ಓ ಮೆಣಸೇ...

Update: 2020-10-04 19:30 GMT

    ಜಸ್ವಂತ್ ಸಿಂಗ್ ಶ್ರದ್ಧೆಯಿಂದ ದೇಶ ಸೇವೆ ಮಾಡಿದವರು - ನರೇಂದ್ರ ಮೋದಿ, ಪ್ರಧಾನಿ
ಆ ಕಾರಣದಿಂದ ಅವರನ್ನು ನೀವು ದೂರ ಇಟ್ಟಿರಬೇಕು.


ಶಿವಸೇನೆ ಜೊತೆ ಮತ್ತೆ ಕೈ ಜೋಡಿಸುವುದಿಲ್ಲ - ದೇವೇಂದ್ರ ಫಡ್ನ್ನವೀಸ್, ಬಿಜೆಪಿ ನಾಯಕ
ಕಾಲು ಜೋಡಿಸುವ ಉದ್ದೇಶವೇನಾದರೂ ಇದೆಯೇ?


ತಳಮಟ್ಟದಿಂದ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡಿದರೆ ಮಾತ್ರ ಮುಂದಿನ ದಿನಗಳಲ್ಲಿ ನಾಯಕರಾಗಿ ಸ್ಥಾನಮಾನ ಪಡೆಯಲು ಸಾಧ್ಯ - ರಣದೀಪ್ ಸಿಂಗ್ ಸುರ್ಜೇವಾಲಾ, ರಾಜ್ಯ ಕಾಂಗ್ರೆಸ್ ಉಸ್ತುವಾರಿ
ಕಾಂಗ್ರೆಸ್‌ನೊಳಗೆ ಕುರ್ಚಿಗೆ ಅಂಟಿಕೊಂಡಿರುವ ಮುದುಕರು ನಿವೃತ್ತರಾಗಿ ಜಾಗ ಖಾಲಿ ಮಾಡಿಕೊಡುವುದೂ ಅಷ್ಟೇ ಅಗತ್ಯವಿದೆ.


ಸಚಿವ ಸಂಪುಟ ವಿಸ್ತರಣೆಗೆ ಶೀಘ್ರವೇ ಮುಹೂರ್ತ ನಿಗದಿ -ಯಡಿಯೂರಪ್ಪ, ಮುಖ್ಯಮಂತ್ರಿ
ಇಲ್ಲವಾದರೆ ನಿಮ್ಮ ಸ್ಥಾನ ಪಲ್ಲಟಕ್ಕೆ ಮುಹೂರ್ತ ನಿಗದಿಯಾಗುವ ಸಾಧ್ಯತೆಗಳಿವೆ.


ರೈತ ಶಕ್ತಿಶಾಲಿ ಆಗಬೇಕೆಂಬ ಉದ್ದೇಶದಿಂದ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ - ಆರ್.ಅಶೋಕ್, ಸಚಿವ
ಬೀದಿಯಲ್ಲಿ ಆತ ನಡೆಸುತ್ತಿರುವ ಪ್ರತಿಭಟನೆಯಿಂದ, ಆತನೆಷ್ಟು ಶಕ್ತಿಶಾಲಿ ಎನ್ನುವುದು ನಿಮಗೆ ಮನವರಿಕೆಯಾಗಿರಬಹುದು.


ಕೋವಿಡ್ ಸೋಂಕಿಗೆ ಒಳಗಾದರೆ ಪ.ಬಂ.ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಳ್ಳುವೆ - ಅನುಪಮ್ ಹಝ್ರ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ
ಇಂತಹ ಬೇಜವಾಬ್ದಾರಿ ಮಾತಿಗೆ ರೋಸಿ ಕೊರೋನವೇ ಈಗ ನಿಮ್ಮನ್ನು ತಬ್ಬಿಕೊಂಡಿದೆ.


ಮಾಸ್ಕ್ ಧರಿಸಿದ್ದರೆ ಕೇಂದ್ರ ಸಚಿವ ಸುರೇಶ್ ಅಂಗಡಿ ಬದುಕುತ್ತಿದ್ದರು -ಜಗದೀಶ್ ಶೆಟ್ಟರ್, ಸಚಿವ
ಗಡಿಯಲ್ಲಿ ಮಾಸ್ಕ್ ಕೊರತೆ ಬಿದ್ದಿರಬಹುದೇ?


ಕೊರೋನ ಮಹಾಮಾರಿಯ ನಡುವೆಯೂ ದೇಶದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಸಾಧನೆ ಮಾಡಲಾಗಿದೆ - ನಳಿನ್‌ಕುಮಾರ್ ಕಟೀಲು, ಸಂಸದ
ಹೆಮ್ಮಾರಿಗೆ ರಾಷ್ಟ್ರೀಯ ಹೆದ್ದಾರಿಯನ್ನು ಮುಕ್ತವಾಗಿಸುವ ಮೂಲಕ ಇರಬಹುದು.


ಭಾರತ ಯಾವತ್ತೂ ಜಗತ್ತಿನ ಶಾಂತಿ, ಭದ್ರತೆ, ಸಮೃದ್ಧಿಯ ಬಗ್ಗೆ ಚಿಂತನೆ ನಡೆಸುತ್ತದೆ - ಅಮಿತ್ ಶಾ, ಕೇಂದ್ರ ಸಚಿವ
ಅದುವೇ ಭಾರತದ ಸಮಸ್ಯೆಗೆ ಕಾರಣ ಎಂದು ನೀವು ಅವುಗಳನ್ನು ಕೆಡಿಸಲು ಹೊರಟಿದ್ದೀರಿ ಎಂದು ಕಾಣುತ್ತದೆ.


ಬಿಜೆಪಿ ಮುಕ್ತ ಭಾರತಕ್ಕಾಗಿ ಮತ್ತೊಂದು ಸ್ವಾತಂತ್ರ ಹೋರಾಟ ಅನಿವಾರ್ಯ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ಮೊದಲು ಆಲಸ್ಯ ಮುಕ್ತ ಕಾಂಗ್ರೆಸ್‌ಗಾಗಿ ಒಂದು ಹೋರಾಟ ನಡೆಸಿ.


ನಾವು ಎಲ್ಲರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೇವೆ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ಕೇಳಿಸಿಕೊಂಡರೆ ಸಾಕೇ? ಪರಿಹಾರವೂ ಸೂಚಿಸಬೇಡವೇ?


ಈಗ ಲಡಾಖ್‌ನ ಎಲ್‌ಎಸಿಯಲ್ಲಿ ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ ಎನ್ನುವ ಸ್ಥಿತಿ ಇದೆ - ಆರ್.ಕೆ.ಎಸ್.ಭದೌರಿಯಾ, ವಾಯುಸೇನೆ ಮುಖ್ಯಸ್ಥ
ಇಡೀ ದೇಶದ ಕತೆಯೂ ಇದೇ ಆಗಿದೆ.


ನಾವು ಸರ್ಕಸ್ ಮಾಡಿ ರಾಜ್ಯ ಸರಕಾರ ನಡೆಸುತ್ತಿದ್ದೇವೆ - ಜಗದೀಶ್ ಶೆಟ್ಟರ್, ಸಚಿವ
 ಸರ್ಕಸ್‌ನಲ್ಲಿ ಜೋಕರ್ ಪಾತ್ರವನ್ನು ರಾಜ್ಯದ ಪಕ್ಷಾಧ್ಯಕ್ಷರಿಗೆ ಕೊಟ್ಟಂತಿದೆ.


ನಿಮ್ಮನ್ನ್ನು 5 ವರ್ಷ ಮುಖ್ಯಮಂತ್ರಿ ಮಾಡುತ್ತೇನೆ, ಬಿಜೆಪಿಗೆ ಬನ್ನಿ ಎಂದು ಖುದ್ದು ಪ್ರಧಾನಿ ಮೋದಿ ಆಹ್ವಾನಿಸಿದರೂ ನಾನು ಹೋಗಲಿಲ್ಲ- ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಗುಜರಾತ್‌ನ ಮುಖ್ಯಮಂತ್ರಿ ಮಾಡುವ ಭರವಸೆ ನೀಡಿರಬೇಕು.


ಉಪ ಚುನಾವಣೆಯು ಸರಕಾರ ಮತ್ತು ಪಕ್ಷಕ್ಕೆ ಪ್ರಿಪರೇಟರಿ ಪರೀಕ್ಷೆ ಇದ್ದಂತೆ - ಕೆ.ಎಸ್.ಈಶ್ವರಪ್ಪ, ಸಚಿವ
ಆನ್‌ಲೈನ್‌ನಲ್ಲಿ ಪರೀಕ್ಷೆ ಬರೆಯುವ ಉದ್ದೇಶವಿದೆಯೇ?


ಅಮೆರಿಕ ಈವರೆಗೆ ಕಂಡಿರುವ ಅತ್ಯುತ್ತಮ ಅಧ್ಯಕ್ಷ ಎಂದರೆ ಅದು ನಾನೇ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
 ತಪ್ಪು ನುಸುಳಿದೆ, ಅತ್ಯುತ್ತಮ ಅದಕ್ಷ ಇರಬೇಕು...


ಮಥುರಾದ ಕೃಷ್ಣ ಜನ್ಮ ಸ್ಥಾನದ ಸ್ಥಳವನ್ನು ಮುಸ್ಲಿಮರು ಸ್ವಯಂ ಪ್ರೇರಿತರಾಗಿ ಬಿಟ್ಟುಕೊಟ್ಟರೆ ವಿವಾದ ಶಾಂತಿಯುತವಾಗಿ ಬಗೆಹರಿಯುತ್ತದೆ - ವಿನಯ್ ‌ಕಟಿಯಾರ್, ಮಾಜಿ ಸಂಸದ
ಕೃಷ್ಟ ಹುಟ್ಟಿದ್ದು ಸೆರೆಮನೆಯಲ್ಲಿ ತಾನೇ? ಯಾವ ಜೈಲಿನಲ್ಲಿ ಕೃಷ್ಣ ಹುಟ್ಟಿದ್ದು ಎನ್ನುವುದನ್ನು ಹೇಳಿ, ಆ ಜೈಲನ್ನು ನಿಮಗೆ ಬಿಟ್ಟುಕೊಡುವ.


ಜನರು ವರ್ಷಕ್ಕೊಮ್ಮೆಯಾದರೂ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳಬೇಕು - ಶ್ರೀರಾಮುಲು, ಸಚಿವ
ಉಪಮುಖ್ಯಮಂತ್ರಿಯಾಗುವ ಬಯಕೆ ತಮ್ಮ ರಕ್ತದೊತ್ತಡ, ಮಧುಮೇಹವನ್ನು ಅಧಿಕಗೊಳಿಸಿರಬೇಕು.


ಭಾರತದಲ್ಲಿ ಔಷಧ ಮತ್ತು ವೈದ್ಯಕೀಯ ಸಾಧನೆ ಕ್ಷೇತ್ರದಲ್ಲಿ ಹೂಡಿಕೆಗೆ ಇದು ಸಕಾಲ - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಬಹುಶಃ ಮಾಸ್ಕ್ ತಯಾರಿಕಾ ಉದ್ದಿಮೆಯ ಬಗ್ಗೆ ಹೇಳುತ್ತಿರಬೇಕು.

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಲು ನಿರುದ್ಯೋಗ ಕಾರಣ- ನ್ಯಾ. ಮಾರ್ಕಂಡೇಯ ಕಟ್ಟು, ನಿವೃತ್ತ ನ್ಯಾಯಮೂರ್ತಿ
ನಿರುದ್ಯೋಗಕ್ಕೆ ಕಾರಣರಾಗಿರುವ ರಾಜಕಾರಣಿಗಳ ಮೇಲೆ ಅತ್ಯಾಚಾರ ನಡೆಯುತ್ತಿಲ್ಲವಲ್ಲ?


ಮೈತ್ರಿಗೆ ಕಾಂಗ್ರೆಸ್ ಯೋಗ್ಯ ಪಕ್ಷವಲ್ಲ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
 ಕಾಂಗ್ರೆಸ್ ಜತೆ ಮೈತ್ರಿ ಮಾಡಿದಾಗ ತಾವು ಅಯೋಗ್ಯ ಮುಖ್ಯಮಂತ್ರಿಯಾಗಿದ್ದಿರೇ?


ರಣ ಹದ್ದುಗಳ ಸಂರಕ್ಷಣೆಗೆ ರಾಮನಗರದಲ್ಲಿ ಫೀಡಿಂಗ್ ಕ್ಯಾಂಪ್ ನಿರ್ಮಾಣ -ಆನಂದ್ ಸಿಂಗ್, ಅರಣ್ಯ ಸಚಿವ
 ರಾಜಕಾರಣಿಗಳು ಈಗಾಗಲೇ ಉಂಡು ತೇಗಿದ್ದು ಸಾಲದೇ?


ಚುನಾವಣೆಯಲ್ಲಿ ವ್ಯಾಪಾರ ಮಾಡಿಯೇ ನಾನು ಇಲ್ಲಿಗೆ ಬಂದಿರುವುದು - ಕೆ.ಎಸ್.ಈಶ್ವರಪ್ಪ, ಸಚಿವ
 ನೀವು ಎಷ್ಟಕ್ಕೆ ಮಾರಾಟವಾದಿರಿ ಎನ್ನುವುದನ್ನು ಹೇಳಿ.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...