ಸಾರಿಗೆ ವ್ಯವಸ್ಥೆ ಸುಧಾರಣೆ ಕ್ರಮಕ್ಕೆ ನಿತಿನ್ ಗಡ್ಕರಿ ಪ್ರಶಂಸೆ: ಡಿಸಿಎಂ ಲಕ್ಷ್ಮಣ ಸವದಿ

Update: 2020-10-15 17:00 GMT

ಬೆಂಗಳೂರು, ಅ. 15: ರಾಜ್ಯ ಸರಕಾರವು ಸಾರಿಗೆ ವ್ಯವಸ್ಥೆಯಲ್ಲಿ ಕೈಗೊಂಡ ವ್ಯಾಪಕ ಸುಧಾರಿತ ಕ್ರಮಗಳಿಂದಾಗಿ ವಾಹನ ಅಪಘಾತಗಳಿಗೆ ಕಡಿವಾಣ ಹಾಕಲಾಗಿರುವ ಬಗ್ಗೆ ಕೇಂದ್ರ ಭೂ ಸಾರಿಗೆ, ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ರಾಜ್ಯದ ಸಾರಿಗೆ ಸುಧಾರಣೆಯ ಲಕ್ಷ್ಮಣ ಸವದಿ ಅವರೊಂದಿಗೆ ವರ್ಚುವಲ್ ಸಭೆ ನಡೆಸಿ ಮಾಹಿತಿ ಪಡೆದುಕೊಂಡ ಅವರು, ಸದ್ಯದಲ್ಲಿಯೇ ಹೊಸದಿಲ್ಲಿ ಮತ್ತೊಮ್ಮೆ ಸಭೆ ನಡೆಸಿ ಕೇಂದ್ರ ಸರಕಾರವು ಕರ್ನಾಟಕದಲ್ಲಿ ಜಾರಿಗೊಳಿಸಲಿರುವ ಸಾರಿಗೆ ಮತ್ತು ಹೆದ್ದಾರಿ ವಿಸ್ತರಣೆ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಭರವಸೆ ನೀಡಿದರು.

ಮೈಸೂರಿನಲ್ಲಿ 2015ರಿಂದ ಇಂಟಲಿಜೆನ್ಸ್ ಟ್ರಾನ್ಸ್‍ಫೋರ್ಟ್ ಸಿಸ್ಟಂ (ಜಾಣ ಸಾರಿಗೆ ವ್ಯವಸ್ಥೆ) ಜಾರಿಗೆ ತಂದಿರುವುದರಿಂದ ಅಪಘಾತಗಳ ಪ್ರಮಾಣವನ್ನು ಹಿಂದಿಗಿಂತ ಸುಮಾರು ಅರ್ಧದಷ್ಟು ಕಡಿಮೆಗೊಳಿಸಲಾಗಿದೆ ಎಂದು ಸವದಿ, ಕೇಂದ್ರ ಸಚಿವರಿಗೆ ಮಾಹಿತಿ ನೀಡಿದರು. ಈ ಬಗ್ಗೆ ಶ್ಲಾಘಿಸಿದ ಗಡ್ಕರಿ, ಈ ಮಾದರಿ ಪ್ರಯತ್ನವನ್ನು ಉಳಿದ ರಾಜ್ಯಗಳಲ್ಲೂ ಜಾರಿಗೊಳಿಸಲು ಕೇಂದ್ರ ಸರಕಾರವು ಕರ್ನಾಟಕದಿಂದ ವರದಿ ತರಿಸಿಕೊಂಡು ಮುಂದುವರಿಯಲಿದೆ ಎಂದು ತಿಳಿಸಿದರು.

ಈ ಯಶಸ್ವಿ ಪ್ರಯೋಗವನ್ನು ಕರ್ನಾಟಕದ ಉಳಿದ ಕಡೆಗಳಲ್ಲೂ ಜಾರಿಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ವಿಶ್ವಬ್ಯಾಂಕ್ ಹಾಗೂ ಕೇಂದ್ರ ಸರಕಾರದ ಸಹಯೋಗದೊಂದಿಗೆ ಚಾಲಕರಿಗೆ ಚಾಲನಾ ಆಧಾರಿತ ಬಸ್ ಸಿಮ್ಯೂಲೇಟರ್‍ಗಳನ್ನು ಅಳವಡಿಸಿ ವಿಶೇಷ ತರಬೇತಿ ನೀಡಲು ಕೇಂದ್ರವನ್ನು ಸ್ಥಾಪಿಸಲಾಗಿದೆ. ಇಂಧನ ಉಳಿತಾಯದ ಕುರಿತು ನಾಲ್ಕೂ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಸುಮಾರು 10 ಸಾವಿರ ಚಾಲಕರಿಗೆ ತರಬೇತಿ ನೀಡಲಾಗುತ್ತಿದೆ. ಇದರಿಂದ ಇಂಧನ ಉಳಿತಾಯ ಹಾಗೂ ರಸ್ತೆ ಸುರಕ್ಷತೆಯ ಬಗ್ಗೆ ತಿಳಿವಳಿಕೆ ನೀಡಲಾಗುವುದು. ತಾವು ತಿಳಿಸಿದಂತೆ ಹೆಚ್ಚಾಗಿ ಸಂಭವಿಸುವ ಅಪಘಾತದ ವಲಯಗಳನ್ನು ರಾಜ್ಯಾದ್ಯಂತ ಗುರುತಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.

ಸಾರಿಗೆ ಇಲಾಖೆಯಲ್ಲಿ ಕೇಂದ್ರ ಸರಕಾರದ ಸಹಯೋಗದೊಂದಿಗೆ ಟೆಕ್ನಾಲಜಿ ಆಧಾರಿತ ವಿಎಲ್‍ಟಿಎಸ್ (ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಸಿಸ್ಟಂ) ಅಳವಡಿಕೆಯನ್ನು ಜಾರಿಗೆ ತಂದು ರಸ್ತೆ ಸುರಕ್ಷತೆಗೆ ಹೆಚ್ಚು ಮಹತ್ವ ನೀಡಲು ಸರಕಾರ ಅನೇಕ ನೂತನ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡಿರುತ್ತದೆ. ಅಲ್ಲದೆ, ವಾಹನಗಳ ವೇಗವನ್ನು ನಿಯಂತ್ರಿಸಲು ಕೇಂದ್ರ ಸರಕಾರದ ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ವಾಹನಗಳಿಗೆ ಸ್ಪೀಡ್ ಗೌರ್ನರ್ ಗಳನ್ನು ಅಳವಡಿಸಲಾಗುತ್ತಿದೆ ಎಂದು ಸವದಿ ಸ್ಪಷ್ಟಪಡಿಸಿದರು.

2019 ಜನವರಿಯಿಂದ ಡಿಸೆಂಬರ್ ವರೆಗೆ ಕರ್ನಾಟಕದಲ್ಲಿ ಒಟ್ಟು 41,707 ಅಪಘಾತಗಳು ಸಂಭವಿಸಿದ್ದು, 10,990 ಮಂದಿ ಸಾವನ್ನಪ್ಪಿದ್ದಾರೆ. 2020 ಜನವರಿಯಿಂದ ಆಗಸ್ಟ್ ವರೆಗೆ ಒಟ್ಟು 21,297 ಅಪಘಾತಗಳು ಸಂಭವಿಸಿದ್ದು, 5,738 ಮಂದಿ ಮೃತರಾಗಿದ್ದಾರೆ. ಆದರೆ ಇಂಟೆಲ್, ಇಸ್ರೋ ಮುಂತಾದ ಸಂಸ್ಥೆಗಳ ಸಹಯೋಗದೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಈ ಅಪಘಾತಗಳ ಪ್ರಮಾಣವನ್ನು ಮತ್ತಷ್ಟು ತಗ್ಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸವದಿ ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News