ರಿಪೇರಿ ಮಾಡುತ್ತಿದ್ದಾಗ ಕಬ್ಬಿನ ಲಾರಿ ಮಗುಚಿ ಬಿದ್ದು ಮೆಕ್ಯಾನಿಕ್ ಮೃತ್ಯು

Update: 2020-10-14 17:29 GMT

ಮಂಡ್ಯ, ಅ.14: ಕಬ್ಬು ತುಂಬಿದ ಲಾರಿ ಮಗುಚಿ ಬಿದ್ದು ಲಾರಿ ಮೆಕ್ಯಾನಿಕ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೆ.ಆರ್.ಪೇಟೆ ತಾಲೂಕು ಮುರುಕನಹಳ್ಳಿ ಫಾರಂ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.

ಸಮೀಪದ ಹೆಮ್ಮನಹಳ್ಳಿ ಬಳಿ ಇರುವ ಲಾರಿ ಸರ್ವೀಸ್ ಸೆಂಟರ್  ಮೆಕ್ಯಾನಿಕ್ ಮೊಹ್ಸಿನ್ ಸಾವನ್ನಪ್ಪಿದ ವ್ಯಕ್ತಿ. ಗ್ರಾಮಸ್ಥರು ಒಂದು ಗಂಟೆ ಶ್ರಮಪಟ್ಟು ಕಬ್ಬು ರಾಶಿಯಡಿ ಸಿಲುಕಿದ್ದ ಶವವನ್ನು ಹೊರತೆಗೆದಿದ್ದಾರೆ.

ಕಿಕ್ಕೇರಿ ಹೋಬಳಿ ಉದ್ದಿನ ಬೋರೆ ಕಾವಲ್ ಗ್ರಾಮದಿಂದ ಮದ್ದೂರು ತಾಲೂಕು ಕೆ.ಎಂ.ದೊಡ್ಡಿಯ ಚಾಂಷುಗರ್ ಕಾರ್ಖಾನೆಗೆ ಕಬ್ಬು ತುಂಬಿಕೊಂಡು ಬರುತ್ತಿದ್ದ ಲಾರಿ ಮುರುಕನಹಳ್ಳಿ ಫಾರಂ ಬಳಿ ಕೆಟ್ಟು ನಿಂತಿದ್ದಾಗ ಈ ಘಟನೆ ಸಂಭವಿಸಿದೆ.

ಸಮೀಪದ ಹೆಮ್ಮನಹಳ್ಳಿ ಬೋರೆಯ ಲಾರಿ ಸರ್ವೀಸ್ ಸೆಂಟರ್ ನಿಂದ ಮೆಕ್ಯಾನಿಕ್ ಮೊಹ್ಸಿನ್ ಅವರನ್ನು ಕರೆಸಿ ಜಾಕ್ ಕೊಟ್ಟು ರಿಪೇರಿ ಮಾಡುತ್ತಿದ್ದಾಗ ಜಾಕ್ ಜಾರಿ ಲಾರಿ ಮಗುಚಿ ಬಿದ್ದು ಕಬ್ಬಿನ ರಾಶಿಯಡಿ ಸಿಲುಕಿ ಮೊಹ್ಸಿನ್ ಸಾವನ್ನಪ್ಪಿದ್ದಾರೆ.

ಲಾರಿ ಚಾಲಕ ಮತ್ತು ಕ್ಲೀನರ್ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಕೆ.ಆರ್.ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News