ನಾಲೆಗೆ ಬಿದ್ದ ಕಾರು: ಓರ್ವ ಸಾವು, ನಾಲ್ವರು ಪ್ರಾಣಾಪಾಯದಿಂದ ಪಾರು
Update: 2020-10-27 17:57 GMT
ಪಾಂಡವಪುರ, ಅ.27: ವಿಶ್ವೇಶ್ವರಯ್ಯ ನಾಲೆಗೆ ಕಾರು ಬಿದ್ದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಬನಘಟ್ಟದ ಬಳಿ ರವಿವಾರ ತಡರಾತ್ರಿ ನಡೆದಿದೆ.
ನಾಗಮಂಗಲ ತಾಲೂಕಿನ ಅಲ್ಪಹಳ್ಳಿ ಗ್ರಾಮದ ನಿವಾಸಿ ಧರಣೇಂದ್ರ(35) ಎಂಬಾತ ಮೃತ ವ್ಯಕ್ತಿ. ಕಾರು ಚಾಲಕ ಹಾಳೇಗೌಡ, ದಿಲೀಪ್, ವಿಜಯಕುಮಾರ್, ನವೀನ್ ಕುಮಾರ್ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತ ಧರಣೇಂದ್ರ ಸೇರಿದಂತೆ ಐವರು ನಾಗಮಂಗಲ ತಾಲೂಕಿನ ಅಲ್ಪಹಳ್ಳಿ ಗ್ರಾಮದಿಂದ ಆಯುಧ ಪೂಜೆಗಾಗಿ ಮೈಸೂರಿನ ಸಂಬಂಧಿಕರ ಮನೆಗೆ ತೆರಳಿದ್ದರು. ರಾತ್ರಿ ಊಟ ಮುಗಿಸಿ ಕಾರಿನಲ್ಲಿ ಹಿಂತಿರುಗುವ ವೇಳೆ ಚಾಲಕನ ಅಜಾಗರೂಕತೆಯಿಂದ ವಿಸಿ ನಾಲೆಗೆ ಕಾರು ಪಲ್ಟಿ ಹೊಡೆದಿದೆ. ಈ ವೇಳೆ ಹಿಂಬದಿ ಕುಳಿತಿದ್ದ ಧರಣೇಂದ್ರ ಅವರು ಉಸಿರು ಗಟ್ಟಿ ಸ್ಥಳದಲ್ಲಿಯೇ ಸಾವಪ್ಪಿದರು ಎನ್ನಲಾಗಿದೆ.
ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.