ಸ್ವರಾಜ್, ಸ್ವಾವಲಂಬನೆಯ ಪರಿಕಲ್ಪನೆ ನೀಡಿದವರು ಗಾಂಧೀಜಿ: ಚಿಂತಕ ಡಾ.ಮುಜಾಫರ್ ಅಸ್ಸಾದಿ

Update: 2020-10-28 18:00 GMT

ಮೈಸೂರು,ಅ.28: ದೇಶಿ, ಸ್ವರಾಜ್, ಸ್ವಾವಲಂಬನೆಯ ಪರಿಕಲ್ಪನೆ ನೀಡಿದವರು ಗಾಂಧೀಜಿಯವರು. ಅವರ ಚಿಂತನೆಗಳು ಇಂದಿಗೂ ಪ್ರಸ್ತುವಾಗಿವೆ ಎಂದು ಚಿಂತಕ ಡಾ.ಮುಜಾಫರ್ ಅಸ್ಸಾದಿ ಹೇಳಿದರು. 

ಗಾಂಧಿ ಅಧ್ಯಯನ ಸಂಸ್ಥೆ ವತಿಯಿಂದ ಬುಧವಾರ ಆಯೋಜಿಸಿದ್ದ “ಗಾಂಧಿವಾದಿ ಆಲೋಚನೆಗಳು” ವಿಷಯ ಕುರಿತ ರಾಷ್ಟ್ರೀಯ ವೆಬಿನಾರ್ ಕಾರ್ಯಕ್ರಮದಲ್ಲಿ ಗಾಂಧೀಜಿ ಮತ್ತು 21 ಶತಮಾನ ವಿಷಯ ಕುರಿತು ಅವರು ಮಾತನಾಡಿದರು.

ದೇಶದ ಅಭಿವೃದ್ಧಿಗೆ ದೇಶಿ ವಸ್ತುಗಳ ಬಳಕೆ ಬಹಳ ಮಹತ್ವದ್ದಾಗಿದೆ. ಇದರಿಂದ ದೇಶಿಯ ವಸ್ತುಗಳ ಅಭಿವೃದ್ಧಿ ಹೆಚ್ಚಾಗುತ್ತದೆ ಎಂದು ಗಾಂಧೀಜಿ ಹೇಳಿದರು. ಸ್ವರಾಜ್ ಪರಿಕಲ್ಪನೆ ಜೈವಿಕ ವಸ್ತುಗಳನ್ನು ಉಳಿಸುವಂತಹದ್ದಾಗಿದೆ ಎಂದರು.

ಪರ್ಯಾಯ ಎಂಬುದು ಮಹತ್ವದ್ದಾಗಿದ್ದು, ಮತ್ತೊಬ್ಬರನ್ನು ಅವಲಂಬಿಸುವ ಬದಲು ದೇಶಿಯವಾಗಿ ಪರ್ಯಾಯವಾದುದನ್ನು ಹುಡುಕಿ ಅದನ್ನು ಅಭಿವೃದ್ಧಿಪಡಿಸುವುದಾಗಿದೆ. ಖಾದಿ ಬಟ್ಟೆ, ಬೀಜಗಳ ಸಂಸ್ಕರಣೆ ಹೀಗೆ ದೇಶದ ಅಭಿವೃದ್ಧಿಗೆ ದೇಶಿ ಕಲ್ಪನೆ ಸಹಕಾರಿಯಾಗಿದೆ ಎಂದು ಹೇಳಿದರು.

ಗಾಂಧಿ ಅವರ ಚಿಂತನೆಗಳು ಜನರನ್ನು ಎಷ್ಟರಮಟ್ಟಿಗೆ ತಲುಪಿದ್ದವು ಎಂದರೆ ಬಹುತೇಕ ಸಾಮಾಜಿಕ ಹೋರಾಟಗಾರರು ಗಾಂಧೀಜಿಯವರನ್ನು ನೋಡಿರಲಿಲ್ಲ. ಗಾಂಧೀಜಿ ಅವರ ವಿಚಾರಧಾರೆಗಳ ಮೂಲಕ ಗಾಂಧೀಜಿಯವರನ್ನು ಕಂಡುಕೊಂಡಿದ್ದರು ಎಂದು ವಿವರಿಸಿದರು.

ಚಳವಳಿ, ಘೋಷಣೆಗಳು, ಅಭಿವೃದ್ಧಿ ಹೀಗೆ ಎಲ್ಲಾ ವಿಚಾರಗಳಲ್ಲಿ ಗಾಂಧೀಜಿ ಅವರ ವಿಚಾರಧಾರೆಗಳನ್ನು ಕಾಣಬಹುದು. ರಂಗಕರ್ಮಿ ಪ್ರಸನ್ನ ಅವರ ಯಂತ್ರಗಳ ಕಳಚಿ ಪುಸ್ತಕವು ಗಾಂಧೀಜಿಯವರ ವಿಚಾರಧಾರೆಗಳನ್ನು ಬಿತ್ತುತ್ತದೆ. ಯಂತ್ರಗಳ ಮೋಹದಿಂದ ಬಿಡುಗಡೆಯಾಗಿ, ಪರ್ಯಾಯ ಮಾರ್ಗ ಕಂಡುಕೊಳ್ಳಿ ಎಂಬುದಾಗಿದೆ. ಯಂತ್ರಗಳ ಮೇಲಿನ ಮೋಹವು ಮೌಲ್ಯಗಳನ್ನು ನಾಶಪಡಿಸುತ್ತದೆ ಎಂದು ತಿಳಿಸಿದರು.

ಗಾಂಧಿ ಮತ್ತು ಯುವಕರು ವಿಷಯ ಕುರಿತು ಅರಸೀಕೆರೆ ಕಸ್ತೂರಬಾ ಗಾಂಧಿ ಟ್ರಸ್ಟ್ ಅಧ್ಯಕ್ಷ ಪ್ರೊ.ಜಿ.ಬಿ.ಶಿವರಾಜು ಮಾತನಾಡಿದರು. ಗಾಂಧಿ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News