ಕೊರೋನ ವಾರಿಯರ್ ಗಳಿಗೆ ಸಿಗದ ಪರಿಹಾರ: ಕುಮಾರಸ್ವಾಮಿ ಆಕ್ರೋಶ

Update: 2020-10-18 16:07 GMT

ಬೆಂಗಳೂರು, ಅ. 18: ರಾಜ್ಯದಲ್ಲಿ ಕೊರೋನ ಸಂದರ್ಭದಲ್ಲೂ ನಾಗರಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜೀವ ಪಣಕ್ಕಿಟ್ಟು ಕೆಲಸ ಮಾಡಿದ 500ಕ್ಕೂ ಹೆಚ್ಚು ಕೊರೋನ ವಾರಿಯರ್ಗಳು ಜೀವ ಕಳೆದುಕೊಂಡಿದ್ದು, ಆ ಪೈಕಿ ಕೇವಲ ಒಂದೇ ಒಂದು ಕುಟುಂಬಕ್ಕೆ ಸರಕಾರ ಪರಿಹಾರ ನೀಡಿದೆ ಎಂಬ ವಿಚಾರ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ರವಿವಾರ ಈ ಸಂಬಂಧ ಸರಣಿ ಟ್ವೀಟ್‍ಗಳನ್ನು ಮಾಡಿರುವ ಅವರು, ಕೇವಲ ಬಾಯಿ ಚಪಲ ತೀರಿಸಿಕೊಳ್ಳಲು ಕೊರೋನ ವಾರಿಯರ್ಗಳನ್ನು ಭೇಷ್ ಎನ್ನುವ ಸರಕಾರ, ಅವರ ಜೀವದ ಜತೆ ಆಟವಾಡುತ್ತಿದೆ. ಜನರ ಆರೋಗ್ಯ ಕಾಪಾಡುವ ಸಲುವಾಗಿ ತಮ್ಮ ಸರ್ವಸ್ವವನ್ನೇ ಬಲಿಕೊಟ್ಟ ಕೊರೋನ ವಾರಿಯರ್ ಕುಟುಂಬಗಳಿಗೆ ತಾನೇ ಘೋಷಿಸಿದಂತೆ ಪರಿಹಾರ ಕೊಡದಿದ್ದರೆ ಸರಕಾರ ಇದ್ದರೆಷ್ಟು? ಬಿಟ್ಟರೆಷ್ಟು? ಎಂದು ಕಿಡಿಗಾರಿದ್ದಾರೆ.

ತನ್ನ ಹೆತ್ತ ತಾಯಿಯನ್ನು ಉಳಿಸಿಕೊಡಿ ಎಂದು ವಿದ್ಯಾಗಮ ಯೋಜನೆಯಡಿ ಕೆಲಸ ಮಾಡಿದ ಶಿಕ್ಷಕಿಯ ಪುತ್ರಿಯೊಬ್ಬಳು ಸರಕಾರಕ್ಕೆ ಪತ್ರ ಬರೆದರೆ, ಶಿಕ್ಷಕಿಯ ಚಿಕಿತ್ಸಾ ವೆಚ್ಚದ ಬಿಲ್ ಕೊಡುತ್ತೇನೆ ಎಂಬ ಹೃದಯಹೀನ ಉತ್ತರ ಕೊಡುವ ಈ ರಾಜ್ಯದ ಶಿಕ್ಷಣ ಮಂತ್ರಿಯಿಂದ ಹಾಗೂ ಇಂತಹ ಮನಸ್ಥಿತಿಯ ಸರಕಾರದಿಂದ ಕೊರೋನ ವಾರಿಯರ್ಗಳ ಕುಟುಂಬಗಳು ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ಅವರು ಟೀಕಿಸಿದ್ದಾರೆ.

60 ವೈದ್ಯರು, 20 ನರ್ಸ್ ಗಳು, 82 ಪೊಲೀಸರು, 10 ಪೌರ ಕಾರ್ಮಿಕರು, 96 ಚಾಲಕ-ನಿರ್ವಾಹಕರು, 235 ಶಿಕ್ಷಕರು-ಉಪನ್ಯಾಸಕರು, 10 ಆಶಾ ಕಾರ್ಯಕರ್ತೆಯರು ಹೀಗೆ 500ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಇನ್ನು ಪತ್ರಕರ್ತರು, ಬ್ಯಾಂಕ್ ಸೇರಿದಂತೆ ವಿವಿಧ ಸೇವಾ ವಲಯದ ನೌಕರರು ಕೂಡ ಜೀವ ತೆತ್ತಿದ್ದಾರೆ. ಇವರ ಕುಟುಂಬಗಳಿಗೆ ಸರಕಾರ ಉತ್ತರದಾಯಿತ್ವ ಪ್ರದರ್ಶಿಸಬೇಕಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ತಮಟೆ ಬಾರಿಸಿ, ದೀಪ ಹಚ್ಚಿ, ಜನಪ್ರಿಯತೆ ಗಳಿಸಿ, ಪೋಷಾಕು ಕೊಟ್ಟರೆ ಕೊರೋನ ವಾರಿಯರ್ಗಳು ಹಾಗೂ ಅವರ ಕುಟುಂಬಗಳು ಹೇಗೆ ಸಮಾಧಾನ ಪಟ್ಟುಕೊಳ್ಳಬೇಕು? ಕನಿಷ್ಠ ಪಕ್ಷ ಕೊರೋನ ವಾರಿಯರ್ಗಳ ಸುರಕ್ಷತೆಗೆ ಸರಕಾರ ಕ್ರಮಕೈಗೊಳ್ಳಬೇಕು, ಅದನ್ನೂ ಮೀರಿ ಜೀವ ಕಳೆದುಕೊಳ್ಳುವ ಕುಟುಂಬಗಳಿಗೆ ಪರಿಹಾರ ಕೊಡದೇ ಹೋದರೆ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News