ಜಾಗತಿಕವಾಗಿ ಜನೌಷಧಿ ತಯಾರಿಕೆ-ರಫ್ತು ವ್ಯವಹಾರದಲ್ಲಿ ಭಾರತ ಅತೀ ದೊಡ್ಡ ರಾಷ್ಟ್ರ: ಡಿ.ವಿ.ಸದಾನಂದಗೌಡ

Update: 2020-10-15 14:53 GMT

ಹೊಸದಿಲ್ಲಿ, ಅ.15: ಜಾಗತಿಕವಾಗಿ ಜನೌಷಧಿ ತಯಾರಿಕೆ ಮತ್ತು ರಫ್ತು ವ್ಯವಹಾರದಲ್ಲಿ ಭಾರತ ಅತಿ ದೊಡ್ಡ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.

ಗುರುವಾರ ಎಫ್.ಐ.ಸಿ.ಸಿ.ಐ ಆಯೋಜಿಸಿದ್ದ ಲೀಡ್ಸ್ 2020 ವೇಳೆ ಲ್ಯಾಟಿನ್ ಅಮೆರಿಕಾ ಮತ್ತು ಕೆರೇಬಿಯನ್ ವರ್ಚುವಲ್ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಕೇಂದ್ರ ಸದಾನಂದ ಗೌಡ, ಕೋವಿಡ್-19ರ ಆರಂಭದ ಕಾಲದಲ್ಲಿ ಗಂಭೀರ ಪ್ರಕರಣಗಳ ಚಿಕಿತ್ಸಾ ಶಿಷ್ಟಾಚಾರದಲ್ಲಿ ಎಚ್.ಸಿ.ಕ್ಯು ಮತ್ತು ಅಜಿತ್ರೋಮೈಸಿನ್ ಅನ್ನು ಔಷಧವಾಗಿ ಗುರುತಿಸಲಾಗಿತ್ತು ಎಂದರು.

ಭಾರತ ಈ ಔಷಧಗಳನ್ನು ವಿಶ್ವದ 120ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಪೂರೈಕೆ ಮಾಡಿತು. ಅಲ್ಲಿಂದ ಭಾರತ ಅತ್ಯಂತ ವಿಶ್ವಾಸಾರ್ಹ ಔಷಧ ಪೂರೈಕೆದಾರ ಎಂಬ ಗೌರವಕ್ಕೆ ಪಾತ್ರವಾಯಿತು. ಯುಎಸ್ ಮತ್ತು ಯುರೋಪಿನಂತಹ ಉನ್ನತ ಗುಣಮಟ್ಟವನ್ನು ಅನುಸರಿಸುವ ದೇಶಗಳು ಸೇರಿದಂತೆ ವಿವಿಧ ದೇಶಗಳಿಗೆ 20 ಶತಕೋಟಿ ಡಾಲರ್ ಮೌಲ್ಯದ ಔಷಧ ಉತ್ಪನ್ನಗಳ ರಫ್ತು ಹೊಂದಿರುವ ಭಾರತ, ಸಂಯುಕ್ತ ಅಮೆರಿಕಾ ಸಂಸ್ಥಾನದ ಹೊರಗೆ ಯುಎಸ್-ಎಫ್.ಡಿ.ಎ ಕಂಪ್ಲೈಂಟ್ ಔಷಧ ಘಟಕಗಳನ್ನು (ಎಪಿಐಗಳು ಸೇರಿದಂತೆ 262 ಕ್ಕಿಂತ ಹೆಚ್ಚು) ಹೊಂದಿರುವ ಏಕೈಕ ದೇಶವಾಗಿದೆ ಎಂದು ಅವರು ಮಾಹಿತಿ ನೀಡಿದರು.

ಭಾರತದ ಔಷಧ ವಲಯ 2024ರ ಹೊತ್ತಿಗೆ 65 ಶತಕೋಟಿ ಡಾಲರ್ ಕೈಗಾರಿಕೆಯಾಗಿ ವೃದ್ಧಿಸಬಲ್ಲುದಾಗಿದೆ. ನಾವು ಇತ್ತೀಚೆಗೆ ಏಳು ಮೆಗಾ ಪಾರ್ಕ್ ಗಳ ಅಭಿವೃದ್ಧಿಗಾಗಿ ಯೋಜನೆಗಳನ್ನು ಪ್ರಾರಂಭಿಸಿದ್ದೇವೆ. ದೇಶಾದ್ಯಂತ ಮೂರು ಬೃಹತ್ ಔಷಧಿ ಉದ್ಯಾನಗಳು ಮತ್ತು ನಾಲ್ಕು ವೈದ್ಯಕೀಯ ಸಾಧನಗಳ ಉದ್ಯಾನಗಳು. ಹೊಸ ಉತ್ಪಾದಕರು ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ (ಪಿಎಲ್.ಐ) ಯೋಜನೆಗೆ ಅರ್ಹರಾಗಿದ್ದಾರೆ. ಅವರು ತಮ್ಮ ಮಾರಾಟದ ಆಧಾರದ ಮೇಲೆ ಮೊದಲ 5-6 ವರ್ಷಗಳವರೆಗೆ ಆರ್ಥಿಕ ಪ್ರೋತ್ಸಾಹಕ್ಕೆ ಅರ್ಹರಾಗಿರುತ್ತಾರೆ ಎಂದು ಸದಾನಂದಗೌಡ ಹೇಳಿದರು.

ಔಷಧ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಮತ್ತು ಭಾರತದಲ್ಲಿ ಉತ್ಪಾದನಾ ನೆಲೆಯನ್ನು ಸ್ಥಾಪಿಸಲು ಇದು ಬಹಳ ಉತ್ತಮ ಸಮಯ. ಜಂಟಿ ಸಹಯೋಗದ ಮೂಲಕವೂ ಯಾರಾದರೂ ಭಾರತ ಮಾರುಕಟ್ಟೆ ಪ್ರವೇಶಿಸಬಹುದು. ನೀವು ಔಷಧ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಭಾರತದ ಮೂಲಕ ದೇಶೀಯ ಭಾರತೀಯ ಮಾರುಕಟ್ಟೆ, ಯುಎಸ್, ಜಪಾನ್, ಐರೋಪ್ಯ ಔಕ್ಕೂಟ ಮತ್ತು ಆಗ್ನೇಯ ಏಷ್ಯಾದಂತಹ ದೊಡ್ಡ ಮಾರುಕಟ್ಟೆಗಳಿಗೆ ಪ್ರವೇಶವನ್ನು ಪಡೆಯಬಹುದು ಎಂದು ಅವರು ತಿಳಿಸಿದರು.

ಭಾರತೀಯ ಔಷಧ ಕ್ಷೇತ್ರದ ಬಗ್ಗೆ ಆಸಕ್ತಿ ಇರುವ ಯಾರು ಬೇಕಾದರೂ ತಮ್ಮ ಕಚೇರಿಯನ್ನು ಸಂಪರ್ಕಿಸಬಹುದು, ನಾವು ಎಲ್ಲಾ ಸೌಲಭ್ಯ ಒದಗಿಸುತ್ತೇವೆ ಮತ್ತು ಸಹಾಯ ಹಸ್ತ ನೀಡುತ್ತೇವೆ ಎಂದು ಸದಾನಂದಗೌಡ ಪ್ರತಿಪಾದಿಸಿದರು.

ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕ ವಲಯದ ಮಾರುಕಟ್ಟೆಯ ಗಾತ್ರ ಭಾರತದಲ್ಲಿ 165 ಶತಕೋಟಿ ಡಾಲರ್ ಆಗಿದೆ. ಈ ಗಾತ್ರ 2025ರ ಹೊತ್ತಿಗೆ 300 ಶತಕೋಟಿಗೆ ವೃದ್ಧಿಸುವ ನಿರೀಕ್ಷೆ ಇದೆ. ಇದು ಭಾರತದ ರಾಸಾಯನಿಕ ವಲಯದಲ್ಲಿ ಬೃಹತ್ ಅವಕಾಶಗಳನ್ನು ಒದಗಿಸುತ್ತದೆ. ಉದಾಹರಣೆಗೆ ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ಭಾರತಕ್ಕೆ 2025ರ ಹೊತ್ತಿಗೆ 5 ಕ್ರ್ಯಾಕರ್ಸ್ ಮತ್ತು 2040ರ ಹೊತ್ತಿಗೆ ಹೆಚ್ಚುವರಿಯಾಗಿ 14 ಅಗತ್ಯವಿದೆ ಎಂದು ಅವರು ಹೇಳಿದರು.

ಈ ಕ್ರ್ಯಾಕರ್ ಗಳಿಗೆ ಮಾತ್ರವೇ 65 ಶತಕೋಟಿ ಡಾಲರ್ ಸಂಚಿತ ಹೂಡಿಕೆಯ ಅಗತ್ಯವಿರುತ್ತದೆ. ವಿದೇಶಿ ಪಾಲ್ಗೊಳ್ಳುವಿಕೆಯನ್ನು ಆಕರ್ಷಿಸಲು, ಭಾರತ ಸರಕಾರ ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕ ವಲಯದ ನೀತಿಗಳನ್ನು ಮರು ಪರಿಶೀಲಿಸುತ್ತಿದೆ ಎಂದು ಸದಾನಂದಗೌಡ ತಿಳಿಸಿದರು.

ನಮ್ಮ ಔಷಧೀಯ ವಲಯ ವಿಸ್ತರಿಸುತ್ತಿರುವಂತೆಯೇ ಮಾರಾಟದ ಆಧಾರದ ಮೇಲೆ ಹಣಕಾಸಿನ ಪ್ರೋತ್ಸಾಹಕವನ್ನು ವಿಸ್ತರಿಸಲು ಯೋಚಿಸುತ್ತಿದ್ದೇವೆ. ಪಿಸಿಪಿಐಆರ್ ಎಂದು ನಾವು ಕರೆಯುವ ನಮ್ಮ ರಾಸಾಯನಿಕ ಕೈಗಾರಿಕಾ ಕ್ಲಸ್ಟರ್ ಮತ್ತು ಪ್ಲಾಸ್ಟಿಕ್ ಉದ್ಯಾನಗಳನ್ನು ಬಲಪಡಿಸಲು ನಾವು ನಮ್ಮ ನೀತಿಗಳನ್ನು ವಿಸ್ತಾರ ಮಾಡುತ್ತಿದ್ದೇವೆ. ಒಟ್ಟಾರೆ, ಸರಕಾರದ ನೀತಿಗಳ ಈ ಬೆಂಬಲ ರಾಸಾಯನಿಕಗಳು ಮತ್ತು ಪೆಟ್ರೋ ರಾಸಾಯನಿಕ ವಲಯಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ವ್ಯಾಪಾರ ಮಾಡಲು ಉತ್ತಮ ವಾತಾವರಣವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.

ರಸಗೊಬ್ಬರ ವಲಯ ಭಾರತದಲ್ಲಿ ಆಕರ್ಷಕ ವಲಯವಾಗಿದೆ. ಪ್ರತಿ ವರ್ಷ ನಮ್ಮ ರೈತರಿಂದ ರಸಗೊಬ್ಬರಕ್ಕೆ ಭಾರೀ ಬೇಡಿಕೆ ಇದೆ. ಆದಾಗ್ಯೂ ದೇಶದ ರೈತರ ಅಗತ್ಯವನ್ನು ಪೂರೈಸಲು ದೇಶೀಯ ರಸಗೊಬ್ಬರ ಉತ್ಪಾದನೆ ಮಾತ್ರವೇ ಸಾಕಾಗುತ್ತಿಲ್ಲ. ನಾವು ಯೂರಿಯಾ ಮತ್ತು ಪಿ ಮತ್ತು ಕೆ ರಸಗೊಬ್ಬರಗಳ ದೊಡ್ಡ ಆಮದುದಾರರಾಗಿದ್ದೇವೆ. 2018-19ರಲ್ಲಿ ಭಾರತ 7.5 ದಶಲಕ್ಷ ಟನ್ ಯೂರಿಯಾ, 6.6 ದಶಲಕ್ಷ ಟನ್ ಡಿಎಪಿ, 3 ದಶಲಕ್ಷ ಟನ್ ಎಂ.ಓ.ಪಿ ಮತ್ತು 0.5 ದಶಲಕ್ಷ ಟನ್ ಎನ್.ಪಿ.ಕೆ. ರಸಗೊಬ್ಬರ ಆಮದು ಮಾಡಿಕೊಂಡಿದೆ ಎಂದು ಸದಾನಂದಗೌಡ ತಿಳಿಸಿದರು.

ಲ್ಯಾಟಿನ್ ಅಮೆರಿಕಾ ಮತ್ತು ಕೆರೆಬಿಯನ್ ರಾಷ್ಟ್ರಗಳು ರಾಸಾಯಿಕ ಗೊಬ್ಬರದ ನಿವ್ವಳ ಆಮದುದಾರರು. ಖರೀದಿದಾರರಾಗಿ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸುವ ಬದಲು, ನಾವು ಪೂರೈಕೆ ಸರಪಳಿಯನ್ನು ಹೆಚ್ಚು ಸಮರ್ಥಗೊಳಿಸಲು ಸಹಕರಿಸಿದರೆ, ಸ್ಪರ್ಧಾತ್ಮಕ ದರದಲ್ಲಿ ನಮಗೆ ಅಗತ್ಯ ಪ್ರಮಾಣದ ಗೊಬ್ಬರ ದೊರಕುತ್ತದೆ ಎಂದು ಅವರು ಹೇಳಿದರು.

ಪರ್ಯಾಯ ರಸಗೊಬ್ಬರ ಅಂದರೆ ನ್ಯಾನೋ ರಸಗೊಬ್ಬರ ಅಭಿವೃದ್ಧಿಗೆ ಸಹಯೋಗದ ಅಗತ್ಯವಿದೆ, ಇದು ನಮ್ಮ ಗೊಬ್ಬರದ ಅಗತ್ಯ/ಬಳಕೆ ತಗ್ಗಿಸುತ್ತದೆ ಮತ್ತು ಆಮದಿನ ಮೇಲಿನ ಅವಲಂಬನೆಯನ್ನೂ ಕಡಿಮೆ ಮಾಡುತ್ತದೆ ಸದಾನಂದ ಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News