ಹತ್ರಸ್‌ ಸಂತ್ರಸ್ತೆಯದ್ದು ಸಾವಲ್ಲ, ಸರಕಾರದ ಒಳಿತಿಗಾಗಿ ಪೊಲೀಸ್ ವ್ಯವಸ್ಥೆ ನಡೆಸಿದ ಕೊಲೆ: ದೇವನೂರ ಮಹಾದೇವ

Update: 2020-10-05 15:38 GMT

ಮೈಸೂರು,ಅ.5: ಉತ್ತರ ಪ್ರದೇಶದ ಹತ್ರಸ್‌ನ ದಲಿತ ಯುವತಿಯ ಸಾವು ಸರ್ಕಾರಿ ಕೊಲೆ ಎಂದು ಖ್ಯಾತ ಸಾಹಿತಿ ದೇವನೂರ ಮಹಾದೇವ ಆಕ್ರೋಶ ಆರೋಪಿಸಿದರು.

ಉತ್ತರ ಪ್ರದೇಶದ ಹತ್ರಸ್‌ನ ದಲಿತ ಯುವತಿಯ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ದಲಿತ ಸಂಘರ್ಷ ಸಮಿತಿ ಒಕ್ಕೂಟ, ದಸಂಸ ಸಂಘಟನೆಗಳ ಜಂಟಿ ವೇದಿಕೆ, ಜನಸಂಗ್ರಾಮ ಪರಿಷತ್, ಜನಾಂದೋಲನ ಮಹಾಮೈತ್ರಿ, ಕಾರ್ಮಿಕ ಸಂಘಟನೆ ಮತ್ತು ರೈತ ಸಂಘಗಳ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಉತ್ತರ ಪ್ರದೇಶದ ಹತ್ರಸ್‌ನ ಯುವತಿಯ ಸಾವು, ಸಾವಲ್ಲ. ಸಾಕ್ಷ್ಯ ನಾಶಕ್ಕಾಗಿ ಉತ್ತರ ಪ್ರದೇಶ ಸರ್ಕಾರದ ಒಳಿತಿಗೆ ತಕ್ಕಂತೆ ಅಲ್ಲಿನ ಪೊಲೀಸ್ ವ್ಯವಸ್ಥೆ ನಡೆಸಿದ ಕೊಲೆ ಇದು ಎಂದು ಕಿಡಿಕಾರಿದರು.

ಯುವತಿ ಅತ್ಯಾಚಾರಕ್ಕೆ ಒಳಗಾಗಿ ಅವಳ ದೇಹ ಅರೆ ಪ್ರಜ್ಞಾವಸ್ಥೆಯಲ್ಲಿದ್ದರೂ ಪೊಲೀಸ್ ಸ್ಟೇಷನ್‍ಗೆ ಕರೆತಂದರೆ ಅಲ್ಲಿ ಏಳೆಂಟು ಗಂಟೆಗಳ ಕಾಲ ಹೊರಗೆ ಕೂರಿಸುತ್ತಾರೆ. ಕಾನೂನು ರೀತಿಯಾಗಿ ಅವಳನ್ನು ರೇಪ್ ಕ್ರೈಸಿಸ್ ಸೆಂಟರ್ ಗೆ ಕರೆದುಕೊಂಡು ಹೋಗಿಲ್ಲ. ಕಾನೂನು ರೀತಿಯಾಗಿ 24 ಗಂಟೆ ಒಳಗೆ ವೀರ್ಯಾಣು ಪತ್ತೆ ಪರೀಕ್ಷೆ ಮಾಡಿಸುವುದಿಲ್ಲ. ಬದಲಾಗಿ ವಿಳಂಬಿಸಿ, ಇದ್ದಿರಬಹುದಾದ ವೀರ್ಯಾಣು ಸಾಕ್ಷ್ಯ ನಾಶವಾದ ಮೇಲೆ ವೀರ್ಯಾಣು ಪತ್ತೆ ಪರೀಕ್ಷೆ ಮಾಡಿಸುತ್ತಾರೆ. ಆಕೆ ಸಾಯುವ ಮೊದಲು ತನ್ನ ಮೇಲೆ ಅತ್ಯಾಚಾರ ಆಯಿತು ಎಂದು ಹೇಳಿದ್ದರೂ ಕಾನೂನು ರೀತಿ ಇದೇ ಪ್ರಬಲ ಸಾಕ್ಷಿಯಾಗಿದ್ದರೂ ಇದನ್ನು ಪರಿಗಣಿಸದೆ ಪೊಲೀಸ್ ವರಿಷ್ಠಾಧಿಕಾರಿ ಅತ್ಯಾಚಾರವಾಗಿಲ್ಲ, ಪರೀಕ್ಷೆಯಲ್ಲಿ ವೀರ್ಯಾಣು  ಪತ್ತೆ ಆಗಿಲ್ಲ ಅನ್ನುತ್ತಾನೆ. ಜೊತೆಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಾಡಿಸುತ್ತಾರೆ. ಯುವತಿಯ ಕುಟುಂಬಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಬೆದರಿಕೆ ಹಾಕುತ್ತಾನೆ. ಯುವತಿ ಬದುಕಿಬಿಟ್ಟರೆ ಅವಳೇ ಸಾಕ್ಷಿಯಾಗಿ ಬಿಡುತ್ತಾಳೆ ಎಂಬ ಕಾರಣಕ್ಕೆ ಅವಳು ಸಾಯಲಿ ಅಂತ ಏನೇನೆಲ್ಲಾ ಮಾಡಬೇಕೊ ಅದನ್ನೆಲ್ಲಾ ಉತ್ತರ ಪ್ರದೇಶದ ಪೊಲೀಸರು ಹಾಗೂ ಆಡಳಿತ ಮಾಡಿದೆ. ಯುವತಿಯ ಸಾವು ಸರ್ಕಾರಿ ಕೊಲೆ ಎಂದು ದೂರಿದರು.

ಯುವತಿಯನ್ನು ಸಾಯಿಸಿದ ಮೇಲೂ ಅವಳ ದೇಹದ ಸಾಕ್ಷ್ಯ ಮರು ಮರಣೋತ್ತರ ಪರೀಕ್ಷೆಗೆ ಸಿಗದಂತೆ ಮಾಡಲು ಪೊಲೀಸರು ಆಕೆಯ ದೇಹವನ್ನು ರಾತ್ರಿ 1.30ಕ್ಕೆ ಅವಳ ಹುಟ್ಟೂರಿಗೆ ತಂದು ಹೆತ್ತವರಿಗೆ ಅಂತ್ಯ ಸಂಸ್ಕಾರಕ್ಕೆ ದೇಹವನ್ನು ಒಪ್ಪಿಸದೆ ಮಗಳ ಮುಖವನ್ನೂ ನೋಡಲು ಅವಕಾಶ ನೀಡದೆ ಮಗಳ ಮುಖಕ್ಕೆ ಪದ್ಧತಿಯಂತೆ ಅರಿಶಿಣ ಹಚ್ಚಲಾದರೂ ಅವಕಾಶ ಕೊಡಿ ಎಂದು ಬೇಡಿದರೂ ಲೆಕ್ಕಿಸದೆ ಪೊಲೀಸರು ದೇಹವನ್ನು ಸುಟ್ಟು ಬೂದಿ ಮಾಡುತ್ತಾರೆ. ಹೀಗಿರುವಾಗ ನ್ಯಾಯ ಸಿಗಬಹುದೆ ಎಂದು ಪ್ರಶ್ನಿಸಿದರು.

ಇಂದಿನ ಕಾನೂನು ವ್ಯವಸ್ಥೆ, ನ್ಯಾಯಾಂಗ ವಿತರಣೆ ವ್ಯವಸ್ಥೆ ಹೆಚ್ಚು ಕಮ್ಮಿ ಪುರಾತನ ಕಾಲದ ಅನ್ಯಾಯದ ಮನು ಧರ್ಮ ಶಾಸ್ತ್ರದ ಜಾತಿ ಅಂತಸ್ಥಿಗೆ ತಕ್ಕ ಶಿಕ್ಷೆ ಎಂಬಂತಿದೆ ಎಂದು ಅವರು ಕಿಡಿಕಾರಿದರು. 

ನಮ್ಮ ನ್ಯಾಯ ವಿತರಣಾ ಪದ್ದತಿಯನ್ನು ನೋಡಿದರೆ ಆತಂಕ ಆಗುತ್ತದೆ. ಇತ್ತೀಚಿನ ಬಾಬರಿ ಮಸೀದಿ ತೀರ್ಪನ್ನು ನೋಡಿದರೆ ಧ್ವಂಸದ ಸ್ಥಳದಲ್ಲಿ ಆರೋಪಿಗಳು ಸ್ಥಳದಲ್ಲೇ ಇದ್ದರೂ ಅವರು ಖುಲಾಸೆಯಾಗಿದ್ದಾರೆ. ಇನ್ನೊಂದು ಕಡೆ ಎಲ್ಗಾರ್ ಪರಿಷತ್ ಸಭೆಯಲ್ಲಿ ಯಾವುದೇ ಹಿಂಸೆ ನಡೆಯದಿದ್ದರೂ  ಜೊತೆಗೆ ಆ ಸಭೆಯಲ್ಲಿ ಆನಂದ್ ತೇಲ್ತುಂಬ್ಡೆ ಮತ್ತಿತರರು ಆ ಸ್ಥಳದಲ್ಲಿ ಇಲ್ಲದಿದ್ದರೂ ಅವರನ್ನು ಆರೋಪಿಗಳನ್ನಾಗಿಸಿ ವಿಚಾರಣೆ ಮಾಡದೆ ಬಂಧಿಸಿ ಇಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತ ಯಾವ ಕಡೆಗೆ ಚಲಿಸುತ್ತಿದೆ ಹಿಂದಕ್ಕೊ ಮುಂದಕ್ಕೋ? ಇಂದು ನಮ್ಮ ಕಾನೂನು ವ್ಯವಸ್ಥೆ ಹಾಗೂ ನಮ್ಮ ನ್ಯಾಯ ವಿತರಣಾ ವ್ಯವಸ್ಥೆಗಳು ನ್ಯಾಯದ ಮುಂದೆ ಅಪರಾಧಿಗಳಾಗಿ ಕಟ ಕಟೆಯಲ್ಲಿ ನಿಂತಿವೆ. ಒಂದು ರೀತಿಯಲ್ಲಿ ಭಾರತ ದಿಕ್ಕು ತಪ್ಪುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಯುವತಿಯನ್ನು ಎಲ್ಲಿ ಸುಟ್ಟರೊ ಅಲ್ಲಿಂದ ಅಥವಾ ಅವಳು ನಡೆದಾಡಿದ ಭೂಮಿಯಿಂದ ಒಂದು ಹಿಡಿ ಮಣ್ಣನ್ನು ತಂದು ಒಂದು ಸ್ಮಾರಕ ಸ್ಥಳವನ್ನಾಗಿಸಿ ಅಲ್ಲೊಂದು ಅವಳ ಪ್ರತಿಮೆ ರೂಪಿಸಿ ಅವಳ ಕೆನ್ನೆಗಳಿಗೆ ನಾವೆಲ್ಲರೂ ಅರಿಶಿನ ಹಚ್ಚುವಂತಾದರೆ ನಾವೂ ಆಕೆಗೆ ಮರಣೋತ್ತರ ಗೌರವ ಸಲ್ಲಿಸಿದಂತಾಗಬಹುದೆ ? ಇದರಿಂದ ಆಕೆಯ ಹೆತ್ತವರಿಗೆ ಹಾಗೂ ತಾಯಿ ಭಾರತ ಮಾತೆಗೆ ಕಿಂಚಿತ್ತಾದರೂ ಸಮಾಧಾನವಾಗಬಹುದೇ? ಈ ಪ್ರಶ್ನೆಯನ್ನು ಭಾರತದ ಪ್ರಜ್ಞೆಯ ಮುಂದಿಡುತ್ತಿದ್ದೇನೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಹಿರಿಯ ಸಮಾಜವಾದಿ ಪ.ಮಲ್ಲೇಶ್, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಆಲಗೂಡು ಶಿವಕುಮಾರ್, ಕಲ್ಲಹಳ್ಳಿ ಕುಮಾರ್, ಸ್ವರಾಜ್ ಇಂಡಿಯಾದ ಉಗ್ರ ನರಸಿಂಹೇಗೌಡ, ಪುನೀತ್, ಅಭಿರುಚಿ ಗಣೇಶ್, ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜೇ ಅರಸ್, ಜಮಾತೆ ಇಸ್ಲಾಮ್ ಸಂಘಟನೆಯ ಅಸಾದುಲ್ಲಾ, ಕಾರ್ಮಿಕ ಸಂಘಟನೆಯ ಚಂದ್ರಶೇಖರ ಮೇಟಿ, ಕೆ.ಸಂಧ್ಯಾ, ಉಮಾದೇವಿ, ರೈತ ಸಂಘಟನೆಯ ಪಿ.ಮರಂಕಯ್ಯ, ದಸಂಸ ಮುಖಂಡರುಗಳಾದ ಕಾರ್ಯ ಬಸವಣ್ಣ, ರಾಜಶೇಖರ ಕೋಟೆ, ಪ್ರಗತಿಪರ ಚಿಂತಕರುಗಳಾದ ಜನಾರ್ಧನ್ ಜನ್ನಿ, ಪ್ರೊ.ಶಬ್ಬೀರ್ ಮುಸ್ತಾಫ, ರತಿರಾವ್, ನಾ.ದಿವಾಕರ, ಸುನೀಲ್, ಸುನೀತಾ, ಪ್ರಕಾಶ್ ಗೌಡ ರಜನಿ, ಬೊಕ್ಕಳ್ಳೀ ನಂಜುಂಡಸ್ವಾಮಿ, ಸೇರಿದಂತೆ ಹಲವರು ಭಾಗವಹಿಸಿದ್ದರು.

ಉತ್ತರ ಪ್ರದೇಶದ ಹತ್ರಸ್‌ನಲ್ಲಿ ದಲಿತ ಯುವತಿಯ ಮೇಲೆ ಮಾತ್ರ ಅತ್ಯಾಚಾರ ನಡೆದಿಲ್ಲ. ಪೊಲೀಸರ ಮೇಲೆ, ಪತ್ರಕರ್ತರ ಮೇಲೆ ಮತ್ತು ಇಡೀ ವ್ಯವಸ್ಥೆಯ ಮೇಲೆ ಅತ್ಯಾಚಾರ ನಡೆದಿದೆ. ಇದಕ್ಕೆ ತಕ್ಕ ಶಿಕ್ಷೆಯಾಗಿದ್ದರೆ ಮುಂದೊಂದು ದಿನ ನ್ಯಾಯದೀಶರ ಮಕ್ಕಳ ಮೇಲೂ ಅತ್ಯಾಚಾರ ನಡೆಯಬಹುದು.   

 -ಬಡಗಲಪುರ ನಾಗೇಂದ್ರ, ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ

ಮನ್‍ಕಿ ಬಾತ್‍ನಲ್ಲಿ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಘಟನೆ ಕುರಿತು ಏಕೆ ಮಾತನಾಡುವುದಿಲ್ಲ. ನಿಮ್ಮ ಕೈಗೆ ದೇಶ ಕೊಟ್ಟ ನಾವುಗಳು ಮೊದಲು ಹೊಡೆದುಕೊಳ್ಳಬೇಕು, ಇನ್ನು ಮುಂದೆ ಸಂಘಟಿತರಾಗಿ ಹೋರಾಟಗಳ ಮೂಲಕ ದೇಶ ಕಟ್ಟೋಣ.
-ಜನಾರ್ಧನ್ ಜನ್ನಿ, ಮಾಜಿ ನಿರ್ದೇಶಕ, ರಂಗಾಯಣ

ಈ ಹೋರಾಟ ಇಷ್ಟಕ್ಕೆ ನಿಲ್ಲಬಾರದು, ರಾಜ್ಯದ ಎಲ್ಲಾ ಶಾಸಕರು ಮತ್ತು ಸಂಸದರ ಮನೆಗಳ ಮುಂದೆ ಕುಳಿತು ಧರಣಿ ನಡೆಸಬೇಕು, ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯಬೇಕು.
 -ಪ.ಮಲ್ಲೇಶ್,  ಹಿರಿಯ ಸಮಾಜವಾದಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News