ಬಂಡೆಯಾಗಲು ಇಚ್ಛಿಸುವುದಿಲ್ಲ, ಸರಕಾರದ ವಿರುದ್ಧ ಜನ ಬೀಸುವ ಕಲ್ಲಾಗುತ್ತೇನೆ: ಡಿ.ಕೆ.ಶಿವಕುಮಾರ್

Update: 2020-10-23 13:35 GMT

ಬೆಂಗಳೂರು, ಅ.23: ನಾನು ಬಂಡೆಯಾಗಲು ಇಚ್ಛಿಸುವುದಿಲ್ಲ. ರಾಜ್ಯದ ಜನ ವಿಧಾನಸೌಧಕ್ಕೆ ಹತ್ತಿಕೊಂಡು ಹೋಗುವ ಮೆಟ್ಟಿಲಿನ ಚಪ್ಪಡಿ ಕಲ್ಲಾಗುವ ಆಸೆ. ಈ ಜನ ವಿರೋಧಿ ಬಿಜೆಪಿ ಸರಕಾರದ ವಿರುದ್ಧ ಜನ ಬೀಸುವ ಕಲ್ಲಾಗುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ

ಶುಕ್ರವಾರ ಆರ್.ಆರ್.ನಗರದ ಐಡಿಯಲ್ ಹೋಮ್ಸ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರವಾಗಿ ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿದ ವೇಳೆ ಅವರು ಮಾತನಾಡಿದರು.

ಕೆಲವರು ಬಂಡೆನ ಡೈನಮೇಟ್ ಇಟ್ಟು ಪುಡಿ ಪುಡಿ ಮಾಡುತ್ತೇವೆ ಅಂತಿದ್ದಾರೆ. ಬಂಡೆ ಪುಡಿಯಾಗಿ ಜಲ್ಲಿಕಲ್ಲಾದರೆ ಮನೆಕಟ್ಟಲು, ದೇವರ ಗುಡಿಯ ಮುಂದೆ ಗರಡುಗಂಭವಾಗಿ ನಿಲ್ಲಲು, ವಿಗ್ರಹವಾಗಿ, ಚಪ್ಪಡಿ ಕಲ್ಲಾಗಿ ಜನರಿಗೆ ಉಪಯೋಗಲು ಸಾಧ್ಯ. ಮಿತಿ ಮೀರಿದರೆ, ಈ ಜನ ವಿರೋಧಿ ಸರಕಾರಕ್ಕೆ ಜನ ಬೀಸುವ ಕಲ್ಲಾಗುವೆ. ಹೀಗಾಗಿ ನಾನು ಕೇವಲ ಬಂಡೆಯಾಗಲು ಇಚ್ಛಿಸುವುದಿಲ್ಲ. ಜನರಿಗೆ ನನ್ನಿಂದ ಉಪಯೋಗವಾದರೆ ಸಾಕು ಎಂದು ಅವರು ತಿರುಗೇಟು ನೀಡಿದರು.

ನಾವು ಬೀಜ ಬಿತ್ತುವಾಗ ಅದು ಮರವಾಗಿ ಹಣ್ಣಾದರೂ ನೀಡಲಿ, ನೆರಳಾದರು ನೀಡಲಿ ಎಂಬ ಒಳ್ಳೆ ಭಾವನೆಯಿಂದ ಬಿತ್ತುತ್ತೇವೆ. ಎಲ್ಲ ಬೀಜಗಳು ಹಣ್ಣನ್ನೆ ನೀಡಬೇಕು ಎಂದು ಬಯಸುವುದಿಲ್ಲ. ಕೆಲವೊಮ್ಮೆ ಒಬ್ಬರು ಮರ ಬೆಳೆಸುವವರೆ, ಮತ್ತೊಬ್ಬರು ಹಣ್ಣು ತಿನ್ನುತ್ತಾರೆ. ಯಾರೋ ಕಟ್ಟಿದ ಹುತ್ತದಲ್ಲಿ ವಿಷ ಸರ್ಪ ಬಂದು ಸೇರುತ್ತದೆ. ಇದು ಪ್ರಕೃತಿ ನಿಯಮ ಎಂದು ಶಿವಕುಮಾರ್ ಹೇಳಿದರು.

ನಮ್ಮ ರವಿ ಪತ್ನಿ ಕುಸುಮಾ. ಅವರ ಕುಟುಂಬ ನನಗೆ ಮುಂಚೆಯಿಂದಲೂ ಗೊತ್ತಿದೆ. ಪಾಪ ಆತ ಯಾವುದೋ ಕಾರಣಕ್ಕೆ ಹೇಡಿತನ ತೋರಿಬಿಟ್ಟ. ಆತ ಯಾವುದೇ ಪರಿಸ್ಥಿತಿ ಇದ್ದರೂ ಧೈರ್ಯದಿಂದ ಎದುರಿಸಿ ತನ್ನ ತಂದೆ-ತಾಯಿ, ಕಟ್ಟಿಕೊಂಡ ಹೆಂಡತಿಯನ್ನು ನೋಡಿಕೊಳ್ಳಬೇಕಿತ್ತು. ನಮ್ಮ ಸಮಾಜ ಅವರನ್ನು ಎಷ್ಟು ಪ್ರೀತಿ, ಗೌರವದಿಂದ ನೋಡುತ್ತಿತ್ತು ಎಂದು ಅವರು ತಿಳಿಸಿದರು. 

ಆದರೆ ನಷ್ಟ ಆಗಿದ್ದು ಯಾರಿಗೆ? ಆತನ ಸಾವಿಗೆ ಅನೇಕರು ಕೊಲೆಯಾಯ್ತು ಅಂತಾ ಧರಣಿ ಮಾಡಿದ್ದನ್ನು ನೋಡಿದ್ದೇವೆ. ನಮ್ಮದೇ ಸರಕಾರ ಸಿಬಿಐ ತನಿಖೆಗೆ ಕೊಟ್ಟೆವು. ಯಾವ ಯಾವ ಹೇಳಿಕೆ ಕೊಡಿಸಿದ್ದಾರೆ ಎಂಬ ದಾಖಲೆಯೂ ನಮ್ಮ ಬಳಿ ಇದೆ. ಆದರೆ ನಾವು ಈ ವಿಚಾರವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದು ಬೇಡ ಎಂದು ಶಿವಕುಮಾರ್ ಹೇಳಿದರು.

ನಮ್ಮ ಹೆಣ್ಣು ಮಗಳು ಎಲ್ಲರ ಸಾಕ್ಷಿಯಾಗಿ ತಾಳಿ ಕಟ್ಟಿಸಿಕೊಂಡು, ಸಪ್ತಪದಿ ತುಳಿದು ಮದುವೆಯಾಗಿದ್ದಾಳೆ. ಆದರೆ ನಮ್ಮ ಶೋಭಕ್ಕ ಚುನಾವಣೆ ವೇಳೆ ಗಂಡನ ಹೆಸರು ಬಳಸಿಕೊಳ್ಳಬೇಡ ಅಂತಾರಲ್ಲ ಹೇಗೆ ಸಾಧ್ಯ? ಶೋಭಕ್ಕ ನೀನು, ನಿನ್ನ ಮಗಳೋ, ತಂಗಿನೋ ಆ ಸ್ಥಾನದಲ್ಲಿ ಇದ್ದಿದ್ದರೆ ಏನು ಹೇಳುತ್ತಿದ್ದೆ ಎಂದು ಅವರು ಪ್ರಶ್ನಿಸಿದರು.

ರಾಜಕಾರಣಕ್ಕೆ ಸಂಪ್ರದಾಯವನ್ನೆ ತೆಗೆಯಬೇಕು ಎನ್ನುವುದು ಎಷ್ಟು ಸರಿ? ನಾನು ಕುಸುಮಾ ಅವರನ್ನು ಕೇಳಿದೆ ಮತದಾರ ಗುರುತಿನ ಚೀಟಿಯಲ್ಲಿ ಏನಂತಾ ಹೆಸರಿದೆ ಎಂದು. ಆರಂಭದಲ್ಲಿ ಕುಸುಮಾ ಎಚ್ ಅಂತಾ ಕೊಟ್ಟಿದ್ದು ಹಾಗೆ ಇದೆ ಎಂದರು. ಆದರೆ ಪಾಸ್ ಪೋರ್ಟ್ ಇತರ ದಾಖಲೆಯಲ್ಲಿ ಕುಸುಮಾ ಡಿ.ಕೆ ರವಿ ಅಂತಾನೆ ಇದೆ ಎಂದು ಅವರು ಹೇಳಿದರು.

ಹೆಣ್ಣು ಮಗಳು ನೊಂದಿದ್ದಾಳೆ. ಸಮಾಜ ಸೇವೆ ಮಾಡಲು ಮುಂದೆ ಬಂದಿದ್ದಾಳೆ. ನಾನು ಹಾಗೂ ಸುರೇಶ್ ಕೂತು ಮಾತನಾಡಿ ಈಕೆಯನ್ನು ಪಕ್ಷದ ಅಭ್ಯರ್ಥಿಯಾಗಿ ಮಾಡಲು ನಿರ್ಧರಿಸಿದೆವು. ಕಳೆದ ಎರಡು ಬಾರಿ ಈ ವ್ಯಕ್ತಿಯನ್ನು ಗೆಲ್ಲಿಸಲು ಶ್ರಮಪಟ್ಟಿದ್ದೆವು. ಆದರೆ ಈ ವ್ಯಕ್ತಿ ನಮ್ಮ ಮೂರು ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಿದ್ದನ್ನು ನಾವು ನೋಡಿದ್ದೇವೆ. ಆ ಸಮಯದಲ್ಲಿ ನಾನು ಸೇರಿದಂತೆ ಯಾರೂ ಆತನ ನೆರವಿಗೆ ಬರಲಿಲ್ಲ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರಾಗಿದ್ದ ಪರಮೇಶ್ವರ್ ಅವರ ಮನೆಗೆ ಹೋಗಿ ಈ ರೀತಿ ನಡೆಯುತ್ತಿದೆ, ಈತನಿಗೆ ಎಚ್ಚರಿಕೆ ನೀಡಬೇಕು ಎಂದು ಹೇಳಿದ್ದೆ ಎಂದು ಶಿವಕುಮಾರ್ ತಿಳಿಸಿದರು.

ಈಗ ನವರಾತ್ರಿ ನಡೆಯುತ್ತಿದೆ. ಈ ಕ್ಷೇತ್ರಕ್ಕೆ ರಕ್ಷಣೆ ನೀಡಲು ದುರ್ಗಾದೇವಿ, ರಾಜರಾಜೇಶ್ವರಿ ಆಶೀರ್ವಾದ ಬೇಕಿದೆ. ಈ ದೇವತೆಗಳ ಆಶೀರ್ವಾದದೊಂದಿಗೆ ನಾವು ಕ್ಷೇತ್ರದ ಹಿತ ಕಾಯಲು ನೊಂದು ಬೆಂದಿರುವ ಹೆಣ್ಣು ಮಗಳನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದೇವೆ ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News