ನೆರೆಯಲ್ಲಿ ಮನೆ ಕಳೆದುಕೊಂಡವರಿಗೆ ತಕ್ಷಣ 10 ಸಾವಿರ ರೂ. ಬಿಡುಗಡೆ: ಶಶಿಕಲಾ ಜೊಲ್ಲೆ
Update: 2020-10-18 17:33 GMT
ವಿಜಯಪುರ, ಅ. 18: ಮನೆ ಕಳೆದುಕೊಂಡವರಿಗೆ ತಕ್ಷಣ 10 ಸಾವಿರ ರೂ. ಬಿಡುಗಡೆ ಮಾಡಲಾಗಿದೆ. ಎರಡು ತಿಂಗಳ ಹಿಂದೆ ಮಳೆಯಾದ ವೇಳೆ ಆದ ನಷ್ಟ ಹಾಗೂ ಈಗಿನ ನಷ್ಟದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಭರವಸೆ ನೀಡಿದ್ದಾರೆ.
ಚಡಚಣ ತಾಲ್ಲೂಕಿನ ಉಮರಾಣಿ ಗ್ರಾಮದ ಸರಕಾರಿ ಶಾಲೆಯಲ್ಲಿ ತೆರೆದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದ ತಮಗೆ ಆರೋಗ್ಯ ಸಮಸ್ಯೆ ಇದೆ. ಜತೆಗೆ ಕೋವಿಡ್ ಪಾಸಿಟಿವ್ ಇದ್ದ ಕಾರಣ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆಗೆ ಬರಲು ತಡವಾಯಿತು ಎಂದು ಹೇಳಿದರು.
ವೈದ್ಯರು ಹೆಚ್ಚು ಮಾತನಾಡಬೇಡಿ, ಪ್ರವಾಸ ಮಾಡಬೇಡಿ ಎಂದು ಸಲಹೆ ನೀಡಿದ ಕಾರಣಕ್ಕೆ ವಿಜಯಪುರದ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲಿಲ್ಲ. ಈಗ ಖುದ್ದು ಭೇಟಿ ನೀಡಿದ್ದು, ಪ್ರವಾಹ ಸಂತ್ರಸ್ತರಿಗೆ ಎಲ್ಲ ರೀತಿಯ ಸಹಾಯ ಹಸ್ತ ಸರಕಾರ ನೀಡಲಿದೆ ಎಂದರು.