ಅಪಘಾತ ಮುನ್ಸೂಚನೆಗೆ ಸರಕಾರಿ ಬಸ್ಸುಗಳಲ್ಲಿ ಆಧುನಿಕ ವ್ಯವಸ್ಥೆ ಜಾರಿ: ಡಿಸಿಎಂ ಸವದಿ

Update: 2020-10-07 14:07 GMT

ಬೆಂಗಳೂರು, ಅ.7: ಸರಕಾರಿ ಸಾರಿಗೆ ಬಸ್ಸುಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಅಪಘಾತಗಳನ್ನು ತಪ್ಪಿಸಲು ವಿಶೇಷ ವ್ಯವಸ್ಥೆ ಜಾರಿಗೆ ಬರಲಿವೆ. ಈಗ ಪ್ರಾಯೋಗಿಕ ಹಂತದಲ್ಲಿರುವ ಈ ಕ್ರಮಗಳು ಅನುಷ್ಠಾನಗೊಂಡರೆ ಬಸ್ಸುಗಳ ಎದುರು ಆಕಸ್ಮಿಕವಾಗಿ ಇತರ ವಾಹನಗಳು ಅಥವಾ ವ್ಯಕ್ತಿಗಳು ಅಡ್ಡ ಬಂದಲ್ಲಿ ಚಾಲಕರಿಗೆ ಎಚ್ಚರಿಕೆಯ ಸೂಚನೆ ನೀಡುವ ಮತ್ತು ಸ್ವಯಂಚಾಲಿತವಾಗಿಯೇ ಬ್ರೇಕ್ ಹಾಕಿ ಅಪಘಾತ ತಪ್ಪಿಸುವುದಕ್ಕೆ ಸಹಾಯವಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.

ಬುಧವಾರ ನಗರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಅಪಘಾತಗಳ ಪರಿಹಾರವಾಗಿ ರಾಜ್ಯದಲ್ಲಿ ಪ್ರತಿವರ್ಷ ಸುಮಾರು 100 ಕೋಟಿ ರೂಪಾಯಿಗಿಂತ ಹೆಚ್ಚು ಹಣ ನಮ್ಮ ಸಾರಿಗೆ ಸಂಸ್ಥೆಗಳಿಂದ ವ್ಯಯವಾಗುತ್ತಿದೆ. ಅಷ್ಟೇ ಅಲ್ಲ, ಅನೇಕ ಸಾವು-ನೋವುಗಳಿಗೂ ಈ ಅಪಘಾತಗಳು ಕಾರಣವಾಗುತ್ತಿವೆ ಎಂದು ಅವರು ಹೇಳಿದರು.

ಹಲವು ಸಂದರ್ಭಗಳಲ್ಲಿ ಇತರ ವಾಹನ ಚಾಲಕರು ನಡೆಸುವ ನಿರ್ಲಕ್ಷ್ಯದ ಚಾಲನೆಯಿಂದಾಗಿ ಉಂಟಾಗುವ ಅಪಘಾತಗಳಲ್ಲಿ ವಿನಾಕಾರಣ ನಮ್ಮ ಸರಕಾರಿ ಸಾರಿಗೆ ಸಂಸ್ಥೆಗಳು ಪರಿಹಾರ ನೀಡುವಂತಹ ಸಂದರ್ಭಗಳೂ ಎದುರಾಗಿವೆ. ಇವುಗಳನ್ನು ತಪ್ಪಿಸಲು ಅಪಘಾತಗಳ ಮುನ್ಸೂಚನೆ ನೀಡುವಂಥ ಉಪಕರಣಗಳನ್ನು ಬಸ್ಸುಗಳಲ್ಲಿ ಅಳವಡಿಸಲು ಸೂಚಿಸಲಾಗಿತ್ತು ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಅದರಂತೆ ಕೆಲವು ಹೈಟೆಕ್ ಸಂಸ್ಥೆಗಳೊಂದಿಗೆ ನಮ್ಮ ಸಾರಿಗೆ ಅಧಿಕಾರಿಗಳು ಕಾರ್ಯನಿರತರಾಗಿದ್ದಾರೆ. ಈಗಾಗಲೇ ಇಂತಹ ಉಪಕರಣಗಳನ್ನು ಅಭಿವೃದ್ಧಿಪಡಿಸಿದ ಸಂಸ್ಥೆಗಳ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ಈ ತಂತ್ರಜ್ಞಾನವನ್ನು ಶೀಘ್ರದಲ್ಲಿಯೇ ಪಡೆದುಕೊಳ್ಳಲು ಚಿಂತಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಕೆಲವು ದುಬಾರಿ ಖಾಸಗಿ ಕಾರುಗಳಲ್ಲಿ ಇಂತಹ ತಂತ್ರಜ್ಞಾನ ಅಳವಡಿಸಿರುವುದರಿಂದ ರಾತ್ರಿ ವೇಳೆಯಲ್ಲಿ ಒಂದು ವೇಳೆ ಚಾಲಕರಿಗೆ ನಿದ್ದೆಯ ಮಂಪರು ಕವಿದಂತಾದರೆ ತಕ್ಷಣವೇ ಎಚ್ಚರಿಕೆಯ ಸೂಚನೆ ನೀಡುವಂತಹ ಮತ್ತು ಆಕಸ್ಮಿಕವಾಗಿ ವಾಹನಗಳು ಅಥವಾ ವ್ಯಕ್ತಿಗಳು ಎದುರಿಗೆ ಅಡ್ಡಬಂದರೆ ತಂತಾನಾಗಿಯೆ ಬ್ರೇಕ್ ಹಾಕುವಂತಹ ವ್ಯವಸ್ಥೆ ಜಾರಿಗೆ ಬಂದಿದೆ. ಇಂತಹ ಆಧುನಿಕ ಪ್ರಯೋಗ ನಮ್ಮ ಸರಕಾರಿ ಸಾರಿಗೆ ಬಸ್ಸುಗಳಲ್ಲೂ ಯಶಸ್ವಿಯಾದರೆ ಹಲವು ರೀತಿಯ ಅನುಕೂಲ ಸಾಧ್ಯವೆಂದು ಅವರು ತಿಳಿಸಿದರು.

ಲಾಕ್‍ಡೌನ್ ನಂತರದಲ್ಲಿ ಈಗಾಗಲೇ ಶೇ.60ರಷ್ಟು ಬಸ್ ಸಂಚಾರಗಳನ್ನು ಪ್ರಾರಂಭಿಸಲಾಗಿದೆ. ಮುಂದಿನ ತಿಂಗಳು ಕೊರಿಯರ್ ಸೇವೆಯನ್ನೂ ನಮ್ಮ ಸಾರಿಗೆ ಸಂಸ್ಥೆಗಳ ಮೂಲಕ ಪ್ರಾರಂಭಿಸಲಾಗುವುದು. ಈಗಾಗಲೇ ಸಾರಿಗೆ ಸಂಸ್ಥೆಗಳಲ್ಲಿ ಉಳಿತಾಯದ ಕ್ರಮವಾಗಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲಾಗಿದೆ. ಹೊಸ ಸಿಬ್ಬಂದಿಗಳ ನೇಮಕವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಲಕ್ಷ್ಮಣ ಸವದಿ ವಿವರಿಸಿದರು.

ಸಭೆಯಲ್ಲಿ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಝ್, ಕ.ರಾ.ರ.ಸಾ.ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಭದ್ರತಾ ಮತ್ತು ಜಾಗೃತಾ ನಿರ್ದೇಶಕ ಡಾ.ಅರುಣ್, ಈ.ಕ.ರ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ್, ವಾ.ಕ.ರ.ಸಾ.ಸಂಸ್ಥೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News