ತಾಯಿಯನ್ನು ನಿಂದಿಸಿದ್ದಕ್ಕೆ ವೃದ್ಧನ ಹತ್ಯೆಗೈದ ಯುವಕ

Update: 2020-10-29 13:41 GMT

ಮಂಡ್ಯ, ಅ.29: ಜಗಳದ ವೇಳೆ ತನ್ನ ತಾಯಿಯನ್ನು ನಿಂದಿಸಿದ ಪಕ್ಕದ ಮನೆಯ ವೃದ್ಧನನ್ನು ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಗ್ರಾಮದ ಚಿಕ್ಕವೀರಯ್ಯ(72) ಕೊಲೆಯಾದ ವೃದ್ಧನಾಗಿದ್ದು, ಹತ್ಯೆ ಮಾಡಿದ ಮಹೇಶ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿಕ್ಕವೀರಯ್ಯ ಮತ್ತು ಮಹೇಶ ಅವರ ಮನೆಗಳು ಅಕ್ಕಪಕ್ಕದಲ್ಲಿದ್ದು, ಈ ಕುಟುಂಬಗಳ ನಡುವೆ ಆಗಾಗ್ಗೆ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆಗಳು ನಡೆಯುತ್ತಿತ್ತೆನ್ನಲಾಗಿದೆ. ಬುಧವಾರ ತಡರಾತ್ರಿ ಚಿಕ್ಕವೀರಯ್ಯ ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು ಮಹೇಶನ ತಾಯಿಯನ್ನು ನಿಂದಿಸಿದ್ದಾರೆ ಎಂದು ತಿಳಿದು ಬಂದಿದೆ.

ಚಿಕ್ಕವೀರಯ್ಯ ಜಗಳ ತೆಗೆದು ನಿಂದಿಸಿದ ವಿಚಾರವನ್ನು ಮನೆಗೆ ಬಂದ ಮಗ ಮಹೇಶನಿಗೆ ತಾಯಿ ತಿಳಿಸಿದ್ದು, ಇದರಿಂದ ಕುಪಿತಗೊಂಡ ಮಹೇಶ, ಚಿಕ್ಕವೀರಯ್ಯರ ಮನೆಗೆ ತೆರಳಿ ಅವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ಘಟನೆಯಿಂದಾಗಿ ಕುಸಿದು ಬಿದ್ದ ಚಿಕ್ಕವೀರಯ್ಯರನ್ನು ಆತನ ಕುಟುಂಬದವರು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗಮಧ್ಯೆ ಸಾವನ್ನಪ್ಪಿದ್ದು, ಶಿವಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News