು ದೊರೆಯುತ್ತಿಲ್ಲ. ಇದರಿಂದ ಕಾರ್ಮಿಕರು, ರೈತರು, ಮಕ್ಕಳು, ಮಹಿಳೆ, ವೃದ್ಧರು ಹಾಗೂ ಅಂಗವಿಕಲರಿಗೆ ಸಮಸ್ಯೆಯಾಗಿದೆ.

ಮೇ ತಿಂಗಳಲ್ಲಿ ಮುಕ್ತಾಯವಾಗಿದ್ದ ಕಾರ್ಮಿಕರ ಕಾರ್ಡ್ ನವೀಕರಣಕ್ಕೆ ಅರ್ಜಿ ಹಾಕಲು ಸಾಧ್ಯವಾಗುತ್ತಿಲ್ಲ. ಕಾರ್ಮಿಕರ ಇಲಾಖೆಯಲ್ಲಿ ಕೇಳಿದರೆ ಸಿಎಸ್‍ಸಿಯಲ್ಲೇ ಅರ್ಜಿ ಸಲ್ಲಿಸಿ ಇಲ್ಲಿಗೆ ಬರಬೇಕು ಎಂದು ಹೇಳುತ್ತಿದ್ದಾರೆ. ಕಾರ್ಡ್ ನವೀಕರಣಗೊಳ್ಳದಿದ್ದರೆ ಮಕ್ಕಳು ಶಿಕ್ಷಣದ ಸಹಾಯಧನ ಪಡೆಯಲು ಸಾಧ್ಯವಾಗುವುದಿಲ್ಲ ಎಂಬುದು ಪೋಷಕರ ಅಳಲು. ಗ್ರಾಮೀಣ ಜನರಿಗೂ ಸಕಾಲದಲ್ಲಿ ಸೇವೆ ಒಗಿಸುವ ಉದ್ದೇಶದಿಂದ ಬೆಂಗಳೂರು ಒನ್, ಮೈಸೂರು ಒನ್, ಕರ್ನಾಟಕ ಒನ್ ಕೇಂದ್ರಗಳ ಜೊತೆಗೆ ಸಿಎಸ್‍ಸಿಗಳಿಗೂ ಸೇವಾ ಸಿಂಧು ಪೋರ್ಟಲ್‍ನ ಲಾಗಿನ್ ಐಡಿ ನೀಡಲಾಗಿದೆ. ಪ್ರತಿ ಸೇವೆಯ ನಿಗದಿತ ಶುಲ್ಕದಲ್ಲಿ ಶೇ.25ರಿಂದ30ರಷ್ಟು ಸೇವಾ ಕೇಂದ್ರಗಳಿಗೆ ಸಿಗುತ್ತದೆ.

ಕಂಪ್ಯೂಟರ್ ನಲ್ಲಿ ಸೇವಾಸಿಂಧು ಪುಟ ತೆರೆದುಕೊಳ್ಳುತ್ತದೆ. ಆದರೆ ಅರ್ಜಿ ತುಂಬಿದ ನಂತರ ಶುಲ್ಕ ಪಾವತಿಸುವ ವ್ಯಾಲೆಟ್ ಸ್ಥಗಿತಗೊಂಡಿದೆ. ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಿದ ರಶೀದಿ ನೀಡಲು, ಅಪಾರ ಪ್ರಮಾಣದ ಅರ್ಜಿಗಳು ಬಾಕಿ ಉಳಿದಿವೆ ಎಂದು ನಗರದ ಸಿಎಸ್‍ಸಿ ಕೇಂದ್ರವೊಂದರ ಮಾಲಕ ವಿ.ಡಿ. ಶಿವಪ್ರಸಾದ್ ಹೇಳಿದರು.

ಪೇಮೆಂಟ್ ವ್ಯಾಲೆಟ್‍ನಲ್ಲಿ ತಾಂತ್ರಿಕ ಸಮಸ್ಯೆ ಇರಬಹುದು. ಅದನ್ನು ಅವರೇ ಸರಿಪಡಿಸಿಕೊಳ್ಳಬೇಕು. ಬೆಂಗಳೂರು ಒನ್ ಸೇರಿದಂತೆ ಸರಕಾರಿ ಸೇವಾ ಕೇಂದ್ರಗಳಲ್ಲಿ ಯಾವುದೇ ತೊಂದರೆ ಆಗಿಲ್ಲ ಎಂದು ಇಡಿಸಿಎಸ್ ನಿರ್ದೇಶನಾಲಯದ ಯೋಜನಾ ನಿರ್ದೇಶಕ ಬಿ.ಎಸ್. ವರಪ್ರಸಾದ್ ರೆಡ್ಡಿ ತಿಳಿಸಿದ್ದಾರೆ.

ಡಿಜಿಟಲ್ ಇಂಡಿಯಾ ಯೋಜನೆಗೆ ಧಕ್ಕೆ: ಸಿ.ಎಸ್.ಸಿ ಸೇವಾ ಕೇಂದ್ರಗಳು ಡಿಜಿಟಲ್ ಇಂಡಿಯಾ ಯೋಜನೆಯ ಭಾಗ. ಸರಕಾರಿ ಕಚೇರಿಗಳಲ್ಲಿದ್ದ ಭ್ರಷ್ಟಾಚಾರ ಕೊನೆಗೊಳಿಸುವ ಉದ್ದೇಶದಿಂದ ಸರಕಾರಿ ಸೇವೆ ನೀಡುವ ಒದಗಿಸುವ ಖಾಸಗೀಕರಣಗೊಳ್ಳುತ್ತಿದೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಈ ವ್ಯವಸ್ಥೆ ಯಶಸ್ವಿಯಾಗಿದೆ. ಲಂಚದ ರುಚಿ ನೋಡಿರುವ ಅಧಿಕಾರಿಶಾಹಿ ಸಿಎಸ್‍ಸಿಗಳನ್ನು ದುರ್ಬಲಗೊಳಿಸುವ ಯತ್ನ ಮಾಡುತ್ತಿದೆ. ಇದರಿಂದ ಡಿಜಿಟಲ್ ಇಂಡಿಯಾ ಯೋಜನೆಗೆ ಧಕ್ಕೆಯಾಗುತ್ತಿದೆ ಎಂದು ಸಿಎಸ್‍ಸಿ- ವಿಎಲ್‍ಇ (ವಿಲೇಜ್ ಲೆವೆಲ್ ಎಂಟ್ರಪ್ರೂನರ್) ಸೊಸೈಟಿಯ ಮುಖ್ಯಸ್ಥರೊಬ್ಬರ ಅಭಿಪ್ರಾಯ.

ಅ.6ರಂದು ಸಭೆ: ಹಣ ಪಾವತಿಸುವ ವ್ಯಾಲೆಟ್‍ನಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಯನ್ನು ಸಿಎಸ್‍ಸಿ ತಂತ್ರಜ್ಞರಿಂದ ಸರಿಪಡಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಇಡಿಸಿಎಸ್ ನಿರ್ದೇಶನಾಲಯವೇ ಬಗೆಹರಿಸಬೇಕು. ಈ ಕುರಿತು ಚರ್ಚಿಸಲು ಸಕಾಲ ಜವಾಬ್ದಾರಿ ನಿರ್ವಹಿಸುತ್ತಿರುವ ಸಚಿವ ಎಸ್. ಸುರೇಶ್‍ ಕುಮಾರ್ ಅವರೊಂದಿಗೆ ಅ.6ರಂದು ಸಭೆ ನಿಗದಿಯಾಗಿದೆ ಎಂದು ಖಾಸಗಿ ಸೇವಾ ಕೇಂದ್ರಗಳ ರಾಜ್ಯ ಮುಖ್ಯಸ್ಥ ಎಸ್.ಪಿ. ಕುಲಕರ್ಣಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News