ನಕಲಿ ಗುರುತಿನ ಚೀಟಿ ತಯಾರಿ: ಇಬ್ಬರು ಆರೋಪಿಗಳ ಬಂಧನ
Update: 2020-10-06 17:30 GMT
ಹಾವೇರಿ, ಅ.6: ನಕಲಿ ಮತದಾರರ ಗುರುತಿನ ಚೀಟಿ ತಯಾರಿಸುತ್ತಿದ್ದ ಸಿಎಸ್ಸಿ ಕೇಂದ್ರದ ಮೇಲೆ ಹಾವೇರಿ ಎಡಿಸಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, ಇಬ್ಬರನ್ನು ಬಂಧಿಸಿದೆ.
ನಗರದ ಪುರದ ಓಣಿಯಲ್ಲಿರುವ ಸಿಎಸ್ಸಿ (ಸೇವಾ ಸಿಂಧು ಕೇಂದ್ರ) ಕೇಂದ್ರದ ಮೇಲೆ ಎಡಿಸಿ ಯೋಗೇಶ್ವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ದಾಳಿ ವೇಳೆ ಸಿಎಸ್ಸಿ ಕೇಂದ್ರದ ಸಿಬ್ಬಂದಿ ನಕಲಿ ಗರುತಿನ ಚೀಟಿ ತಯಾರಿಸುತ್ತಿರುವುದು ಬೆಳಕಿಗೆ ಬಂದಿದೆ.
ಈ ಹಿಂದೆ ಕಂದಾಯ ಇಲಾಖೆಯ ಅಧಿಕಾರಿಗೆ ಸಿಎಸ್ಸಿ ಕೇಂದ್ರದವರು ನಕಲಿ ಗುರುತಿನ ಚೀಟಿ ತಯಾರಿಸಿ ಕೊಟ್ಟಿದ್ದರು. ಇದನ್ನೇ ಮಾಹಿತಿಯಾಗಿ ಪರಿಗಣಿಸಿದ ಅಧಿಕಾರಿಗಳು ದಾಳಿ ನಡೆಸಿ, ಆರೋಪಿಗಳಾದ ನವೀನ್ ಮತ್ತು ಜೀವನ್ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಎಸ್.ಬಿ ಶೆಟ್ಟೆಣ್ಣನವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.