ಕಳೆದ ಆರು ವರ್ಷಗಳಲ್ಲಿ ದೇಶ ಯಾವ ರಂಗದಲ್ಲಿ ಪ್ರಗತಿ ಸಾಧಿಸಿದೆ: ಡಿ.ಕೆ ಶಿವಕುಮಾರ್ ಪ್ರಶ್ನೆ

Update: 2020-10-08 13:08 GMT

ಬೆಂಗಳೂರು, ಅ.8: ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು ಆರು ವರ್ಷವಾಗಿದೆ. ಈ ಅವಧಿಯಲ್ಲಿ ದೇಶ ಯಾವ ರಂಗದಲ್ಲಿ ಪ್ರಗತಿ ಸಾಧಿಸಿದೆ? ಸರಕಾರ ಕೊಟ್ಟ ಮಾತು ಉಳಿಸಿಕೊಂಡಿದೆಯೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಬಿಜೆಪಿ ಸರಕಾರದ ಜನ ವಿರೋಧಿ ನಡೆ ಕುರಿತ ಗೀತೆಗಳುಳ್ಳ ಆಡಿಯೋ-ವಿಡಿಯೋ ಸಿಡಿ ಬಿಡುಗಡೆ ಮಾಡಿದ ಬಳಿಕ ಅವರು ಮಾತನಾಡಿದರು.

'ದೇಶದಲ್ಲಿ ಅತಿ ದೊಡ್ಡ ಬಹುಮತ ಇರುವ ಸರಕಾರ ಇದೆ. ಇದು ಜನರು ಕೊಟ್ಟ ತೀರ್ಪು. ನಾವು ಅದರ ಬಗ್ಗೆ ಮಾತನಾಡುವುದಿಲ್ಲ. ಆದರೆ ಸರಕಾರ ನುಡಿದಂತೆ ನಡೆಯಿತಾ? ಕೊಟ್ಟ ಮಾತು ಉಳಿಸಿಕೊಂಡಿತಾ? ಈ ದೇಶಕ್ಕೆ ಆದ ಲಾಭ ಏನು? ಹಿಂದೆ ಆರ್ಥಿಕ ತಜ್ಞರು ಪ್ರಧಾನ ಮಂತ್ರಿಯಾಗಿದ್ದಾಗ ದೇಶ ಹೇಗಿತ್ತು? ಮೋದಿ ಅವರು ಅಧಿಕಾರಕ್ಕೆ ಬಂದು ಆರು ವರ್ಷ ಆಯ್ತು. ದೇಶ ಯಾವ ರಂಗದಲ್ಲಿ ಪ್ರಗತಿ ಸಾಧಿಸಿದೆ?’  ಎಂದು ಅವರು ಪ್ರಶ್ನಿಸಿದರು.

ಜನರಿಗೆ ಅವರು ಉದ್ಯೋಗ ಕೊಟ್ಟರಾ? ಕಪ್ಪು ಹಣ ತಂದರಾ? ರಾಜ್ಯದಲ್ಲಿ ಶಾಂತಿ ಕಾಪಾಡಿದರಾ? ದೇಶದ ಗಡಿ ಉಳಿಸಿಕೊಂಡರಾ? ದೇಶದ ಐಕ್ಯತೆ, ಸಮಗ್ರತೆ, ಶಾಂತಿ ಉಳಿಸಿಕೊಂಡರಾ? ರೈತ ಉಳಿದನಾ? ಕಾರ್ಮಿಕ ಉಳಿದನಾ? ಇದರ ಬಗ್ಗೆ ಬಿಜೆಪಿ ಸ್ನೇಹಿತರು ಉತ್ತರಿಸಬೇಕು ಎಂದು ಅವರು ಆಗ್ರಹಿಸಿದರು.

ನಾನು ಪ್ರಕೃತಿ ನಿಯಮದಲ್ಲಿ ನಂಬಿಕೆ ಇಟ್ಟವನು. ಇಡೀ ಪ್ರಪಂಚ, ಮನುಕುಲ ನರಳುತ್ತಿದೆ. ಇಂತಹ ಸಂದರ್ಭದಲ್ಲಿ ಜನರನ್ನು ಕಾಪಾಡದ ಸರಕಾರ ನಮಗೆ ಬೇಕೇ? ಶಾಲೆಗೆ ಹೋಗುವ ಚಿಕ್ಕ ಮಕ್ಕಳು, ಅವರ ಪೋಷಕರು ಆತಂಕ ಪಡುವಂತಾಗಿದೆ ಎಂದು ಹೇಳಿದರು.

ಈ ದೇಶದಲ್ಲಿ ಶಾಂತಿ ಕಾಪಾಡಿ, ಅಭಿವೃದ್ಧಿ ಮಾಡಬೇಕು. ಜನರ ಬದುಕಿನ ಬಗ್ಗೆ ಕಾಳಜಿ ವಹಿಸಿ, ನಾವೆಲ್ಲರೂ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಅಧಿಸೂಚನೆ ಇನ್ನೂ ಬಿಡುಗಡೆ ಆಗಿಲ್ಲ. ಅದಕ್ಕಾಗಿ ನಾವು ಕಾಯುತ್ತಿದ್ದೇವೆ. ಅದಾದ ನಂತರ 14ನೇ ತಾರೀಖು ರಾಜರಾಜೇಶ್ವರಿ ನಗರ ಉಪಚುನಾವಣೆ ನಾಮಪತ್ರ ಸಲ್ಲಿಕೆ ಮಾಡುತ್ತೇವೆ. 15 ರಂದು ಶಿರಾದಲ್ಲಿ ನಾವೆಲ್ಲರೂ ಹೋಗಿ ನಾಮಪತ್ರ ಸಲ್ಲಿಸುತ್ತೇವೆ. ಎರಡೂ ಕಡೆ ನಾನು ಹಾಗೂ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಇರುತ್ತಾರೆ ಎಂದರು.

ನನಗೆ ರಾಜೇಶ್ ಗೌಡ ಯಾರೂ ಅಂತಾನೆ ಗೊತ್ತಿಲ್ಲ. ರಾಜಣ್ಣ ಅವರು ಜಯಚಂದ್ರ ಅವರ ಹೆಸರು ಪ್ರಸ್ತಾಪ ಮಾಡಿದರು. ಪರಮೇಶ್ವರ್ ಅವರು ಅದಕ್ಕೆ ಒಪ್ಪಿದರು. ನಾವೆಲ್ಲ ಒಮ್ಮತದಿಂದ ಒಂದೇ ಅಭ್ಯರ್ಥಿ ಹೆಸರನ್ನು ರವಾನಿಸಿದೆವು ಎಂದು ಅವರು ಸ್ಪಷ್ಟಪಡಿಸಿದರು.

ಎಲ್ಲರ ಜತೆ ಚರ್ಚಿಸಿ ಅಭ್ಯರ್ಥಿ ಆಯ್ಕೆ: ರಾಜರಾಜೇಶ್ವರಿ ನಗರ ಸೇರಿದಂತೆ ವಿಧಾನಸಭೆ, ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿ ಆಯ್ಕೆ ಮಾಡುವಾಗ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಜತೆ ಚರ್ಚಿಸಿ ಅಂತಿಮಗೊಳಿಸಲಾಗಿದೆ ಎಂದು ಹೇಳಿದರು.

ನಾನು ಭ್ರಷ್ಟ ಅನ್ನೋ ಸಾಕ್ಷಿ ಜನರ ಮುಂದೆ ಇಡಲಿ: ನಾನು ಭ್ರಷ್ಟನೋ ಅಥವಾ ತತ್ವಜ್ಞಾನಿಯೋ ಎಂಬುದನ್ನು ಸಿ.ಟಿ.ರವಿ ಜನರ ಮುಂದೆ ಇಡಲಿ. ನನ್ನ ವಿರುದ್ಧ ಎಷ್ಟು ತನಿಖೆಯಾಗಿದೆ? ಯಾವ ದಾಖಲೆ ಇದೆ ಎಂಬುದನ್ನು ಜನರ ಮುಂದೆ ಇಡಲಿ. ಕೆಲವರಿಗೆ ನನ್ನ ಹೆಸರು ಹೇಳಿದರೆ ಮಾರ್ಕೆಟ್ ಸಿಗುತ್ತದೆ, ಹೀಗಾಗಿ ನನ್ನ ಬಗ್ಗೆ ಮಾತನಾಡುತ್ತಾರೆ. ಮಾತಾಡಿಕೊಳ್ಳಲಿ ಬಿಡಿ. ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಶಿವಕುಮಾರ್ ತಿರುಗೇಟು ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News