ಅಂತರ್ಜಿಲ್ಲಾ ಕಳವು ಆರೋಪಿಯ ಬಂಧನ: 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
Update: 2020-10-09 23:12 IST
ಹಾಸನ, ಅ.9: ಮನೆಯೊಂದರಲ್ಲಿ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸುವಲ್ಲಿ ಅರಸೀಕೆರೆ ಗ್ರಾಮಾಂತರ ವೃತ್ತದ ಪೊಲೀಸರು ಯಶಸ್ವಿಯಾಗಿದ್ದು, 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಧಿತ ಆರೋಪಿ ತುಮಕೂರಿನ ಮಳ್ಳೂರು ದಿಣ್ಣೆ, ಎಸ್.ಎಸ್.ಐ.ಟಿ. ಕಾಲೇಜು ಹತ್ತಿರ 14ನೇ ಕ್ರಾಸ್ನಲ್ಲಿ ವೆಲ್ಡಿಂಗ್ ಕೆಲಸ ನಿರ್ವಹಿಸುವ ಮುಬಾರಕ್ (25) ಎಂದು ಮಾಹಿತಿ ನೀಡಿದರು.
19 ಪ್ರಕರಣಗಳಲ್ಲಿ ಭಾಗಿ: ಹಾಸನ ಜಿಲ್ಲೆಯಲ್ಲಿ 6 ಪ್ರಕರಣಗಳು, ಚಿಕ್ಕಮಗಳೂರು ಜಿಲ್ಲೆಯ 6 ಪ್ರಕರಣಗಳು, ತುಮಕೂರು ಜಿಲ್ಲೆಯ 3 ಪ್ರಕರಣಗಳು, ಶಿವಮೊಗ್ಗ ಜಿಲ್ಲೆಯ 3 ಸೇರಿ ಒಟ್ಟು 19 ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಹೇಳಿದರು.