ಶಾಲೆ ಪ್ರಾರಂಭಿಸುವ ಮುನ್ನ ಪೋಷಕರೊಂದಿಗೆ ಪೂರ್ವಸಭೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸರಕಾರಕ್ಕೆ ಶಿಫಾರಸ್ಸು

Update: 2020-10-08 11:58 GMT

ಬೆಂಗಳೂರು, ಅ.8: ಕೋವಿಡ್-19 ನಡುವೆ ರಾಜ್ಯ ಸರಕಾರ ಶಾಲೆಗಳನ್ನು ಆರಂಭಿಸುವ ಮುನ್ನ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಪೋಷಕರು ಹಾಗೂ ಎಸ್‍ಡಿಎಂಸಿಗಳೊಂದಿಗೆ ಪೂರ್ವಭಾವಿ ಸಭೆ ಸೇರಿದಂತೆ ಹಲವು ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಫಾರಸ್ಸು ಮಾಡಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಆಯೋಗವು, ಕೋವಿಡ್ ಸಾಂಕ್ರಾಮಿಕ ರೋಗವಾಗಿರುವುದರಿಂದ ಶಾಲೆಯನ್ನು ಆರಂಭಿಸುವುದು ಸವಾಲಾಗಿದೆ. ಈ ಸಮಯದಲ್ಲಿ ಶಾಲಾ ಮಕ್ಕಳಿಗೆ ಭಯ ಮುಕ್ತ ಮತ್ತು ಶಾಲಾ ವಾತಾವರಣ ಅತ್ಯಂತ ಸಂತೋಷದಿಂದ ಕೂಡಿರುವಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿಯಾಗಿದೆ. 

ಶಿಕ್ಷಣ ಇಲಾಖೆ ಮಕ್ಕಳಿಗಾಗಿ ಶಾಲೆಗಳನ್ನು ತೆರೆಯುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ದತಿ, ಮಕ್ಕಳ ಕಳ್ಳ ಸಾಗಾಣೆಯಾಗುವ ಸಾಧ್ಯತೆ ಇದೆ. ಹೀಗಾಗಿ ಶಿಕ್ಷಣ ಹಕ್ಕು ಕಾಯ್ದೆಯನ್ನು ಮೇಲುಸ್ತುವಾರಿ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೊಂದಿದೆ.

ಸರಕಾರವು ಶಾಲೆಗಳನ್ನು ಪ್ರಾರಂಭಿಸಲು ತೀರ್ಮಾನ ಕೈಗೊಂಡಲ್ಲಿ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಆಯೋಗದ ಸದಸ್ಯರೊಂದಿಗೆ ಹಾಗೂ ಆಯೋಗದ ಆರ್‍ಟಿಇ ಸಮಾಲೋಚಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ನಿರಂಜನಾರಾಧ್ಯರೊಂದಿಗೆ ಸಮಾಲೋಚಿಸಿ ಕೆಲವೊಂದು ಶಿಫಾರಸ್ಸುಗಳನ್ನು ಹೊರಡಿಸಲಾಗಿದೆ ಎಂದು ಆಯೋಗವು ಪ್ರಕಟನೆಯಲ್ಲಿ ತಿಳಿಸಿದೆ.

ಶಾಲೆ ಪ್ರಾರಂಭಿಸುವ ಮುನ್ನ ಕೈಗೊಳ್ಳಬೇಕಾದ ಕ್ರಮಗಳು:
►ಶಿಕ್ಷಣ ಇಲಾಖೆ ಪೋಷಕರೊಂದಿಗೆ ಹಾಗೂ ಎಸ್‍ಡಿಎಂಸಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಬೇಕು.
►ಎಸ್‍ಡಿಎಂಸಿ ಮತ್ತು ಗ್ರಾಮಪಂಚಾಯತ್‍ಗಳ ಸಹಕಾರದಿಂದ ಎಲ್ಲ ಶಾಲೆಗಳ ಕೊಠಡಿಗಳ ಹಾಗೂ ಪೀಠೋಪಕರಣಗಳನ್ನು ಸ್ವಚ್ಛಗೊಳಿಸಬೇಕು. ಮತ್ತು ಕಡ್ಡಾಯವಾಗಿ ಸ್ಯಾನಿಟೈಸೇಷನ್ ಮಾಡಬೇಕು.
►ಲಭ್ಯವಿರುವ ಸಂಶೋಧನೆಯ ಪ್ರಕಾರ ಶಾಲೆಗಳನ್ನು ತೆರೆಯುವುದು ಸಮಸ್ಯೆಯಲ್ಲ. ಏಕೆಂದರೆ, ವಯಸ್ಸಾದವರಿಗೆ ಮತ್ತು ಬೇರೆ ಕಾಯಿಲೆಯ ಇತಿಹಾಸ ಇರುವವರಿಗೆ ಹೋಲಿಸಿದರೆ ಮಕ್ಕಳು ಹೆಚ್ಚಿನ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ. ಈ ಬಗ್ಗೆ ಪೋಷಕರಿಗೆ ಜಾಗೃತಿ ಮೂಡಿಸಬೇಕಿದೆ.
►ನೀರಿನ ತೊಟ್ಟಿ ಮತ್ತು ವಾಷ್ ಬೇಸಿನ್‍ಗಳನ್ನು ಕ್ಲೋರಿನ್ ದ್ರಾವಣದಿಂದ ಸ್ವಚ್ಛಗೊಳಿಸಬೇಕು.
►ಎಲ್ಲ ಶಾಲೆಗಳಿಗೆ ಮೂಲಭೂತ ಸೌಕರ್ಯಗಳಾದ ನೀರು, ಶೌಚಾಲಯ ಇರುವಂತೆ ನೋಡಿಕೊಳ್ಳಬೇಕು.
►ಎಲ್ಲ ಮಕ್ಕಳಿಗೂ ಗುಣಮಟ್ಟದ ಮಾಸ್ಕ್ ವ್ಯವಸ್ಥೆಯಾಗಬೇಕು.
►ಉಚಿತ ಕೋವಿಡ್ ಎಚ್ಚರಿಕಾ ಸಾಧನಗಳನ್ನು ಪೂರೈಸಬೇಕು.
►ಆಹಾರದ ಜತೆಗೆ ಮಕ್ಕಳಿಗೆ ರೋಗ ನಿರೋಧಕ ಮಾತ್ರೆಗಳನ್ನು ನೀಡಬೇಕು.
►ಕುಡಿಯಲು ಬೀಸಿನೀರು ಹಾಗೂ ಮಕ್ಕಳ ಶೂ, ಶಾಲಾ ಬ್ಯಾಗ್‍ಗಳನ್ನು ಇಡಲು ಒಂದು ರ್ಯಾಕ್ ವ್ಯವಸ್ಥೆಯನ್ನು ಮಾಡಬೇಕು.

ಶಿಕ್ಷಕರ ಕರ್ತವ್ಯ ಮತ್ತು ಜವಾಬ್ದಾರಿಗಳು:
►ಶಿಕ್ಷಕರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಒಳಪಡಬೇಕು.
►ಶಾಲೆಗೆ ಆಗಮಿಸುವ ವ್ಯಕ್ತಿಗಳ ಮಾಹಿತಿಯ ಪುಸ್ತಕವನ್ನು ಕಡ್ಡಾಯವಾಗಿ ನಿರ್ವಹಿಸಬೇಕು.
►ಶಿಕ್ಷಕರು ಬೋಧನೆ ಮಾಡುವಾಗ ಸುರಕ್ಷಿತ ಅಂತರ ಕಾಪಾಡಿಕೊಳ್ಳಬೇಕು.
ಗುಂಪು ಚಟುವಟಿಕೆ ಹಾಗೂ ವೈಯಕ್ತಿಕ ಚಟುವಟಿಕೆಗಳಿಗೆ ಸುರಕ್ಷಿತ ಅಂತರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.
ಮಧ್ಯಾಹ್ನದ ಬಿಸಿಯೂಟ ನಿರ್ವಹಣೆ
►ಬಿಸಿಯೂಟಕ್ಕಾಗಿ ಇರುವ ಅಡುಗೆ ಕೋಣೆ ಹಾಗೂ ಸಾಮಗ್ರಿಗಳನ್ನು ಸ್ವಚ್ಛವಾಗಿಡಬೇಕು.
►ಅಡುಗೆ ಮಾಡುವ ಸಿಬ್ಬಂದಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು.
►ಅಡುಗೆ ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಧರಿಸಬೇಕು.

ಶಾಲೆಗಳ ಪ್ರಾರಂಭ ಹಾಗೂ ಶೈಕ್ಷಣಿಕ ಕಾರ್ಯಕ್ರಮ
►2020-21ನ್ನು ಪರೀಕ್ಷಾ ರಹಿತ ಕಲಿಕಾ ವರ್ಷವೆಂದು ಘೋಷಿಸಬೇಕು.
►ಪರೀಕ್ಷಾ ರಹಿತ ಕಲಿಕಾ ವರ್ಷದಲ್ಲಿ ಶಾಲಾ ಹಂತದ ದಿನಚರಿ ಮತ್ತು ತರಗತಿವಾರು ಕಲಿಕಾ ದಿನಚರಿಯನ್ನು ಶೈಕ್ಷಣಿಕ ಪ್ರಾಧಿಕಾರವಾದ ಡಿಎಸ್‍ಇಆರ್‍ಟಿ ಗೊತ್ತುಪಡಿಸಬೇಕು.
►ಮೊದಲು 30ಕ್ಕಿಂತ ಕಡಿಮೆ ಮಕ್ಕಳಿರುವ ಸರಕಾರಿ ಕಿರಿಯ, ಹಿರಿಯ ಶಾಲೆಗಳನ್ನು ಆರಂಭಿಸಬೇಕು. ಈ ಶಾಲೆಗಳು ಮೊದಲು ಹದಿನೈದು ದಿನ ಅರ್ಧದಿವಸ ಕಾರ್ಯನಿರ್ವಹಿಸಬೇಕು.
►ಕಿರಿಯ ಪ್ರಾಥಮಿಕ ಶಾಲೆಗಳನ್ನು ಶೀಘ್ರವಾಗಿ ಪ್ರಾರಂಭಿಸಬೇಕು.
►ಹೆಚ್ಚಿನ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಪಾಳಿ ಪದ್ಧತಿಯಲ್ಲಿ ಪ್ರಾರಂಭಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News