ಓ ಮೆಣಸೇ… .

Update: 2020-10-18 19:30 GMT

ಜೀವಗಳನ್ನು ಅಪಾಯಕ್ಕೊಡ್ಡಿ ಹಬ್ಬ ಆಚರಿಸಬೇಕೆಂದು ಯಾವ ಧರ್ಮವೂ ಹೇಳಿಲ್ಲ -ಡಾ.ಹರ್ಷವರ್ಧನ್, ಕೇಂದ್ರ ಸಚಿವ
ಜೀವಗಳನ್ನು ಬಲಿಕೊಟ್ಟು ಧರ್ಮವನ್ನು ಉಳಿಸಿ ಎಂದು ಹೇಳಿದೆಯೇ?


ಪ್ರಧಾನಿ ಮೋದಿ ಸರಕಾರ ಕೇಂದ್ರದಲ್ಲಿ ಇರುವುದರಿಂದ ಬಿಹಾರ ಸಾಕಷ್ಟು ಅಭಿವೃದ್ಧಿ ಕಂಡಿದೆ-ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ
ಅಪರಾಧ ಪ್ರಕರಣಗಳ ಬಗ್ಗೆ ಹೇಳುತ್ತಿದ್ದಾರೆ.


ಒಂದು ಜಾತಿಯಿಂದ ಯಾವ ಪಕ್ಷವೂ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ -ದೇವೇಗೌಡ, ಮಾಜಿ ಪ್ರಧಾನಿ 
ಒಕ್ಕಲಿಗರ ಜೊತೆಗೆ ಲಿಂಗಾಯತ ಜಾತಿಯೂ ಬೇಕು ಅಂತೀರಾ?


 ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶತಮಾನದ ಮಹಾ ಸುಳ್ಳುಗಾರ- ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಸಹಸ್ರಮಾನದ ಸುಳ್ಳುಗಾರ ಪ್ರಶಸ್ತಿಯನ್ನು ಪಿತಾಜಿಯವರಿಗೇ ಮೀಸಲಿಟ್ಟಿದ್ದೀರಿ ಎಂದಾಯಿತು.


ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಬದಲು ಸರ್ವಾಧಿಕಾರಿ ಶೈಲಿಯ ಆಡಳಿತ ವ್ಯವಸ್ಥೆ ಇದ್ದರೆ ಸೂಕ್ತ - ವಿಜಯ್ ದೇವರಕೊಂಡ, ತೆಲುಗು ನಟ
ನೀವು ಸರ್ವಾಧಿಕಾರಿ ಜಾತಿಯಿಂದಲೇ ಬಂದಿದ್ದೀರಿ ಎನ್ನುವುದಕ್ಕೆ ಈ ಮಾತೇ ಸಾಕು.


ನಾನು ಬಿಜೆಪಿ ಸೇರಿದ್ದರಿಂದ ಭಾರತ್ ಮಾತಾಕಿ ಜೈ ಎನ್ನುವುದನ್ನು ಪಕ್ಷ ನನಗೆ ಕಲಿಸಿದೆ - ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ
ಒಬ್ಬ ಭಾರತೀಯನಾಗಿ ಅಷ್ಟನ್ನು ಹೇಳುವುದಕ್ಕಾಗಿ ಒಂದು ಪಕ್ಷ ಸೇರಬೇಕೇ? ಇದು ನಿಮ್ಮ ದೇಶಭಕ್ತಿಯ ದಾರಿದ್ರವನ್ನು ಹೇಳುತ್ತದೆ.


ಸಂಸದೆ ಶೋಭಾ ಕರಂದ್ಲಾಜೆಗೆ ಗಂಡನನ್ನು ಕಳೆದುಕೊಂಡ ಹೆಣ್ಣಿನ ನೋವಿನ ಅರಿವಿಲ್ಲ - ಉಮಾಶ್ರೀ, ಮಾಜಿ ಸಚಿವೆ
ಗಂಡನಿದ್ದೂ ಅದನ್ನು ಹೇಳಿಕೊಳ್ಳಲಾಗದೇ ಇರುವುದು ಸಣ್ಣ ನೋವೇನೂ ಅಲ್ಲ. 


ಕೇರಳ ಮಾದರಿಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಸುಧಾರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು -ಡಾ.ಕೆ.ಸುಧಾಕರ್, ಸಚಿವ
ಕೇರಳ ಮಾದರಿಯಲ್ಲೇ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತದಾರ ನಿರ್ಧರಿಸಿದ್ದಾನಂತೆ.


ಇಡೀ ಬಿಹಾರವೇ ನನ್ನ ಕುಟುಂಬ - ನಿತೀಶ್ ಕುಮಾರ್, ಬಿಹಾರ ಮುಖ್ಯಮಂತ್ರಿ
ಹಾಗೆಂದು ಇಡೀ ಬಿಹಾರವನ್ನು ನುಂಗಲು ಹೊರಟಿರುವುದೇ?


ಕೇಡರ್‌ಗಳೇ ಲೀಡರ್‌ಗಳಾಗುವ ಭಾರತದ ಏಕೈಕ ಪಕ್ಷ ಬಿಜೆಪಿ - ಸಿ.ಟಿ.ರವಿ, ಸಚಿವ
ಜನರ ಕಿವಿಗೆ ಅದು ಕೇಡಿಗಳು ಎಂದು ಕೇಳಿಸಿದೆ.


ಆರ್.ಆರ್.ನಗರ,ಶಿರಾ ಉಪಚುನಾವಣೆಗಳಲ್ಲಿ ಬಿಜೆಪಿ ಈಗಾಗಲೇ ಗೆದ್ದಾಗಿದೆ. - ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ
ಅಂದರೆ ಇವಿಎಂ ಹೈಜಾಕ್ ಕೆಲಸ ಪೂರ್ಣವಾಗಿದೆಯೇ?


ಜೆಡಿಎಸ್‌ನವರು ಬೇರೆಯವರ ಕುದುರೆ ಏರಿ ಅಧಿಕಾರ ನಡೆಸುವವರು - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
 ಕಾಂಗ್ರೆಸ್ ಕತ್ತೆಗಿಂತ ವಾಸಿ ಎಂದರಂತೆ ಕುಮಾರಸ್ವಾಮಿ.


ಸುಳ್ಳಿಗೆ ಸೀಮಿತ ಅವಧಿ ಇದೆ. ಸತ್ಯ ಶಾಶ್ವತವಾಗಿರುತ್ತದೆ - ಪ್ರಕಾಶ್ ಜಾವ್ಡೇಕರ್, ಕೇಂದ್ರ ಸಚಿವ
ಜನರು ಅದೊಂದೇ ಭರವಸೆಯಿಂದ ಕಾಯುತ್ತಿದ್ದಾರೆ.


ಹೆಣ್ಣು ಮಕ್ಕಳಿಗೆ ವೌಲ್ಯಗಳನ್ನು ಕಲಿಸಿಕೊಟ್ಟರೆ ಮಾತ್ರ ಹಾಥರಸ್‌ನಂತಹ ಅಪರಾಧಗಳನ್ನು ತಡೆಯಲು ಸಾಧ್ಯ - ಸುರೇಂದ್ರ ಸಿಂಗ್, ಉ.ಪ್ರ. ಶಾಸಕ
ಬಹುಶಃ ಅತ್ಯಾಚಾರಿಗಳ ಮೂಲಕ ಅದನ್ನು ಕಲಿಸುವ ಪ್ರಯತ್ನ ನಡೆಯುತ್ತಿರಬೇಕು.


ವಿರೋಧ ಪಕ್ಷದ ಜವಾಬ್ದಾರಿ ನಿರ್ವಹಿಸಲು ಕಾಂಗ್ರೆಸ್ ವಿಫಲ- ಕೆ.ಎಸ್. ಈಶ್ವರಪ್ಪ, ಸಚಿವ

ಒಪ್ಪತಕ್ಕ ಮಾತು. ಇಲ್ಲವಾದರೆ ಸರಕಾರ ಇಷ್ಟು ಬೇಜವಾಬ್ದಾರಿಯಿಂದ ವರ್ತಿಸಲು ಸಾಧ್ಯವೇ?


ಯಾವತ್ತೂ ನದಿ ಮೂಲ, ಋಷಿ, ಮೂಲ, ಹೆಣ್ಣಿನ ಮೂಲ ಹುಡುಕಬಾರದು - ಸಿ.ಟಿ.ರವಿ, ಸಚಿವ
ನಿಮ್ಮ ಸಂಪತ್ತಿನ ಮೂಲವನ್ನು ಹುಡುಕಬಹುದೇ?


ವಿರೋಧ ಪಕ್ಷಗಳು ಗಲಭೆಗಳನ್ನು ಪ್ರಚೋದಿಸಲು ಮತ್ತು ಅಭಿವೃದ್ಧಿಗೆ ಅಡ್ಡಿಯುಂಟು ಮಾಡಲು ಪಿತೂರಿಗಳಲ್ಲಿ ತೊಡಗಿವೆ - ಯೋಗಿ ಆದಿತ್ಯನಾಥ್, ಉ.ಪ್ರ. ಮುಖ್ಯಮಂತ್ರಿ
ಪ್ರಚೋದಿಸಿ ಮತ್ತು ಅಡ್ಡಿಯುಂಟು ಮಾಡಿಯೇ ತಾನೆ ತಾವು ಮುಖ್ಯಮಂತ್ರಿಯಾಗಿರುವುದು?


ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಪಕ್ಷವನ್ನು ಮುಗಿಸಲು ಹೊರಟಿವೆ - ಎಚ್.ಡಿ.ರೇವಣ್ಣ ,ಮಾಜಿ ಸಚಿವ
ಸ್ವತಃ ಮುಗಿಯುತ್ತಿರುವವರನ್ನು ಇನ್ನೊಬ್ಬರು ಮುಗಿಸುವ ಅಗತ್ಯವಿದೆಯೆ?


ಸಿಬಿಐ ದಾಳಿಗಳು ನಡೆದಾಗಲೆಲ್ಲ ರಾಜಕೀಯ ಪ್ರೇರಿತ ಎನ್ನುವುದು ಸಾಮಾನ್ಯವಾಗಿದೆ -ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಸಿಬಿಐ ಮೇಲೆ ನಡೆಯುತ್ತಿರುವ ದಾಳಿ ಯಾವುದರ ಪ್ರೇರಿತ?


ಸಿಬಿಐ ಬಿಜೆಪಿಯ ಬೀದಿ ನಾಯಿ - ದಿನೇಶ್ ಗುಂಡೂರಾವ್, ಕಾಂಗ್ರೆಸ್ ಮುಖಂಡ
ಯುಪಿಎ ಸರಕಾರದ ಕಾಲದಲ್ಲಿ ಅದು ಹೈಬ್ರಿಡ್ ತಳಿಯ ನಾಯಿಯಾಗಿತ್ತೇ? 


ಭಾರತೀಯ ಜೀವನ ದೃಷ್ಟಿಕೋನಕ್ಕೆ ಇಡೀ ವಿಶ್ವವೇ ಬೆರಗುಗೊಂಡಿದೆ -ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಈ ದೇಶದ ಬಡವರು ಊಟವಿಲ್ಲದೆ ಜೀವನ ನಡೆಸುತ್ತಿರುವ ಪರಿಗೆ ಇರಬಹುದು.


ಭಯೋತ್ಪಾದಕ ದಾಳಿಗಳು ನರೇಂದ್ರ ಮೋದಿ ಆಡಳಿತದಲ್ಲಿ ಹಳೆಯ ಸಂಗತಿಯಂತಾಗಿದೆ - ವಿಜಯ ರೂಪಾನಿ, ಗುಜರಾತ್ ಮುಖ್ಯಮಂತ್ರಿ
ಅದನ್ನೀಗ ಸರಕಾರ ನೋಟು ನಿಷೇಧ, ಜಿಎಸ್‌ಟಿ, ಲಾಕ್‌ಡೌನ್ ಹೆಸರಿನಲ್ಲಿ ಸ್ವತಃ ಆಯೋಜಿಸುತ್ತಿದೆ.


ನಮ್ಮ ತ್ಯಾಗದ ಫಲವಾಗಿ ಯಡಿಯೂರಪ್ಪ ಇಂದು ಮುಖ್ಯ ಮಂತ್ರಿಯಾಗಿದ್ದಾರೆ - ಎಂ.ಟಿ.ಬಿ. ನಾಗರಾಜ್, ವಿ.ಪ. ಸದಸ್ಯ
ಮಾನ ಮರ್ಯಾದೆಗಳನ್ನು ತ್ಯಾಗ ಮಾಡುವುದೆಂದರೆ ಸಣ್ಣ ವಿಷಯವಲ್ಲ ಬಿಡಿ.


ಈ ದೇಶದ ಆತ್ಮವಾದ ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಯಾವ ತ್ಯಾಗಕ್ಕೂ ಸಿದ್ಧ - ವಿನಯ್ ಕುಮಾರ್ ಸೊರಕೆ, ಮಾಜಿ ಸಚಿವ
ಸದ್ಯಕ್ಕೆ ರಾಜಕೀಯದಿಂದ ನಿವೃತ್ತಿಯನ್ನು ಘೋಷಿಸುವುದೇ ನೀವು ಮಾಡಬಹುದಾದ ದೊಡ್ಡ ತ್ಯಾಗ.


ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯನ್ನು ದಿಢೀರ್ ಬದಲಾವಣೆ ಮಾಡಿರುವುದರಿಂದ ಜನರಿಗೆ ನನ್ನ ಬಗ್ಗೆ ತಪ್ಪು ಸಂದೇಶ ರವಾನೆಯಾಗುತ್ತದೆ- ಶ್ರೀರಾಮುಲು, ಸಚಿವ

ನೀವು ವರ್ಗಾವಣೆಗೊಂಡಿರುವ ಖಾತೆಯ ಕುರಿತಂತೆ ಜನರಿಗೆ ಆತಂಕ ಶುರುವಾಗಿದೆ.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...