ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ರಾಜ್ಯಾದ್ಯಂತ ಅ.21ರಿಂದ ಭಾರೀ ಮಳೆ ಸಾಧ್ಯತೆ
Update: 2020-10-18 12:17 GMT
ಬೆಂಗಳೂರು, ಅ. 18: ಅರಬ್ಬಿ ಸಮುದ್ರದಲ್ಲಿ ಪ್ರತ್ಯೇಕ ವಾಯುಭಾರ ಕುಸಿತದ ಲಕ್ಷಣಗಳು ಕಂಡುಬಂದಿದ್ದು, ಅ.19ರಂದು ಇದರ ತೀವ್ರತೆ ಹೆಚ್ಚಾಗಲಿರುವ ಪರಿಣಾಮ ರಾಜ್ಯದ ವಿವಿಧೆಡೆ ಅ.21ರಿಂದ ವ್ಯಾಪಕ ಮಳೆ ಸುರಿಯುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ಅನೇಕ ಕಡೆ ಅ.21ರಿಂದ ಅ.24ರವರೆಗೆ ಹಗುರದಿಂದ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ. ವಾಯುಭಾರ ತೀವ್ರಗೊಂಡರೆ ಅ.21ರಂದು ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಭಾರೀ ಮಳೆ ಬೀಳಲಿದ್ದು, ಬೀದರ್, ಬಾಗಲಕೋಟೆ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಎಚ್ಚರಿಕೆ ನೀಡಲಾಗಿದೆ.
ವಾಯುಭಾರ ಕುಸಿತದ ಪರಿಣಾಮ ಉತ್ತರ ಮಹಾರಾಷ್ಟ್ರ ದಕ್ಷಿಣ ಕರಾವಳಿಯ ಸಮೀಪ ಚಂಡಮಾರುತ ಉಂಟಾಗುವ ಸಾಧ್ಯತೆ ಇದ್ದು ಉತ್ತರ ಕರ್ನಾಟಕದ ಹಲವು ಭಾಗ ಸೇರಿದಂತೆ ತೆಲಂಗಾಣದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.